“ಚುನಾವಣಾ ಆಯೋಗದ ಮೂಲ ಕರ್ತವ್ಯ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವುದೇ ಹೊರತು ನಾಗರಿಕತ್ವವನ್ನು ಪ್ರಶ್ನಿಸುವುದಲ್ಲ” ಎಂದು ಸಾಮಾಜಿಕ ಚಿಂತಕ ಹಾಗೂ ರಾಜಕೀಯ ವಿಶ್ಲೇಷಕ ಶಿವಸುಂದರ್ ಹೇಳಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಸೋಮವಾರ ʼಎದ್ದೇಳು ಕರ್ನಾಟಕʼ ಆಯೋಜಿಸಿದ್ದ, ಚುನಾವಣಾ ಆಯೋಗ ದೇಶವ್ಯಾಪಿ ಮಾಡಲು ಹೊರಟಿರುವ SIR ಪ್ರಕ್ರಿಯೆಯನ್ನು ವಿರೋಧಿಸಿ ನಡೆಯುತ್ತಿರುವ ಮಂಥನಾ ಸಮಾವೇಶದಲ್ಲಿ ಅವರು ಮಾತನಾಡಿದರು.
“1950ರಲ್ಲಿ ರೆಪ್ರೆಸೆಂಟೇಶನ್ ಆಫ್ ಪೀಪಲ್ಸ್ ಆಕ್ಟ್ ಜಾರಿಯಾಗುತ್ತಿದ್ದಂತೆ ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗೆ ದೃಢವಾದ ಕಾನೂನು ಬುನಾದಿ ಸೃಷ್ಟಿಯಾಗಿದೆ. 1951-52ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ಅನಕ್ಷರಸ್ಥರ ಸಂಖ್ಯೆಯನ್ನು ಗಮನಿಸಿ, ಮೊದಲ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಅವರ ನೇತೃತ್ವದಲ್ಲಿ ಚುನಾವಣಾ ಚಿಹ್ನೆಗಳ ಆವಿಷ್ಕಾರವಾಗಿ, ಎಲ್ಲರಿಗೂ ಮತದಾನ ಸುಲಭವಾಗುವಂತೆ ವ್ಯವಸ್ಥೆ ಮಾಡಲಾಯಿತು. ಅಂದಿನಿಂದಲೇ ಈ ದೇಶದಲ್ಲಿ ಅರ್ಹರಿರುವ ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಅವಕಾಶ ಕಲ್ಪಿಸುವುದು ಹಾಗೂ ಅನರ್ಹರವನ್ನು ಪಟ್ಟಿಯಿಂದ ಕೈಬಿಡುವುದು ಆಯೋಗದ ಮೂಲ ಧ್ಯೇಯ ಮತ್ತು ಕರ್ತವ್ಯ ಎನ್ನುವುದು ಸ್ಪಷ್ಟವಾಗಿದೆ” ಎಂದರು.
