“ಚರ್ಚೆಯಾಗಬೇಕಾಗಿರುವುದು ಯಕ್ಷಗಾನ ಕ್ಷೇತ್ರದಲ್ಲಿನ ಸಲಿಂಗ ಕಾಮದ ಬಗ್ಗೆ ಅಲ್ಲ, ಚರ್ಚೆಯಾಗಬೇಕಾಗಿರುವುದು ಯಕ್ಷಗಾನದಲ್ಲಿ ಯಾಕೆ ಮಹಿಳಾ ಕಲಾವಿದರಿಲ್ಲ? ಯಾಕೆ ಪುರುಷರೇ ಸ್ತ್ರೀ ವೇಷ ಮಾಡುತ್ತಿದ್ದಾರೆ? ಯಾಕೆ ಅಲ್ಲಿ ಪಾತ್ರಗಳನ್ನು ನೀಡುವಾಗ ಜಾತಿ ನೋಡುತ್ತಾರೆ ಎಂಬ ವಿಷಯದ ಬಗ್ಗೆ” ಎಂದು ಹಿರಿಯ ಪತ್ರಕರ್ತ, ಬರಹಗಾರ, ಸಾಮಾಜಿಕ ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಇತ್ತೀಚೆಗೆ ಯಕ್ಷಗಾನ ಕ್ಷೇತ್ರದಲ್ಲಿನ ಸಲಿಂಗ ಕಾಮದ ಬಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆಯನ್ನೂ ನೀಡಿದ್ದರು. ಆದರೆ ಈ ಬಗ್ಗೆ ಯಕ್ಷಗಾನ ಕಲಾವಿದರೊಬ್ಬರು ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ದಿನೇಶ್ ಅಮಿನ್ ಮಟ್ಟು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ನಿಜವಾಗಿ ಯಾವ ವಿಚಾರದ ಬಗ್ಗೆ ಚರ್ಚೆಯಾಗಬೇಕಾಗಿರುವುದು ಎಂಬುದನ್ನು ಹೇಳಿದ್ದಾರೆ. ಅಮಿನ್ ಮಟ್ಟು ಅವರ ಫೇಸ್ಬುಕ್ ಪೋಸ್ಟ್ ಈ ಕೆಳಗಿನಂತಿದೆ:
ಇದನ್ನು ಓದಿದ್ದೀರಾ? ಡಾ.ಬಿಳಿಮಲೆ ಹೇಳಿಕೆ ಅಪರಾಧ ಹೇಗಾಗುತ್ತದೆ? ಕೇಸು ಯಾಕಾಗಿ!
ನಾಟಕ ಮತ್ತು ಚಲನಚಿತ್ರಗಳಲ್ಲಿ ಹೆಣ್ಣಿನ ಪಾತ್ರವನ್ನು ಹೆಣ್ಣುಗಳೇ ಮಾಡುವುದಾದರೆ ಯಕ್ಷಗಾನದಲ್ಲಿ ಯಾಕೆ ಮಾಡಬಾರದು ಎನ್ನುವ ಪ್ರಶ್ನೆಗೆ ಈಗಲೂ ಸರಿಯಾದ ಉತ್ತರ ಕೊಡುವವರು ಇಲ್ಲ. “ಯಕ್ಷಗಾನ ರಾತ್ರಿ ಹೊತ್ತು ನಡೆಯುತ್ತಿರುತ್ತದೆ, ಅಲ್ಲಿ ಪುರುಷ ಪಾತ್ರಧಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ” ಎನ್ನುವುದೆಲ್ಲವೂ ಒಂದು ಸಬೂಬು. ಈ ಆಕ್ಷೇಪಣೆ ಹೆಣ್ಣುಮಕ್ಕಳು ಪಾತ್ರಮಾಡುವ ನಾಟಕ-ಚಲನಚಿತ್ರಗಳಿಗೂ ಅನ್ವಯಿಸಬೇಕಲ್ವಾ?
ಹಾಗೆ ನೋಡಿದರೆ ಮಹಿಳಾ ಕಲಾವಿದರಿಗೆ ಯಕ್ಷಗಾನ ಕ್ಷೇತ್ರ ಸುರಕ್ಷಿತ. ಅಲ್ಲಿ ಸಿನೆಮಾಗಳಂತೆ ಬೆಡ್ ರೂಮ್ ಸೀನ್ಗಳಿರುವುದಿಲ್ಲ. ತುಂಡು ಬಟ್ಟೆಗಳನ್ನು ಧರಿಸಬೇಕಾಗಿಲ್ಲ, ಅಂಗಾಂಗ ಪ್ರದರ್ಶನಕ್ಕೆ ಅವಕಾಶಗಳೇ ಇಲ್ಲ. ಕನಿಷ್ಠ ನಾಟಕಗಳಲ್ಲಿರುವಂತೆ ಕೈಕೈ ಹಿಡಿದು, ಪರಸ್ಪರ ಅಪ್ಪಿಕೊಂಡು ಡಾನ್ಸ್ ಮಾಡುವುದೂ ಇರುವುದಿಲ್ಲ. ಹೆಣ್ಣು-ಗಂಡು ಪಾತ್ರಧಾರಿಗಳು ಒಬ್ಬರನ್ನೊಬ್ಬರು ಮುಟ್ಟುವ ಪ್ರಸಂಗವೇ ಅಪರೂಪ.
ನಿಜವಾದ ಕಾರಣವೆಂದರೆ ಯಕ್ಷಗಾನ ಕಟ್ಟಾ ಸಂಪ್ರದಾಯವಾದಿ ಕಲೆ, ಈಗಾಗಲೇ ಕೆಲವು ಯಕ್ಷಗಾನ ಕಲಾವಿದರು ಮತ್ತು ಅಭಿಮಾನಿಗಳು ಯಕ್ಷಗಾನ “ಗಂಡು ಕಲೆ” ಎಂದು ಹೇಳುತ್ತಿದ್ದಾರೆ. ಈ ಮನಸ್ಥಿತಿಯೇ ಯಕ್ಷಗಾನ ರಂಗದಿಂದ ಮಹಿಳೆಯರನ್ನು ದೂರ ಇಟ್ಟಿದೆ. ನನಗೆ ತಿಳಿದಂತೆ ಲೀಲಾ ಬೈಪಡಿತ್ತಾಯ ಅವರನ್ನು ಹೊರತುಪಡಿಸಿದರೆ ವೃತ್ತಿಪರ ಭಾಗವತಿಕೆಯಲ್ಲಿಯೂ ಮಹಿಳೆಯರ ಸಂಖ್ಯೆ ಕಡಿಮೆ. ಇತ್ತೀಚೆಗೆ ಬಹಳಷ್ಟು ಹೆಣ್ಣುಮಕ್ಕಳು ಹವ್ಯಾಸಿ ರೂಪದಲ್ಲಿ ಭಾಗವತಿಕೆ ನಡೆಸುತ್ತಾರೆ, ವೇಷಧಾರಣೆ ಇಲ್ಲ.
ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನದಲ್ಲಿ ಮಹಿಳೆಯರಿಗೆ ಅವಕಾಶ ಯಾಕಿಲ್ಲ ಎಂದು ಪ್ರಶ್ನಿಸಿ ಉದಯವಾಣಿಯ ಓದುಗರ ಓಲೆ ವಿಭಾಗಕ್ಕೆ ಪತ್ರ ಬರೆದಿದ್ದೆ. ಒಂದಷ್ಟು ದಿನ ಪರ-ವಿರುದ್ದದ ಚರ್ಚೆ ನಡೆದಿತ್ತು. ಆ ಪತ್ರಕ್ಕೆ ಕಾರಣ ನಾನು ಓದಿರುವ ಉಡುಪಿ ಜಿಲ್ಲೆಯ ಹೆಜಮಾಡಿ ಜ್ಯೂನಿಯರ್ ಕಾಲೇಜಿನಲ್ಲಿ ಶುರುವಾಗಿದ್ದ ಮಹಿಳಾ ಯಕ್ಷಗಾನ ತಂಡ. ಸ್ವತ: ಯಕ್ಷಗಾನ ಕಲಾವಿದರೂ ಆಗಿದ್ದ ದಿವಂಗತ ಎಂ.ಗೋವಿಂದರಾವ್ ಅವರು ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿ ಆ ತಂಡ ಕಟ್ಟಿದ್ದರು. ಆ ತಂಡದ ಬಗ್ಗೆ ದಿವಂಗತ ಸಂತೋಷ್ ಕುಮಾರ್ ಗುಲ್ವಾಡಿ ಅವರು ತರಂಗದಲ್ಲಿ ಲೇಖನವನ್ನೂ ಬರೆದಿದ್ದರು. ಅದರಲ್ಲಿ ಪಾತ್ರ ಮಾಡಿದ್ದ ವಿದ್ಯಾರ್ಥಿನಿಯರನ್ನು ಬೀದಿಗಳಲ್ಲಿ ‘ಭೀಮ’ ‘ದುರ್ಯೋದನ’ ಎಂದೆಲ್ಲ ಚುಡಾಯಿಸಲು ಶುರುಮಾಡಿದ ನಂತರ ಆ ತಂಡ ನಿಂತೇ ಹೋಯಿತು. ಈಗಲೂ ಅಂತಹ ತಂಡಗಳು ಅಲ್ಲಲ್ಲಿ ಪ್ರಯೋಗ ರೂಪದಲ್ಲಿ ಕೆಲಸ ಮಾಡಿ ಸುಸ್ತಾಗಿ ಮುಚ್ಚಿಹೋಗುತ್ತಿವೆ.
ಇದನ್ನು ಓದಿದ್ದೀರಾ? ಅಕಾಡೆಮಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷ, ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ
ಕನ್ನಡ,ಹಿಂದಿ, ತೆಲುಗು ಸಿನೆಮಾಗಳನ್ನು, ಸೀರಿಯಲ್ ಗಳನ್ನು ನೋಡಿದರೆ ಎಲ್ಲೆಲ್ಲೂ ರೈ, ಶೆಟ್ಟಿ, ರಾವ್,ಭಟ್ ಹೆಸರಿನ ನಟಿಯರನ್ನು ಕಾಣಬಹುದು. ಆದರೆ ಯಕ್ಷಗಾನದಲ್ಲಿ ಮಾತ್ರ ದಕ್ಷಿಣ ಕನ್ನಡದ ನಟಿಯರೇ ಇಲ್ಲ. ಯಾಕೆ? ಹೆಣ್ಣುಮಕ್ಕಳಿಗೆ ಆಸಕ್ತಿ ಇಲ್ಲ ಎನ್ನುವ ಹಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುವ ಎಳೆಯ ಪ್ರಾಯದ ಹೆಣ್ಣುಮಕ್ಕಳ ಯಕ್ಷಗಾನ ನೃತ್ಯದ ವಿಡಿಯೋಗಳೇ ಇದಕ್ಕೆ ಸಾಕ್ಷಿ. ಅವಕಾಶ ಇಲ್ಲ.
ಇದೇ ರೀತಿ ಯಕ್ಷಗಾನದಲ್ಲಿ ಜಾತಿ ಭೇದವೂ ಇದೆ. ಕೆಲವು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಮಂದರ್ತಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಲ್ಲಿ ಬಿಲ್ಲವರಿಗೆ ವೇಷ ಹಾಕಲು ಅವಕಾಶ ನಿರಾಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. 150 ವರ್ಷಗಳಷ್ಟು ಪ್ರಾಚೀನವಾದ ಈ ಮೇಳ ಕರಾವಳಿ ಕರ್ನಾಟಕದ ಎರಡನೇ ಪ್ರಾಚೀನ ಮೇಳ ಎಂದು ಹೇಳಲಾಗುತ್ತಿದೆ. ಈ ದೇವಸ್ಥಾನಕ್ಕೆ ಯಕ್ಷಗಾನ ಹರಕೆ ಆಟ ಆಡಿಸುವವರಲ್ಲಿ ಬಿಲ್ಲವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಆ ಜಾತಿಯ ಕಲಾವಿದರಿಗೆ ಮೇಳದಲ್ಲಿ ವೇಷ ಹಾಕಲು ಅವಕಾಶ ಇರಲಿಲ್ಲ. ಈ ತಾರತಮ್ಯದ ವಿರುದ್ದ ಮೊದಲು ಸಿಡಿದೆದ್ದವರು ಹಿರಿಯ ಯಕ್ಷ ಕಲಾವಿದ ಐರೋಡಿ ಗೋವಿಂದಪ್ಪನವರು.
