ರೋಹಿತ್ ವೇಮುಲ ಕಾಯ್ದೆಯ ಕರಡನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಲ್ಲಿ ಹಾಗು ಜಾರಿ ಮಾಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನʼವು ತೀವ್ರ ಕಳವಳ ವ್ಯಕ್ತಪಡಿಸುತ್ತದೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯೆ ಪ್ರವೇಶಿಸಿ, ಕೊಟ್ಟ ಮಾತಿನಂತೆ ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೊಳಿಸುವಂತೆ ಸೂಚಿಸಬೇಕು ಹಾಗು ಈ ಬಜೆಟ್ ಅಧಿವೇಶನದಲ್ಲಿ ಘೋಷಿಸಬೇಕು. ಸಾರ್ವಜನಿಕ ಸಮಾಲೋಚನೆಗಾಗಿ ರೋಹಿತ್ ವೇಮುಲ ಕಾಯ್ದೆಯ ಕರಡನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ವಿಧಾನಸಭೆಯಲ್ಲಿ ಇದನ್ನು ಮಂಡಿಸಲು ಮತ್ತು ಅಂಗೀಕರಿಸಲು ಸ್ಪಷ್ಟವಾದ ವೇಳಾಪಟ್ಟಿಯನ್ನು ಘೋಷಿಸಬೇಕು ಮತ್ತು ರೋಹಿತ್ ವೇಮುಲಾ ಕಾಯ್ದೆಯನ್ನು ಶಾಸನಬದ್ಧವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗಳು ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳಿಗೆ, ಅವರು ಮೀಸಲಾತಿಯ ಮೂಲಕ ತಮ್ಮ ಮೂಲಭೂತ ಸಮಾನತೆಯ ಹಕ್ಕನ್ನು ಬಳಸಿದ “ಅಪರಾಧಕ್ಕೆ” ಶಿಕ್ಷೆ ವಿಧಿಸುವಂತೆ, ಗಲ್ಲುಗಂಬಗಳಾಗಿ ಮಾರ್ಪಟ್ಟಿವೆ. ಇಂದಿಗೂ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಗೌರವ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವದ ಮೇಲೆ, ಉನ್ನತ ಶಿಕ್ಷಣದ ಸಂಸ್ಥೆಗಳಿಂದಲೂ ಹಾಗೂ ಸಹಪಾಠಿಗಳಿಂದಲೂ ದಾಳಿಗಳಾಗುತ್ತಿವೆ. ಇದರ ಪರಿಣಾಮವಾಗಿ ಸಾವಿರಾರು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಕೇಸರಿೀಕರಣದ ಪ್ರಭಾವ ತಾರತಮ್ಯವೇ ಜೀವಾಳವಾದ ಬ್ರಾಹ್ಮಣ್ಯದ ಬೇರುಗಳನ್ನು ಇನ್ನಷ್ಟು ಬಲಗೊಳಿಸುತ್ತಿದೆ. ಇದರಿಂದ ಪಠ್ಯಕ್ರಮ ಮತ್ತು ಬೋಧನ ವಿಧಾನಗಳಲ್ಲಿ ಧರ್ಮನಿರಪೇಕ್ಷ ಮೌಲ್ಯಗಳು ಮತ್ತು ವೈಜ್ಞಾನಿಕ ಮನೋಭಾವಗಳು ಕುಂಟಿತಗೊಳ್ಳುತ್ತಿವೆ. ನಾವು ಈ ಹಿನ್ನೆಲೆಯಲ್ಲಿ ಸಮತೆಯ ಮೌಲ್ಯಗಳ ಕಡೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯ ಎದುರಾಗಿದೆ. ಇದರೊಂದಿಗೆ, ಎನ್ಇಪಿ, ಎನ್ಇಇಟಿ, ಸಿಯುಇಟಿ ಹಾಗೂ 2025ರ ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ (ವಿಬಿಎಸ್ಎ) ಮಸೂದೆ ಮೂಲಕ ಯುಜಿಸಿ ವ್ಯವಸ್ಥೆಯನ್ನು ವಿಲೀನಗೊಳಿಸುವ ಇತ್ತೀಚಿನ ಪ್ರಯತ್ನ—ಇವೆಲ್ಲವು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅವರ ಜಾತಿಯ ಆಧಾರದ ಮೇಲೆ ನಿರ್ಧರಿಸುವ ಚೌಕಟ್ಟನ್ನು ನಿರ್ಮಿಸಿವೆ. ಇಂತಹ ಸಂದರ್ಭದಲ್ಲಿ ಪ್ರಸ್ತುತ ಕಾನೂನುಗಳು, ವಿಶೇಷವಾಗಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಈ ಸಂದರ್ಭದಲ್ಲಿ ಕರ್ನಾಟಕದ ನಾಗರಿಕ ಸಮಾಜದ ಸದಸ್ಯರು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು, ವಕೀಲರು ಮತ್ತು ಜಾತಿ ವಿರೋಧಿ ಹೋರಾಟಗಾರರ ಒಕ್ಕೂಟವಾದ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನʼವು, ದೇಶದಾದ್ಯಂತ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಶಿಕ್ಷಣ ಡ್ರಾಪ್ ಔಟ್ ಮತ್ತು ಆತ್ಮಹತ್ಯೆಗಳ ಹಿನ್ನೆಲೆ 2024ರ ಜುಲೈನಲ್ಲಿ ಪ್ರಾರಂಭವಾಯಿತು. ಇಂದಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ಕಿರುಕುಳ ಮತ್ತು ಭೇದಭಾವದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು, ನಮ್ಮ ಆಂದೋಲನವು ರಾಜ್ಯದ ವಿವಿಧ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಸಮಾಲೋಚನೆಗಳನ್ನು ನಡೆಸಿತು. ಈ ಪ್ರಕ್ರಿಯೆಯಲ್ಲಿ, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಪ್ರತಿದಿನ ಅನುಭವಿಸುವ ನೇರ ಮತ್ತು ಪರೋಕ್ಷ ಕಿರುಕುಳಗಳ ವಿವಿಧ ರೂಪಗಳ ಗಂಭೀರ ಸ್ವರೂಪಗಳನ್ನು ತಿಳಿದು ನಾವು ಬೆಚ್ಚಿಬಿದ್ದೆವು.
ಕಾಂಗ್ರೆಸ್ ಪಕ್ಷವು 2024 ಚುನಾವಣಾ ಪೂರ್ವದಲ್ಲಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೊಳಿಸುವ ಭರವಸೆಯನ್ನು ನೀಡಿತ್ತು. ಏಪ್ರಿಲ್ 2025 ರಲ್ಲಿ, ಶ್ರೀ ರಾಹುಲ್ ಗಾಂಧಿಯವರ ಕರೆಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ಯನ್ನು ಜಾರಿಗೆ ತರುವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಈ ಭರವಸೆಯು ಉನ್ನತ ಶಿಕ್ಷಣದಲ್ಲಿ ಸಾಂಸ್ಥಿಕ ತಾರತಮ್ಯವನ್ನು ಎದುರಿಸುತ್ತಿರುವ ಲಕ್ಷಾಂತರ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಗಳಲ್ಲಿ ಸಮಾನ ಬದುಕಿನ ಹೊಸ ಭರವಸೆಯನ್ನು ಮೂಡಿಸಿತ್ತು.
ರಾಜ್ಯಾದ್ಯಂತ ಎಸ್ಸಿ/ಎಸ್ಟಿ (SC/ST) ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಕರು ಮತ್ತು ಕಾನೂನು ತಜ್ಞರೊಂದಿಗೆ ಜನಾಂದೋಲನ ತಂಡವು ಎರಡು ವರ್ಷ ಕಾಲ ಸಮಾಲೋಚನೆ ನಡೆಸಿದ ನಂತರ, ಅಭಿಯಾನವು ಏಪ್ರಿಲ್ 2025 ರಲ್ಲಿ ಮಾದರಿ ವಿಧೇಯಕದ ಕರಡನ್ನು ಸಿದ್ಧಪಡಿಸಿತು.