“1960ರಲ್ಲಿ ಎಲೆಕ್ಟ್ರಲ್ ರೋಲ್ಸ್ ತಯಾರಿ ನಿಯಮಗಳು ಸ್ಥಾಪನೆಯಾಗಿ, ಆಯೋಗ ಖುದ್ದು ಮನೆ–ಮನೆಗೆ ತೆರಳಿ ವಯಸ್ಸು ಹಾಗೂ ವಸತಿ ಪರಿಶೀಲಿಸಿ, 18 ವರ್ಷ ಮೇಲ್ಪಟ್ಟ ಭಾರತೀಯರನ್ನು ಮತದಾರರ ಪಟ್ಟಿಗೆ ಸೇರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಚುನಾವಣಾ ಆಯೋಗ ಮುಖ್ಯವಾಗಿ ನಾಲ್ಕು ರೀತಿಯ ಪರಿಷ್ಕರಣೆಗಳನ್ನು ನಡೆಸುತ್ತಿದ್ದು, ತೀವ್ರ ಪರಿಷ್ಕರಣೆ (Intensive Revision) ವೇಳೆ ಅಧಿಕಾರಿಗಳೇ ಮನೆಗೆ ಭೇಟಿ ನೀಡಿ ಹೊಸ 18 ವರ್ಷ ದಾಟಿದವರು, ಸ್ಥಳ ಬದಲಿಸಿದವರು, ಸತ್ತವರ ವಿವರಗಳನ್ನು ನೇರವಾಗಿ ಪರಿಶೀಲಿಸುತ್ತಾರೆ. ಸಮ್ಮರಿ ರಿವಿಷನ್ ವೇಳೆ ಈಗಾಗಲೇ ಕ್ರೂಢೀಕರಿಸಿರುವ ದಾಖಲೆ ಆಧರಿಸಿ ತಿದ್ದುಪಡಿ ನಡೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಚುನಾವಣಾ ಆಯೋಗ ಗ್ರಾಮಸಭೆಗಳನ್ನು ನಡೆಸಿ, ತಮ್ಮಲ್ಲಿರುವ ಪಟ್ಟಿಯನ್ನು ಓದಿ ಸಾರ್ವಜನಿಕ ದೃಢೀಕರಣವನ್ನೂ ಪಡೆಯಬೇಕು. ಬದಲಾವಣೆಗಳಿದ್ದಲ್ಲಿ ಅಲ್ಲಿಯೇ ಮಾಡಬೇಕು. ಈ ಹಿಂದಿನ ಎಲ್ಲ ವ್ಯವಸ್ಥೆಗಳ ಉದ್ದೇಶ ಅರ್ಹರನ್ನು ಹುಡುಕಿ ಪಟ್ಟಿಗೆ ಸೇರಿಸುವುದು ಮಾತ್ರ. ನಾಗರಿಕತ್ವ ಪರಿಶೀಲನೆ ಚುನಾವಣಾ ಆಯೋಗದ ಕಾರ್ಯವಲ್ಲ ಎನ್ನುವುದನ್ನು ಕಾನೂನು ಸ್ಪಷ್ಟಪಡಿಸುತ್ತದೆ” ಎಂದು ಒತ್ತಿ ಹೇಳಿದರು.
“ಭಾರತದಲ್ಲಿ ಬೇರೆ ದೇಶಗಳಂತೆ ಯಾರಿಗೂ ‘ನಾಗರಿಕರ ಪ್ರಮಾಣ ಪತ್ರ’ ನೀಡುವ ವ್ಯವಸ್ಥೆಯಿಲ್ಲ; ಹೀಗಾಗಿ ಈಗಾಗಲೇ ಮತ ಚಲಾಯಿಸಿರುವುದು ಅಥವಾ ಆ ಪ್ರದೇಶದಲ್ಲಿ ಹಲವು ವರ್ಷ ವಾಸವಿರುವ ದಾಖಲೆಗಳನ್ನೇ ಪುರಾವೆಯಾಗಿ ಪರಿಗಣಿಸಬೇಕಾಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಅಂದರೆ, ವಿದೇಶಿಗರು ಬಂದು ಇಲ್ಲಿನ ಮತದಾರ ಪಟ್ಟಿಗೆ ಸೇರಿದ್ದಾರೆ ಎನ್ನುವ ನಿರ್ದಿಷ್ಟ ದೂರು ಬಂದಾಗ ಮಾತ್ರ ಆಯೋಗ ಸಂಬಂಧಿಸಿದ ವ್ಯಕ್ತಿಗಳ ಬಳಿ ಪುರಾವೆ ಕೇಳಬಹುದು. ಆದರೆ ಯಾವ ಸಂದರ್ಭದಲ್ಲೂ ʼನೀವು ಈ ದೇಶದ ನಾಗರಿಕರಾ?ʼ ಎಂದು ಸಾಮಾನ್ಯ ಮತದಾರರನ್ನು ಪ್ರಶ್ನಿಸುವ, ಅಥವಾ ದಾಖಲೆ ಇಲ್ಲದಿದ್ದರೆ ʼನಾಗರಿಕರಲ್ಲʼ ಎಂದು ತಿರಸ್ಕರಿಸುವ/ಪಟ್ಟಿಯಿಂದ ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲ ಎಂದು ಸಂವಿಧಾನ ಮತ್ತು ಕಾನೂನುಗಳು ಸ್ಪಷ್ಟವಾಗಿ ಹೇಳುತ್ತವೆ” ಎಂದರು.
