ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ನೂರಾರು ಜನರ ನಾಪತ್ತೆ ಮತ್ತು ಅಸಹಜನ ಸಾವು ಪ್ರಕರಣ ಮತ್ತು ಸೌರ್ಜನ್ಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಪ್ರತಿಭಟನೆ ನಡೆಸಲು ಕರೆಕೊಟ್ಟಿದೆ. ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ ನಡೆದಿದ್ದ ದಿನವಾದ ಅಕ್ಟೋಬರ್ 9ರಂದು ರಾಜ್ಯದ 60 ಕಡೆಗಳಲ್ಲಿ ‘ನ್ಯಾಯಕ್ಕಾಗಿ ಜನಾಗ್ರಹ’ ಪ್ರತಿಭಟನೆಗಳು ನಡೆಯಲಿವೆ ಎಂದು ವೇದಿಕೆ ತಿಳಿಸಿದೆ.
2012ರ ಅಕ್ಟೋಬರ್ 9ರಂದು ಸೌಜನ್ಯ ಮೇಲೆ ದುರುಳರು ಅತ್ಯಾಚಾರ ಎಸಗಿ, ಕೊಲೆಗೈದಿದ್ದರು. ಆಕೆಯ ಮೃತದೇಹವು ಧರ್ಮಸ್ಥಳದ ಪ್ರಾಕೃತಿಕ ಕೇಂದ್ರದ ಎದುರಿನ ತೊರೆಯಲ್ಲಿ ಪತ್ತೆಯಾಗಿತ್ತು. ಘಟನೆ ನಡೆದ 13 ವರ್ಷಗಳು ಕಳೆದಿವೆ. ಆದಾಗ್ಯೂ, ನೈಜ ಅಪರಾಧಿಯ ಬಂಧನವಾಗಿಲ್ಲ, ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆತಿಲ್ಲ ಎಂದು ವೇದಿಕೆ ಹೇಳಿದೆ.
ಸೌಜನ್ಯ ಪ್ರಕರಣ ಮಾತ್ರವಲ್ಲದೆ, ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆ, ಭೂಕಬಳಿಕೆ, ದಲಿತರ ಮೀಸಲು ಭೂಮಿ ಕಬಳಿಕೆ, ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆ ಸೇರಿದಂತೆ ಹಲವಾರು ಕೃತ್ಯಗಳು ನಡೆದಿವೆ. ಈ ಎಲ್ಲ ಕೃತ್ಯಗಳನ್ನು ಖಂಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಅಕ್ಟೋಬರ್ 9ರಂದು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯಲಿದೆ ಎಂದು ವೇದಿಕೆ ವಿವರಿಸಿದೆ.
1980ರಿಂದ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ, ಭೂಕಬಳಿಕೆಯ ವಿರುದ್ದ ಹೋರಾಟ ನಡೆಯುತ್ತಿದೆ. ಆದರೆ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಒಂದೇ ದಿನದಲ್ಲಿ ಜನಾಗ್ರಹ ಸಭೆ, ಆಗ್ರಹ ಪತ್ರ ಸಲ್ಲಿಕೆ, ಸಮಾವೇಶ, ಪ್ರತಿಭಟನೆ, ಭಿತ್ತಿಪತ್ರ ಪ್ರದರ್ಶನಗಳು ನಡೆಯಲಿವೆ ಎಂದು ವೇದಿಕೆ ತಿಳಿಸಿದೆ.