ಅದರ ನಂತರ ಪ್ರತಿಭಟನೆಯ ಕಿಚ್ಚು ಜಿಲ್ಲೆಯಾದ್ಯಂತ ಹರಡಿತು, ಮಾಧ್ಯಮಗಳಲ್ಲಿ ಪರ-ವಿರೋಧದ ಚರ್ಚೆಯಾಗಿ ಕೊನೆಗೆ ಜಿಲ್ಲಾಧಿಕಾರಿಗಳ ಪಂಚಾಯಿತಿಕೆಯಲ್ಲಿ ಬಿಲ್ಲವ ಕಲಾವಿದರಿಗೆ ಅವಕಾಶ ನೀಡಲಾಯಿತು. ಕೊನೆಗೆ ಪೊಲೀಸರ ರಕ್ಷಣೆಯಲ್ಲಿ ಬಿಲ್ಲವರು ವೇಷಹಾಕಿ ಕುಣಿಯಬೇಕಾಯಿತು. ಯಕ್ಷಗಾನದಲ್ಲಿ ದೇವ-ದೇವತೆ, ರಾಕ್ಷಸ, ದೂತ-ವಿದೂಷಕ ಪಾತ್ರಗಳನ್ನು ಯಾವ ಜಾತಿಯವರು ಮಾಡಬೇಕೆನ್ನುವ ಅಲಿಖಿತ ನಿಯಮ ಇದೆ. ಈ ನಿಯಮ ಇತ್ತೀಚಿನ ದಿನಗಳಲ್ಲಿ ಸಡಿಲಗೊಂಡಿದ್ದರೂ ಸೂಕ್ಷ್ಮವಾಗಿ ನೋಡಿದರೆ ಕಾಣುತ್ತದೆ. ಕೇರಳದಲ್ಲಿ ಕಥಕ್ಕಳಿ ಕಲಾಪ್ರದರ್ಶನದಲ್ಲಿ ಅಲ್ಲಿನ ಈಳವರಿಗೆ ದೇವರ ಪಾತ್ರ ಮಾಡಲು ಅವಕಾಶ ನೀಡದಿರುವುದನ್ನು ನಾರಾಯಣ ಗುರುಗಳು ವಿರೋಧಿಸಿದ್ದರು.
ಯಕ್ಷಗಾನದಲ್ಲಿ ಸಲಿಂಗ ಕಾಮವೂ ಇದೆ ಎನ್ನುವುದು ಅವಮಾನವಾದರೆ ಇಷ್ಟು ವರ್ಷಗಳ ಕಾಲ ಯಕ್ಷಗಾನದಲ್ಲಿ ಮಹಿಳೆಯರನ್ನು ದೂರ ಇಟ್ಟಿರುವುದು ಬುದ್ದಿವಂತರ ಜಿಲ್ಲೆಗೆ ಅವಮಾನ ಅಲ್ಲವೇ? ಇದನ್ನು “ಗಂಡು ಕಲೆ” ಎಂದು ಎದೆ ತಟ್ಟಿಕೊಳ್ಳುವವರಿಗೆ ಕನಿಷ್ಠ ನಾಚಿಕೆಯೂ ಆಗೋದಿಲ್ವೇ?