“1995ರ ಲಾಲ್ ಬಾಬು ಹುಸೇನ್ vs ಎಲೆಕ್ಟ್ರಲ್ ರಿಜಿಸ್ಟ್ರಾರ್ ಆಫೀಸರ್ಸ್ ಪ್ರಕರಣವನ್ನು ಉಲ್ಲೇಖಿಸಿ, ಅಂದಿನ ಪ್ರಕರಣದಲ್ಲಿ ಮುಂಬೈ-ದೆಹಲಿ ಸ್ಲಂಗಳಲ್ಲಿ ವಾಸಿಸುವ ಮುಸ್ಲಿಂ ಮತದಾರರ ಮೇಲೆ ನಡೆದ ನಾಗರಿಕತ್ವ ಪರಿಶೀಲನೆಗೆ ಸುಪ್ರೀಂ ಕೋರ್ಟ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ನಾಗರಿಕತ್ವ ಪರಿಶೀಲನೆ ಒಂದು ನ್ಯಾಯಾಂಗ ಪರಿಶೀಲನೆಯ ವಿಷಯವಾಗಿದ್ದು, ಪೊಲೀಸ್ ಅಥವಾ ಚುನಾವಣಾ ಅಧಿಕಾರಿಗಳು ಅದನ್ನು ನಿರ್ಧರಿಸಲಾಗುವುದಿಲ್ಲ. ನಾಗರಿಕರು ನೀಡುವ ದಾಖಲೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ ಅದು ಸರಿ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಬೇಕೇ ಹೊರತು, ಅವರನ್ನು ಈ ದೇಶದ ನಾಗರಿಕರಲ್ಲ ಎಂದು ತೀರ್ಮಾನಿಸುವುದು ಕಾನೂನು ಬಾಹಿರ ಎಂದು ಅಂದಿನ ತ್ರಿಸದಸ್ಯ ಪೀಠ ಸ್ಪಷ್ಟವಾಗಿ ಹೇಳಿದೆ” ಎಂದು ನೆನಪಿಸಿದರು.
“ಆದರೆ ಈಗ 2025ರಲ್ಲಿ ಚುನಾವಣಾ ಆಯೋಗ ಬಿಹಾರದಲ್ಲಿ ದಿಢೀರನೆ SIR (Special Intensive Revision) ಮಾಡುವುದಾಗಿ ಘೋಷಿಸಿತು. ಬಿಹಾರದಲ್ಲಿ ಮುಗಿದಿದ್ದು, 12 ರಾಜ್ಯಗಳಲ್ಲಿ ಈ ಪ್ರಕ್ರಿಯೆ ಶುರುವಾಗಿದೆ. ಜನಗಣತಿಗೆ ಮುಂಚೆಯೇ ಬಹುಭಾಗ ಎಲ್ಲಾ ರಾಜ್ಯಗಳಲ್ಲೂ ಎಸ್ಐಆರ್ ಆಗುತ್ತದೆ. ಈಗಿನ ಎಸ್ಐಆರ್ ಪ್ರಕ್ರಿಯೆಯಲ್ಲಿರುವ ಹೊಸ ನಿಯಮಗಳು ಈ ಹಿಂದೆ ಎಲ್ಲಿಯೂ ಇಲ್ಲ ಎನ್ನುವುದನ್ನು ಗಮನಿಸಬೇಕು. ನಾವು