ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಗೆ ಸೇರಿದ ಉಜಿರೆಯ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜು ಮತ್ತು ಆಸ್ಪತ್ರೆಗಳ ಆಶ್ರಯದಲ್ಲಿ 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಉದ್ಘಾಟನಾ ಸಮಾರಂಭ ನವೆಂಬರ್ 11ರಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜನೆಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭ ಉದ್ಘಾಟಿಸಿದರೆ, ಡಾ ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವವರು. ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್ ಮತ್ತು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಕಾರ್ಯಕ್ರಮ ವಿಧಾನಸೌಧದಲ್ಲಿ ಆಯೋಜನೆಗೊಂಡಿರುವುದು ಮತ್ತು ಅದರಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಧರ್ಮಸ್ಥಳದಲ್ಲಿ ಅಕ್ರಮವಾಗಿ ಹೂತು ಹಾಕಿರುವ ಶವಗಳ ಕುರಿತು ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸರ್ಕಾರದ ಮುಖ್ಯ ಕಚೇರಿ ವಿಧಾನಸೌಧದೊಳಗೆ ಧರ್ಮಸ್ಥಳದವರ ಕಾರ್ಯಕ್ರಮ ನಡೆಸುವ ಮತ್ತು ಅದಕ್ಕೆ ಖುದ್ದು ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಸ್ಪೀಕರ್ ಖಾದರ್ ಮತ್ತು ಸಚಿವರು ಭಾಗಿಯಾಗುವ ಮೂಲಕ ನ್ಯಾಯದ ನಿರೀಕ್ಷೆಯಲ್ಲಿರುವ ಸಂತ್ರಸ್ತ ಕುಟುಂಬಗಳಿಗೆ, ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ? ಎಂದು ಸಾಮಾಜಿಕ ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಪ್ರಶ್ನಿಸಿದ್ದಾರೆ.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ಅವರು, ”ಉಜಿರೆಯ ಪ್ರಕೃತಿ ಚಿಕಿತ್ಸಾಲಯದ ಎದುರಿನಿಂದ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿ ಸೌಜನ್ಯಳನ್ನು ಅಪಹರಿಸಲಾಗಿದೆ. ಆ ಗೇಟಿನ ಬಳಿಯ ಸಿಸಿಟಿವಿಯಲ್ಲಿ ಅಪಹರಣದ ಎಲ್ಲ ದುಷ್ಕೃತ್ಯಗಳು ರೆಕಾರ್ಡ್ ಆಗಿತ್ತು. ಆದರೆ, ಫೋಟೇಜ್ ನಾಶ ಮಾಡಲಾಗಿದೆ. ಸೌಜನ್ಯ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣಕ್ಕೂ ಈ ಕೇಂದ್ರಕ್ಕೂ ಹತ್ತಿರದ ಸಂಬಂಧವಿದೆ. ಈಗ ಧರ್ಮಸ್ಥಳ ಪ್ರಕರಣಗಳ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ. ಅದರ ಮಾಲಕರು ಬಂದು ಈ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಇದು ತನಿಖೆಯ ಪಾರದರ್ಶಕತೆ ಮತ್ತು ತನಿಖೆಯ ಘನತೆ ಗೌರವದ ಮೇಲೆ ಅನುಮಾನ ಬರುತ್ತಿದೆ. ಎರಡನೆಯದಾಗಿ ಪ್ರಕೃತಿ ಚಿಕಿತ್ಸಾ ಕೇಂದ್ರ ಇರುವ ಜಾಗವೇ ಅಕ್ರಮವಾಗಿ, ಸುಳ್ಳು ಹೇಳಿ ಕಬಳಿಸಲಾಗಿದೆ. ಪ್ರವಾಸಿಗರಿಗೆ ಉದ್ಯಾನವನ ನಿರ್ಮಿಸುವ ಭರವಸೆ ಕೊಟ್ಟು ಸರ್ಕಾರದಿಂದ ಭೂಮಿ ಪಡೆಯಲಾಗಿದೆ. ಸರ್ಕಾರವೇ ಕೊಟ್ಟ ಹಸಿ ಹಸಿ ದಾಖಲೆಗಳಿವೆ. ಇಂತಹ ಫ್ರಾಡ್ಸ್ಟರ್ಗಳನ್ನು ಕರೆದು ತಂದು ಸರ್ಕಾರ ಸನ್ಮಾನಿಸುವುದು, ಸರ್ಕಾರಕ್ಕೆ ಘನತೆ ಇದೆಯೇ” ಎಂದು ಅವರು ಪ್ರಶ್ನಿಸಿದ್ದಾರೆ.
“ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಟ್ಟಿದ್ದೇನೆ ಎಂದು ಧರ್ಮಸ್ಥಳದ ಸ್ವಚ್ಛತಾ ಕಾರ್ಮಿಕ ಚಿನ್ನಯ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ಶುರು ಮಾಡಿತ್ತು. ಆ ನಂತರ ಚಿನ್ನಯ್ಯ ತನ್ನ ಮಾತಿಗೆ ವಿರುದ್ಧ ಹೇಳಿಕೆ ಕೊಟ್ಟ ನಂತರ ಆ ತನಿಖೆಯೂ ಸಮರ್ಪಕವಾಗಿ ನಡೆಯುವ ಅನುಮಾನ ಕಾಡುತ್ತಿದೆ. ಇದೇ ಸಮಯದಲ್ಲಿ ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆಯಾಗಿ ಸಾವನ್ನಪ್ಪಿದ್ದ ವೇದವಲ್ಲಿ, ಪದ್ಮಲತಾ, ಸೌಜನ್ಯ ಹಾಗೂ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾರ ಕುಟುಂಬದವರು ಮರುತನಿಖೆಗೆ ಆಗ್ರಹಿಸಿ ಎಸ್ಐಟಿಗೆ ದೂರು ನೀಡಿದ್ದಾರೆ. ಹಲವಾರು ಮಹಿಳಾಪರ ಸಂಘಟನೆಗಳು ಸೇರಿ ಕೊಂದವರು ಯಾರು? ಆಂದೋಲನದ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಸಲ್ಲಿಕೆ ಮಾಡಿ ಸರ್ಕಾರದ ಆದೇಶಕ್ಕೆ ಕಾಯುತ್ತಿರುವಾಗ ಮುಖ್ಯಮಂತ್ರಿಗಳ ಈ ನಡೆ ಯಾವ ಸಂದೇಶ ಕೊಡುತ್ತಿದೆ. ಈ ನಾಡಿನ ನೊಂದ ಹೆಣ್ಣುಮಕ್ಕಳ ಪರ ಸರ್ಕಾರ ನಿಲ್ಲದೇ, ಉಳ್ಳವರ ಪರ ಎಂದು ತಿಳಿಯಬೇಕೇ? ಒಂದು ಕಡೆ ಮಹಿಳಾ ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಒತ್ತಾಯಿಸಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿವೆ. ಈ ಸಂದರ್ಭದಲ್ಲಿ ವಿಧಾನ ಸೌಧದಲ್ಲಿ ವೀರೇಂದ್ರ ಹೆಗ್ಗಡೆಯರ ಅಧ್ಯಕ್ಷತೆಯ ಕಾರ್ಯಕ್ರಮ ನಡೆಯುತ್ತಿರುವುದು, ಅದರಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ಭಾಗಿಯಾಗುತ್ತಿರುವುದು ಖಂಡಿತವಾಗಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ” ಎಂದು ಜನಶಕ್ತಿ ಕರ್ನಾಟಕದ ಸದಸ್ಯೆ ಗೌರಿ ಹೇಳಿದರು.
ಕಳೆದ ನಾಲ್ಕೈದು ತಿಂಗಳಿನಿಂದ ರಾಜ್ಯದ ಗಮನ ಧರ್ಮಸ್ಥಳದಲ್ಲಿ ನಡೆದಿದೆ ಎಂದು ಹೇಳಲಾದ ಹಲವಾರು ಅನುಮಾನಾಸ್ಪದ ಕೊಲೆ, ಅತ್ಯಾಚಾರ, ಭೂಹಗರಣಗಳ ಸುತ್ತ ನೆಟ್ಟಿದೆ. ಎಸ್ಐಟಿ ತನಿಖೆಯ ಬಗ್ಗೆ ಜನ ಸಾಮಾನ್ಯರೂ ಕುತೂಲಹದಿಂದ ಇದ್ದಾರೆ. ಎಸ್ಐಟಿ ತನಿಖೆ ಶುರುವಾದ ನಂತರ ಮುವತ್ತಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ. ಅವೆಲ್ಲವುಗಳ ತನಿಖೆಯನ್ನು ಎಸ್ಐಟಿ ನಡೆಸಬೇಕು ಎಂಬ ಒತ್ತಡ ಸರ್ಕಾರದ ಮೇಲೆ ಇದೆ.





