ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಸಾಮೂಹಿಕ ಮತ್ತು ಅಕ್ರಮವಾಗಿ ಹೂತುಹಾಕಿದ್ದ ಪ್ರಕರಣದ ಸಾಕ್ಷಿ-ದೂರುದಾರ ಸಿ.ಎನ್ ಚಿನ್ನಯ್ಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣದಲ್ಲಿ ಸುಳ್ಳು ಸಾಕ್ಷಗಳನ್ನು ನೀಡಿದ್ದಾರೆಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
ಸುಮಾರು ವರ್ಷಗಳ ಹಿಂದೆ ಹಲವು ಮೃತದೇಹಗಳನ್ನು ನಾನೇ ಹೂತುಹಾಕಿದ್ದೇನೆ. ನನಗೆ ಧರ್ಮಸ್ಥಳ ದೇವಾಲಯಕ್ಕೆ ಸಂಬಂಧಿಸಿದವರು ಕರೆ ಮಾಡಿ ಮೃತದೇಹಗಳನ್ನು ಹೂತುಹಾಕಲು ಸೂಚಿಸುತ್ತಿದ್ದರು. ಅವರ ಆದೇಶದಂತೆ ನಾನು ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ್ದೇನೆ. ಅವುಗಳ ಕಳೇಬರಗಳಿರುವ ಸ್ಥಳಗಳನ್ನು ತೋರಿಸುತ್ತೇನೆಂದು ಚಿನ್ನಯ್ಯ ಖುದ್ದು ನ್ಯಾಯಾಲಯದ ಎದುರು ದೂರು ದಾಖಲಿಸಿದ್ದರು.
ಅವರ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ಚಿನ್ನಯ್ಯ ತೋರಿಸಿದ ಹಲವು ಸ್ಥಳಗಳಲ್ಲಿ ಕಳೇಬರಗಳು ದೊರೆಯದಿದ್ದರೂ, ಕೆಲವೆಡೆ ಕೆಲವು ಕಳೇಬರಗಳು ದೊರೆತಿದ್ದವು. ಆದಾಗ್ಯೂ, ಸುಳ್ಳು ಸಾಕ್ಷ್ಯ ನೀಡಿದ್ದಾರೆಂಬ ಆರೋಪದ ಮೇಲೆ ಚಿನ್ನಯ್ಯರನ್ನು ಬಂಧಿಸಲಾಗಿತ್ತು. ಅವರನ್ನು ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಜಾಮೀನು ಕೋರಿ ಚಿನ್ನಯ್ಯ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ನವೆಂಬರ್ 24ರಂದು 1 ಲಕ್ಷ ರೂ. ಭದ್ರತಾ ಠೇವಣಿಯ ಷರತ್ತಿನ ಮೇಲೆ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಇದೀಗ, ಜಾಮೀನು ದೊರೆತು 24 ದಿನಗಳ ಬಳಿಕ, ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಚಿನ್ನಯ್ಯ ಅವರ ಪತ್ನಿ ಮಲ್ಲಿಕಾ ಮತ್ತು ಸಹೋದರಿ ಮಂಗಳೂರಿನಿಂದ ಶಿವಮೊಗ್ಗಗೆ ಬಂದಿದ್ದರು. ಚಿನ್ನಯ್ಯ ಅವರ ವಕೀಲರು ಜಾಮೀನು ಅರ್ಜಿ ದಾಖಲೆಗಳನ್ನು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ಅವರಿಗೆ ಸಲ್ಲಿಸಿದ್ದರು. ಅವರನ್ನು ಬಿಡುಗಡೆ ಮಾಡಲಾಗಿದೆ.