ಮತದಾರರು ಎಂದು ಚುನಾವಣಾ ಆಯೋಗದ ಮುಂದೆ ಅರ್ಜಿ ಹಾಕಬೇಕಾದ ನಿಯಮ ಮೊದಲು ಇರಲಿಲ್ಲ. ಅರ್ಜಿ ಹಾಕದೇ ಇದ್ದಲ್ಲಿ ನೀವು ಮತದಾರರೇ ಅಲ್ಲ ಎನ್ನುವ ಅಧಿಕಾರವೂ ಆಯೋಗಕ್ಕೆ ಇರಲಿಲ್ಲ. ಆದರೆ ಈಗ ಮಾಡುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಇವೆಲ್ಲವೂ ಇವೆ. ಇದು ಸಂವಿಧಾನ ಬಾಹಿರವಾದದ್ದು. ಈಗ ನಡೆಸುತ್ತಿರುವ SIR ಮೊದಲ ಭಾಗವಾಗಿ ಪ್ರತಿಮನೆಗೆ 2 ಅರ್ಜಿಗಳನ್ನು ಕೊಡಲಾಗುತ್ತದೆ. ಈ ಅರ್ಜಿಗಳನ್ನು ಭರ್ತಿ ಮಾಡಿ ನಿಗದಿ ಮಾಡಿದ ದಿನಾಂಕದೊಳಗೆ ಆಯೋಗಕ್ಕೆ ಅರ್ಜಿಗಳನ್ನು ಹಿಂತಿರುಗಿಸಬೇಕು. ಒಂದು ವೇಳೆ ಸಮಯದೊಳಗೆ ನೀವು ಅರ್ಜಿ ವಾಪಸ್ ಮಾಡದಿದ್ದಲ್ಲಿ ಓಟಿಂಗ್ ಪವರ್ ಇರುವುದಿಲ್ಲ. ಎರಡನೆಯದಾಗಿ, ಇಲ್ಲಿವರೆಗೆ ಆಯೋಗ ವಯಸ್ಸು ಮತ್ತು ವಸತಿಗಳಿಗೆ ಮಾತ್ರ ದಾಖಲೆ ಕೇಳುತ್ತಿತ್ತು. ಈಗ ಅದು ಮಾತ್ರವಲ್ಲದೆ 2003ರ ನಂತರ ಮತದಾನ ಮಾಡುತ್ತಿರುವ ಹಾಗೂ 1987ರ ಜೂನ್ 15ಕ್ಕೆ ಮುಂಚೆ ಹುಟ್ಟಿದ್ದರೆ, ಆಯೋಗ ಕೊಡುವ ಅರ್ಜಿಗಳನ್ನು ಭರ್ತಿ ಮಾಡಿ ಅದರೊಟ್ಟಿಗೆ ಜನನ-ಮರಣ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಅಥವಾ ಅವರು ಕೇಳಿರುವ 11 ದಾಖಲೆಗಳಲ್ಲಿ ಒಂದನ್ನು ನೀಡಬೇಕು. ನೀವು ನಿಮ್ಮ ಬಳಿ ಇರುವ ದಾಖಲೆ ಸಲ್ಲಿಸಿದರೆ ಸಾಲದು, ಅದು ಚುನಾವಣಾ ಆಯೋಗಕ್ಕೆ ಸಮಾಧಾನ ತರುವಂತಿರಬೇಕು. ಈ ನಿಯಮಗಳು ಸಂವಿಧಾನ ವಿರೋಧಿಗಳು ಎಂದು ಕಾನೂನು ಹೇಳುತ್ತದೆ” ಎಂದರು.