ಈ ಮಾದರಿ ವಿಧೇಯಕವನ್ನು ಡಿಸೆಂಬರ್ 2025 ರಲ್ಲಿ ಮಾನ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲಿಸಲಾಯಿತು. ನಂತರ ಡಿಸೆಂಬರ್ ತಿಂಗಳಲ್ಲೇ ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಹಾಗು ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್ ಅವರೊಂದಿಗೆ ಸಮಾಲೋಚನೆ ನಡೆಸಲಾಯಿತು. ಸರ್ಕಾರವು ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ ಈ ಮಾದರಿ ವಿಧೇಯಕವನ್ನು ಒಪ್ಪಿಕೊಂಡಿರುವುದಾಗಿ ಆಂದೋಲನದ ಸದಸ್ಯರಿಗೆ ತಿಳಿಸಿದರು ಅದನ್ನು ನಾವು ಸ್ವಾಗತಿಸಿದ್ದೆವು.
17 ಜನವರಿ 2026 ರಂದು, ಕರ್ನಾಟಕ ಸರ್ಕಾರವು ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ರಾಹುಲ್ ಗಾಂಧಿ ಸಾರ್ವಜನಿಕವಾಗಿ ತಿಳಿಸಿದ್ದರು. ಆದರೆ, ಇದುವರೆಗೆ ಯಾವುದೇ ಕರಡನ್ನು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಿಲ್ಲ, ಅಥವಾ ಈ ಕಾಯ್ದೆಯನ್ನು ಜಾರಿಮಾಡಲು ಸ್ಪಷ್ಠ ವೇಳಾಪಟ್ಟಿಯನ್ನು ಘೋಷಿಸಿಲ್ಲ. ಈ ವಿಳಂಬವು ರಾಜ್ಯಾದ್ಯಂತ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.
ಉನ್ನತ ಶಿಕ್ಷಣದಲ್ಲಿನ ರಚನಾತ್ಮಕ ಜಾತಿ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು 2026ರ ಯುಜಿಸಿ (UGC) ಈಕ್ವಿಟಿ ನಿಯಮಗಳು ಸೇರಿದಂತೆ ಅಸ್ತಿತ್ವದಲ್ಲಿರುವ ನಿಯಂತ್ರಣ ಕ್ರಮಗಳು ಸಾಕಾಗುವುದಿಲ್ಲ ಎಂದು ಆಂದೋಲನವು ಪುನರುಚ್ಚರಿಸುತ್ತದೆ. ಪ್ರತ್ಯೇಕ ‘ರೋಹಿತ್ ವೇಮುಲ ಕಾಯ್ದೆ’ ತುರ್ತಾಗಿ ಜಾರಿಯಾಗಬೇಕಾಗಿದೆ.
ಆದ್ದರಿಂದ ಕರ್ನಾಟಕ ಸರ್ಕಾರ ಸಂವಿಧಾನದ ಮೇಲೆ ಶಪಥ ಮಾಡುವ ಕಾಂಗ್ರೆಸ್ ಪಕ್ಷವು, ನಮ್ಮ ಸಂವಿಧಾನದ ಮೌಲ್ಯಗಳನ್ನು ಸಾಕಾರಗೊಳಿಸುವ ಕ್ರಮಗಳಿಗೆ ತನ್ನನ್ನು ತಾನು ಬದ್ಧಗೊಳಿಸಬೇಕು. ರೋಹಿತ್ ವೇಮುಲ ಕಾಯ್ದೆಯ ಜಾರಿಯು ಕರ್ನಾಟಕದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಘನತೆ, ಸಮಾನತೆ ಮತ್ತು ನ್ಯಾಯವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಸಂಘಟನೆ ಹೇಳಿದೆ.





