ಬೆಂಗಳೂರು ನಗರ ವಿಶ್ವವಿದ್ಯಾಲಯ ಪರೀಕ್ಷಾ ವಿಭಾಗವು ಪರೀಕ್ಷೆಗಳಲ್ಲಿ ಹಗರಣಗಳನ್ನು ನಡೆಸುತ್ತಿದೆ. ಸೆಮಿಸ್ಟರ್ ಪರೀಕ್ಷೆಯನ್ನು ಉತ್ತಮವಾಗಿ ಬರೆದಿದ್ದರೂ ಅಂಕ ಕಡಿಮೆ ಮಾಡಿ, ಚಾಲೆಂಜ್ ವೆಲ್ಯುಯೇಷನ್ಗೆ ಹೋಗುವಂತೆ ಸಮಸ್ಯೆ ಸೃಷ್ಟಿಸಲಾಗಿದೆ. ಕಳೆದ ಒಂದು ವರ್ಷದಿಂದ ಹಲವು ಬಾರಿ ಮನವಿ ಮಾಡಿದರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ನಗರ ವಿವಿ ಕ್ಯಾಂಪಸ್ನ ಗಡಿಯಾರ ಗೋಪುರ ಬಳಿ ಗುರುವಾರ ಸೇರಿದ ವಿದ್ಯಾರ್ಥಿಗಳು, ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಮುಖಂಡ ಸಂತೋಷ್ ಮಾತನಾಡಿ, “65 ಅಂಕಗಳು ಬರುವಲ್ಲಿ ಕೇವಲ 18 ಅಥವಾ 19 ಅಂಕಗಳನ್ನು ನೀಡುತ್ತಿದ್ದಾರೆ. ಚಾಲೆಂಜ್ ವಾಲ್ಯುಯೇಷನ್ಗೆ ಹಾಕಿದರೆ ಆವರೇಜ್ ಅಂಕಗಳನ್ನು ನೀಡುತ್ತಾರೆ. ಒಬ್ಬ ವಿದ್ಯಾರ್ಥಿಗೆ 70 ಅಂಕಗಳು ಬರುವಲ್ಲಿ 18 ಅಂಕ ಬಂದಿರುತ್ತವೆ ಎಂದು ಭಾವಿಸಿ. ಆ ವಿದ್ಯಾರ್ಥಿ ಚಾಲೆಂಜ್ ವ್ಯಾಲ್ಯುಯೇಷನ್ಗೆ ಅಪ್ಲಾಯ್ ಮಾಡಿದಾಗ ಅವರು 30 ಅಂಕ ಕೊಡುತ್ತಾರೆ. ಆದರೆ 18 ಮತ್ತು 30 ಅಂಕಗಳ ನಡುವೆ ಸರಾಸರಿ ನೋಡಿ 24 ಅಂಕಗಳನ್ನು ನಿಗದಿಪಡಿಸುತ್ತಾರೆ. ಆ ಮೂಲಕ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಲಾಗುತ್ತದೆ” ಎಂದು ವಿವರಿಸಿದರು.

“ಯುಜಿಸಿ ಮಾರ್ಗಸೂಚಿ 6.9ರ ಪ್ರಕಾರ ಮೌಲ್ಯಮಾಪನ ಪಾದರ್ಶಕವಾಗಿರಬೇಕು. ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯ ಫೋಟೋ ಕಾಪಿ ಕೇಳಿದಾಗ ತಪ್ಪದೇ ಕೊಡಬೇಕು. ಇವರ್ಯಾಕೆ ಫೋಟೋ ಕಾಪಿಯನ್ನು ನಮಗೆ ನೀಡುತ್ತಿಲ್ಲ? ಪರೀಕ್ಷೆಯಲ್ಲಾಗುತ್ತಿರುವ ಎಡವಟ್ಟುಗಳ ಕುರಿತು ಒಂದು ವರ್ಷದಿಂದಲೂ ಮನವಿ ಮಾಡುತ್ತಾ ಬಂದಿದ್ದೇವೆ. ನಮ್ಮ ಪತ್ರಗಳಿಗೆ ಬೆಲೆಯೇ ಇಲ್ಲವಾಗಿದೆ” ಎಂದು ವಿಷಾದಿಸಿದರು.
ವಿದ್ಯಾರ್ಥಿನಿ ಪಾವನಾ ಮಾತನಾಡಿ, “ನಾನು ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದೆ. ಥಿಯರಿಯಲ್ಲಿ ಕನಿಷ್ಠ 25 ಅಂಕಗಳು ಪಡೆದರೆ ಮಾತ್ರ ಉತ್ತೀರ್ಣಳಾಗುತ್ತೇನೆ. ಇಂಟರ್ನಲ್ನಲ್ಲಿ ಕನಿಷ್ಠ 15 ಅಂಕಗಳು ಬರಲೇಬೇಕು. ಇಂಟರ್ನಲ್ನಲ್ಲಿ 30 ಅಂಕಗಳಿಗೆ 28 ಅಂಕಗಳನ್ನು ತೆಗೆದುಕೊಂಡಿದ್ದೇನೆ. ಆದರೆ 70 ಅಂಕಗಳ ಥಿಯರಿಯಲ್ಲಿ ಕೇವಲ 10, 12, 13 ಅಂಕಗಳನ್ನು ತೆಗೆಯುವಷ್ಟು ಕೀಳಾಗಿ ಓದಿದ್ದೇನಾ? ನನಗೆ ಥಿಯರಿಯಲ್ಲಿ 19 ಅಂಕಗಳನ್ನು ಕೊಟ್ಟಿದ್ದಾರೆ. ಚಾಲೆಂಜ್ ವಾಲ್ಯುಯೇಷನ್ನಲ್ಲಿ ರಿಸಲ್ಟ್ ಬದಲಿಸುತ್ತೇವೆ ಎಂದಿದ್ದರು. ಆದರೆ ಇಲ್ಲಿಯವರೆಗೂ ಮೌಲ್ಯಮಾಪನ ನಡೆಯಲಿಲ್ಲ” ಎಂದು ತಿಳಿಸಿದರು.

“ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡುತ್ತಿದ್ದಾರೆ. ಚಾಲೆಂಜ್ ವೆಲ್ಯುಯೇಷನ್ನಲ್ಲಿ ಅನುತ್ತೀರ್ಣ ಎಂದು ಬಂದರೆ ನಾನೇನು ಮಾಡಲಿ? ಇವರು ನನಗೆ ಕೆಲಸ ಕೊಡಿಸುತ್ತಾರಾ? ನಾನು ಅಲೆದಾಡಬೇಕಾಗುತ್ತದೆ. ನನ್ನಂಥವರು ಮಾತನಾಡಲು, ಹೋರಾಡಲು ಸಿದ್ಧವಿದ್ದೇವೆ. ಮೌನವಾಗಿರುವ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ವಿ.ಸಿ., ರಿಜಿಸ್ಟ್ರಾರ್ ಹೆಸರು ಬರೆದಿಟ್ಟು ಸಾಯಬೇಕಾ?” ಎಂದು ಪ್ರಶ್ನಿಸಿದರು.
ಮತ್ತೊಬ್ಬ ವಿದ್ಯಾರ್ಥಿ ರವಿಚಂದ್ರ ಮಾತನಾಡಿ, “ಸೆಮಿಸ್ಟರ್ ಪರೀಕ್ಷೆ ಬರೆದು ಐದು ತಿಂಗಳಾದರೂ ಫಲಿತಾಂಶ ಪ್ರಕಟಿಸುವುದಿಲ್ಲ. ಯುವನಿಧಿಗೆ ಅರ್ಜಿ ಸಲ್ಲಿಸಲು ಅಥವಾ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ” ಎಂದು ಹೇಳಿದರು.

ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕೆಲಕಾಲ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಮನವಿಯನ್ನು ಸ್ವೀಕರಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಪರೀಕ್ಷಾಂಗ ಕುಲಸಚಿವ ಆನಂದ್ ಕುಮಾರ್, “ಡಬಲ್ ವ್ಯಾಲ್ಯುಯೇಷನ್ ಆಗಿದ್ದರೆ ಫೋಟೋ ಕಾಪಿ ಕೊಡಲು ಅವಕಾಶವಿಲ್ಲ. ಸರಾಸರಿ ಅಂಕವನ್ನು ಕಾಯ್ದೆಯ ಪ್ರಕಾರವೇ ಕೊಡಲಾಗುತ್ತಿದೆ. ಆದರೆ ತಮಗೆ ಸಮಸ್ಯೆಯಾಗುತ್ತಿರುವುದಾಗಿ ವಿದ್ಯಾರ್ಥಿಗಳು ಮನವಿ ಕೊಟ್ಟಿದ್ದಾರೆ. ಇದನ್ನು ನಮ್ಮ ಆಡಳಿತ ಮಂಡಲಿಯಲ್ಲಿ ಚರ್ಚಿಸಲಾಗುವುದು” ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕ್ಯಾಂಪಸ್ಗೆ ಧಾವಿಸಿದ ಪೊಲೀಸರು, ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವಂತೆ ಮಾತನಾಡಿದರು. “ಘೋಷಣೆ ಕೂಗಿದರೆ, ಪ್ರತಿಭಟನೆ ಮಾಡಿದರೆ ಅರೆಸ್ಟ್ ಮಾಡಲಾಗುವುದು. ನೀವು ಪ್ರತಿಭಟನೆ ಮಾಡುವುದಾದರೆ ಫ್ರೀಡಂಪಾರ್ಕ್ಗೆ ಹೋಗಿರಿ” ಎಂದು ಹೆದರಿಸಿದರು.