“ಆಯೋಗ ಕೇಳಿರುವ 11 ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಳಪಡುವುದಿಲ್ಲ. ಈ ಅಂಶ ಗಮನಿಸಿದ ಸುಪ್ರೀಂ ಕೋರ್ಟ್ 12ನೇ ದಾಖಲೆಯಾಗಿ ಆಧಾರ್ಕಾರ್ಡ್ ಸೇರ್ಪಡೆ ಮಾಡಬೇಕು ಎಂದು ಆದೇಶಿಸಿದ್ದರೂ ಅದನ್ನು ಚುನಾವಣಾ ಆಯೋಗ ಪಾಲಿಸಲು ಸಿದ್ಧವಾಗಿಲ್ಲ. ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ನಲ್ಲಿ ಎಸ್ಐಆರ್ ಸಂಬಂಧದ ಪ್ರಕರಣವೊಂದರಲ್ಲಿ ಅಡ್ವೊಕೇಟ್ ಜನರಲ್ ಅವರು ಮಾತನಾಡುತ್ತಾ, ಪ್ರಜೆಗಳಿಂದ ಪ್ರಜಾತಂತ್ರವನ್ನು ಜನರಿಂದ ದೂರಗೊಳಿಸಿ ಈ ದೇಶದ ಸಾವರ್ಕರ್ವಾದಿಗಳಿಗೆ, ಬಂಡವಾಳಶಾಹಿಗಳಿಗೆ ಮಾತ್ರ ಅನುಕೂಲ ಮಾಡುವ ಸುದೀರ್ಘ ಫ್ಯಾಸಿಸ್ಟ್ ಪ್ರಕ್ರಿಯೆಯ ಅಪಾಯಕಾರಿ ಹಂತ ಎನ್ನುತ್ತಾರೆ. ಹಾಗಾಗಿ ಈ ದೇಶವನ್ನು ಜನರ ಗಣರಾಜ್ಯವಾಗಿ ಉಳಿಸಿಕೊಳ್ಳಬೇಕು ಎಂದು ಬಯಸುವ ಪ್ರತಿಯೊಬ್ಬರೂ ಕೂಡ SIR ಅನ್ನು ವಿರೋಧಿಸಲೇಬೇಕು. ಈ ದೇಶ ಹಿಂದೆಂದೂ ಕಂಡಿರದ ಇಂತಹ ಅಸಾಧಾರಣ ಸಂದರ್ಭಕ್ಕೆ ಅಸಾಧಾರಣ ಪರಿಹಾರಗಳನ್ನೇ ಹುಡುಕಿಕೊಳ್ಳಬೇಕು” ಎಂದರು.
“ಚುನಾವಣಾ ಆಯೋಗದ ಆಯುಕ್ತರನ್ನು ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹಾಗೂ ವಿರೋಧ ಪಕ್ಷದ ನಾಯಕರು ಸೇರಿ ಆಯ್ಕೆ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಸ್ವತಂತ್ರವಾದ ಚುನಾವಣಾ ಆಯುಕ್ತ ನೇಮಕವಾಗಬಹುದು. ಇದು ನಿಯಮ. ಆದರೆ, ತಮಗಿರುವ ಸಂಖ್ಯಾಬಲ ಬಳಸಿಕೊಂಡು, ಈ ಆದೇಶಕ್ಕೆ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಸಮಿತಿಯಿಂದ ಹೊರಹಾಕಿ ಪ್ರಧಾನ ಮಂತ್ರಿ, ಅವರೇ ನೇಮಕ ಮಾಡಿಕೊಂಡ ಇನ್ನೊಬ್ಬ ಮಂತ್ರಿ ಹಾಗೂ ನಾಮಕಾವಸ್ತೆಗೆ ವಿರೋಧಪಕ್ಷದ ನಾಯಕನನ್ನು ಸೇರಿಸಿಕೊಂಡು ಆಯ್ಕೆ ಮಾಡಲಾಗುತ್ತದೆ. ಈಗ ಸಾಮಾನ್ಯವಾಗಿ ಬಹುಮತ ಆಡಳಿತ ಪಕ್ಷದ್ದೇ ಆಗಿರುತ್ತದೆ. ಸರ್ಕಾರವೇ ನೇಮಕ ಮಾಡುವ ಚುನಾವಣಾ ಆಯುಕ್ತನೊಬ್ಬ ಹೇಗಿರಬಲ್ಲನೆಂದರೆ, ಇಂದಿನ ಜ್ಞಾನೇಶ್ ಕುಮಾರ್ ರೀತಿ ಇರಬಲ್ಲ. ಅದೂ ಸಾಲದೆಂಬಂತೆ ಅವರು ಮಾಡುವ ಯಾವ ಅಪರಾಧಕ್ಕೂ ಕೇಸ್ ಹಾಕುವಂತಿಲ್ಲ. ಇಂಥದ್ದೊಂದು ತಿದ್ದುಪಡಿ ಸಂಸತ್ತಿನಲ್ಲೇ ಆಗಿದೆ. ಇಷ್ಟು ನಿಚ್ಛಳವಾಗಿ, ಒಂದು ಚುನಾವಣಾ ಪ್ರಕ್ರಿಯೆಯನ್ನೇ ಭ್ರಷ್ಟಗೊಳಿಸಿ ತಮಗೆ ಬೇಕಾದ ರೀತಿ ತಿದ್ದುಪಡಿ ಮಾಡಿಕೊಳ್ಳುತ್ತಿರುವಾಗ ವಿರೋಧಪಕ್ಷಗಳಾದರೂ ಅದನ್ನು ಸಮರ್ಥವಾಗಿ ಎದುರಿಸಬೇಕಾಗಿತ್ತು. ಅವರ ಬಂಡವಾಳವನ್ನು ಬಯಲು ಮಾಡಬೇಕಿತ್ತು. ಆದರೆ ವಿರೋಧಪಕ್ಷಗಳಿಗೆ ಆ ಶಕ್ತಿ ಇಲ್ಲ”
ಇದನ್ನೂ ಓದಿ: ಈ ದಿನ ಸಂಪಾದಕೀಯ | ಬಿಹಾರದಲ್ಲಿ ಗೆದ್ದಿದ್ದು ಜನತಂತ್ರವೋ ಅಥವಾ ಮತಗಳ್ಳತನವೋ?
