ಆಧುನೀಕತೆ ಪ್ರವೇಶವಾದರೂ ಸಂಪ್ರದಾಯವನ್ನು ಬಿಡಲಾರದ ಮಾದರಿಯಲ್ಲಿ ಇವತ್ತಿನ ಮಹಿಳಾ ಕಾದಂಬರಿಕಾರರು ಬರೆದದ್ದನ್ನು, ಬರೆಯುತ್ತಿರುವುದನ್ನು ಕಾಣುತ್ತೇವೆ ಎಂದು ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷೆ ಡಾ. ವಿನಯಾ ಒಕ್ಕುಂದ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಬಸು ಬೇವಿನಗಿಡದ ಅವರು ಅನುವಾದಿಸಿದ ವರ್ಜಿನಿಯಾ ವೂಲ್ಪ್ ಅವರ ‘ಲೈಟ್ ಹೌಸ್’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಲೈಟ್ ಹೌಸ್ ಕಾದಂಬರಿ, ನೂರು ವರ್ಷಗಳ ಹಿಂದೆ ರಚಿತವಾಗಿದ್ದರೂ ಕೂಡ ಇವತ್ತಿನ ಕಾಲ ಘಟ್ಟದಲ್ಲೂ ಮುಖಾಮುಖಿಯಾಗಿ ನಿಲ್ಲುತ್ತದೆ. ಸಹೃದಯರ ಮನಸ್ಸಿನ ಆಳಕ್ಕೆ ಪಾತ್ರಗಳು ಇಳಿಯುತ್ತವೆ. ಸಂಪ್ರದಾಯದಿAದ ಆಧುನೀಕತೆಯ ಕಡೆಗೆ ಚಲಿಸುವ ಮಹಿಳೆಯ ರೂಪಕಗಳು ಅಗಾಧವಾದ ಅರ್ಥವನ್ನು ಹೊರಸೂಸುತ್ತವೆ. ಹೆಣ್ಣು ಮೀನಿನ ಅತಿಯಾದ ಆಸೆಯಿಂದ ಇಡೀ ಕುಟುಂಬ ನಾಶವಾಗುವ ಸಂದರ್ಭವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಇಲ್ಲಿ ಬರುವ ಪಾತ್ರಗಳು ಸಾಮಾನ್ಯವಾದವುಗಳಲ್ಲ. ಎಲ್ಲವೂ ಸೃಜನಶೀಲ ಪಾತ್ರಗಳು ಎಂದು ಹೇಳಿದರು.
ಕೃತಿಯ ಕುರಿತು ಕವಯತ್ರಿ, ಪ್ರಾಧ್ಯಾಪಕಿ, ಡಾ. ಅನಸೂಯ ಕಾಂಬಳೆ ಮಾತನಾಡಿ, ಮಹಿಳಾ ಸಾಹಿತ್ಯದ ಅನುವಾದ ಆಗದೇ ಇರುವುದು ಖೇದದ ಸಂಗತಿ. ಬಸು ಬೇವಿನಗಿಡದ ಇದಕ್ಕೆ ಹೊರತಾಗಿ, ಇದನ್ನು ಅನುವಾದಿಸಿದ್ದು ಸಂತಸದ ಸಂಗತಿ. ‘ಲೈಟ್ ಹೌಸ್’ ಎಂಬುದು ಬೆಳಕಿನ ಸಂಕೇತ. ಬರುವ ಹಡಗಿಗೆ ದಾರಿ ತೋರಿಸುವಂತೆ, ಒಂದು ಕುಟುಂಬಕ್ಕೆ ಮಹಿಳೆ ಬೆಳಕಾಗಿ ಹೇಗೆ ನಿಲ್ಲುತ್ತಾಳೆ ಎಂಬುದರ ಸಂಕೇತವಾಗಿದೆ. ಆದರೆ ಇದಕ್ಕೆ ಗಂಡನಾದವನು ಹೇಗೆ ತಡೆಗೋಡೆಯಾಗಿ ವರ್ತಿಸುತ್ತಾನೆ ಎಂಬುದರ ಚಿತ್ರಣವಿದೆ. ನಿರೂದ್ಯೋಗದ ಸಮಸ್ಯೆ, ವರ್ಗ ವೈಷಮ್ಯದ ಚಿತ್ರಣವಿದೆ. ಯುದ್ಧ ಸಂದರ್ಭದಲ್ಲಿ ಯುದ್ಧ ಎನ್ನುವುದು ಅಧಿಕಾರದ ಅಭಿವ್ಯಕ್ತಿಯ ಭಾವವಾಗಿದೆ. ಕಾದಂಬರಿಯ ಅನುವಾದದ ಭಾಷೆ ಓದುಗರ ಮನವನ್ನು ಗೆಲ್ಲುವಲ್ಲಿ ಯಶಸ್ಸು ಕಾಣುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ ಧಾರವಾಡ | ರಂಗಭೂಮಿ; ಜೀವನ ಶಿಕ್ಷಣವನ್ನು ನೀಡುವ ಒಂದು ಉತ್ತಮ ಮಾಧ್ಯಮ: ಡಾ. ಈಶ್ವರ ಉಳ್ಳಾಗಡ್ಡಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾ. ಶಶಿಧರ ತೋಡಕರ ಮಾತನಾಡಿ, ಕಾದಂಬರಿ ಶತಮಾನದ ಹಿಂದೆ ರಚಿತಗೊಂಡಿದ್ದರೂ ಇದರ ವಸ್ತು, ಬರುವ ಪಾತ್ರಗಳು ಇವತ್ತಿನ ಕಾಲಕ್ಕೂ ಅನ್ವಯವಾಗುತ್ತವೆ. ಸಹೃದಯರೂ ಕೂಡ ಇದರಲ್ಲಿ ಪಾಲುದಾರ ಪಾತ್ರದಾರಿಯಾಗುತ್ತಾರೆ. ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿ ತನ್ನ ಸ್ವಾರ್ಥ ಹಾಗೂ ಸಮಯ ಸಾಧನೆಗಾಗಿ ಮಾರ್ಗದರ್ಶನದೊಂದಿಗೆ ವರ್ತಿಸುವ ಬಗೆ, ಆ ಕಾಲಕ್ಕೆ ಮಾತ್ರ ಸೀಮಿತವಾದದ್ದಲ್ಲ. ಇಂದಿಗೂ ಅಂತಹ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ ಎಂಬ ಹೇಳಿದರು.