ಆಡಳಿತ ಪಕ್ಷ ನಡೆಸುತ್ತಿರುವ ಎಸ್ಐಆರ್ ವಿರೋಧ ಪಕ್ಷಗಳ ಮೇಲೆ ನಡೆಯುತ್ತಿರುವ ದಾಳಿಯಲ್ಲ ಬದಲಿಗೆ ನಮ್ಮ ಮೇಲೆಯೇ ನಡೆಯುತ್ತಿರುವ ದಾಳಿ. ಮತಗಳ್ಳತನ ಎಷ್ಟು ರಾಜಾರೋಷವಾಗಿ ನಡೆಯುತ್ತಿದೆಯೋ ಅಷ್ಟೇ ಸ್ಪಷ್ಟವಾಗಿ ಜನರ ಮತಿಗಳ್ಳತನವೂ ನಡೆಯುತ್ತಿದೆ. 1984ರ ಬಳಿಕ ನಿರಂತರವಾಗಿ ನಡೆಯುತ್ತಿರುವ ಫ್ಯಾಸಿಸಂ ಪ್ರಕ್ರಿಯೆಗೆ ನಾವುಗಳೇ ಬ್ರೇಕ್ ಹಾಕಬೇಕಾಗಿದೆ. ನಮ್ಮವರನ್ನೇ ನಮ್ಮ ವಿರುದ್ಧ ಎತ್ತಿಕಟ್ಟಿ ಹಿಂದೂ ರಾಷ್ಟ್ರ ನಿರ್ಮಿಸುವ ಹುನ್ನಾರ ಎಗ್ಗಿಲ್ಲದೆ ಸಾಗುತ್ತಿದೆ. ಇದರ ವಿರುದ್ಧ ನಾವುಗಳು ಹೋರಾಡಲೇ ಬೇಕು. ನಮ್ಮ ಗಣರಾಜ್ಯವನ್ನು ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಆರ್ಥಿಕ ತಜ್ಞ ಹಾಗೂ ರಾಜಕೀಯ ವಿಶ್ಲೇಷಕ ಪರಕಾಲ ಪ್ರಭಾಕರ್, ಒಬಾಮಾ ಆಡಳಿತದ ಸಲಹೆಗಾರ ಹಾಗೂ ತಾಂತ್ರಿಕ ಸುರಕ್ಷಣಾ ತಜ್ಞ ಮಾಧವ ದೇಶಪಾಂಡೆ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ನ ಮುಖ್ಯಸ್ಥ ಹರೀಶ್ ನರಸಪ್ಪ, ಜಾಮಾಅತೆ ಇಸ್ಲಾಮಿ ಹಿಂದ್ನ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಕುನ್ನಿ, ಎದ್ದೇಳು ಕರ್ನಾಟಕದ ಮುಖ್ಯಸ್ಥೆ ತಾರಾ ರಾವ್, ನಮ್ಮ ಓಟು, ನಮ್ಮ ಹಕ್ಕು ಅಭಿಯಾನದ ಮಾನವಿ, ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





