“ಅಬ್ಬ….ಮರಿ ತಿಮಿಂಗಿಲದ ದವಡೆ ಇಷ್ಟುದ್ದವಾ ಸರ್? ಮರಿ ತಿಮಿಂಗಿಲದ್ದೇ ಇಷ್ಟುದ್ದ ಇರೋದಾದರೆ ದೊಡ್ಡ ತಿಮಿಂಗಲದ್ದು ಹೇಗಿರಬಹುದಲ್ವಾ…!!
ಈ ರೀತಿ ಅಚ್ಚರಿಯ ಮಾತುಗಳು ಕೇಳಿಬಂದದ್ದು ಬೆಂಗಳೂರಿನಲ್ಲಿ ನ.21ರಿಂದ 23ರವರೆಗೆ ನಡೆಯುತ್ತಿರುವ ಮತ್ಸ್ಯ ಮೇಳದ ವಸ್ತು ಪ್ರದರ್ಶನದಲ್ಲಿ ಮರಿ ತಿಮಿಂಗಿಲದ ಬೃಹತ್ ದವಡೆಯ ಕಂಡಾಗ.
ಹೌದು. ವಿಶ್ವ ಮೀನುಗಾರಿಕೆ ದಿನಾಚರಣೆ-2025 ಪ್ರಯುಕ್ತ ಮೀನುಗಾರಿಕೆ ಇಲಾಖೆಯ ವತಿಯಿಂದ ನ.23ರವರೆಗೆ ಮತ್ಸ್ಯಮೇಳವು ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುತ್ತಿದೆ. ಮತ್ಸ್ಯ ಪ್ರದರ್ಶನ, ಫಿಶ್ ಟನೆಲ್, ಖಾದ್ಯಮೇಳಗಳ ಮಳಿಗೆಗಳು ಕೂಡ ಇದೆ.
ಕಾರವಾರದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಮತ್ಸ್ಯ ಮೇಳದ ವಸ್ತು ಪ್ರದರ್ಶನಕ್ಕೆ ತಂದಿದ್ದ ಮರಿ ತಿಮಿಂಗಿಲದ ಬೃಹತ್ ದವಡೆಯು ಸಾರ್ವಜನಿಕರ ಗಮನ ಸೆಳೆಯಿತು.

ದವಡೆಯನ್ನು ನೋಡಿ ಅಚ್ಚರಿಯಾದವರಿಗೆ ಮಾಹಿತಿ ನೀಡುತ್ತಿದ್ದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಕ್ಷಯ್ ನಾಯಕ್, “ಇಲ್ಲಿ ನಾವು ಪ್ರದರ್ಶನಕ್ಕಿಟ್ಟಿರುವುದು ಮರಿ ತಿಮಿಂಗಿಲದ ಒಂದು ಬದಿಯ ದವಡೆಯಷ್ಟೇ. ಇದು ನಮಗೆ ಕಾರವಾರದ ಠಾಗೋರ್ ಬೀಚ್ನಲ್ಲಿ 2022ರಲ್ಲಿ ಸಿಕ್ಕಿತ್ತು. ತಿಮಿಂಗಿಲಗಳು ಸಾಧಾರಣವಾಗಿ 100ರಿಂದ 140 ವರ್ಷಗಳವರೆಗೆ ಜೀವಿಸುತ್ತದೆ. ಈ ದವಡೆಯು ಮರಿ ತಿಮಿಂಗಿಲದ್ದು. ಇದರ ಪ್ರಾಯ ಅಂದಾಜು 40 ವರ್ಷ ಇರಬಹುದು” ಎಂದು ಮಾಹಿತಿ ನೀಡಿದರು.
“ಕಾರವಾರ ಭಾಗದಲ್ಲಿ ಸ್ಪರ್ಮ್ ತಿಮಿಂಗಿಲ, ಬ್ಲೇನ್ ವಿಲ್ಸ್ ಕೊಕ್ಕಿನ ತಿಮಿಂಗಿಲ ಮತ್ತು ಬಲಿವ್ ವೇಲ್ ಸಿಗುತ್ತವೆ. ವುಡ್ ವಾರ್ನಿಷ್ ಹೊಡೆದು ಈ ಮರಿ ತಿಮಿಂಗಿಲದ ದವಡೆ ಹಲ್ಲನ್ನು ಸಂಗ್ರಹಿಸಿಟ್ಟಿದ್ದೇವೆ. ಇಷ್ಟುದ್ದದ ದವಡೆ ನೋಡಿ ಸಾರ್ವಜನಿಕರು ಜನರು ಅಚ್ಚರಿ ಪಡುತ್ತಿದ್ದಾರೆ. ನಮ್ಮ ಸ್ಟಾಲ್ನಲ್ಲಿ ಇಂಡೋ-ಫೆಸಿಫಿಕ್ ಡಾಲ್ಫಿನ್ನ ಅಸ್ಥಿಪಂಜರ ಕೂಡ ಇಟ್ಟಿದ್ದೇವೆ. ಮತ್ಸ್ಯ ಮೇಳಕ್ಕೆ ಭೇಟಿ ಜನರು ಆಸಕ್ತಿಯಿಂದ ಎಲ್ಲವನ್ನೂ ತಿಳಿದುಕೊಳ್ಳುತ್ತಿದ್ದಾರೆ. ಕಾರವಾರದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಎರಡು ದೊಡ್ಡ ತಿಮಿಂಗಿಲದ ಅಂದಾಜು 35ರಿಂದ 40 ಅಡಿಯ ಅಸ್ಥಿಪಂಜರವನ್ನು ಸಂಗ್ರಹಿಸಿಟ್ಟಿದ್ದೇವೆ” ಎಂದು ಅಕ್ಷಯ್ ನಾಯಕ್ ತಿಳಿಸಿದರು.

ಸಾರ್ವಜನಿಕರಿಗೆ ಖುಷಿ ನೀಡಿದ ರಂಗು ರಂಗಿನ ಅಲಂಕಾರಿಕ ಮೀನುಗಳ ಪ್ರದರ್ಶನ
ಮತ್ಸ್ಯ ಮೇಳದಲ್ಲಿ ಇಡಲಾಗಿದ್ದ ಅಲಂಕಾರಿಕಾ ಮೀನುಗಳು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮಕ್ಕಳು, ಪೋಷಕರ ಸಹಿತ ಹಲವರು ತಮ್ಮ ಇಷ್ಟದ ಮೀನುಗಳ ಬಗ್ಗೆ ಅಧಿಕಾರಿಗಳ ಬಳಿ ವಿವರಣೆ ಕೇಳುತ್ತಾ, ಮಾಹಿತಿ ಪಡೆದುಕೊಳ್ಳುತ್ತಿದ್ದರು.

ಮೇಳದಲ್ಲಿ ಸ್ಟಾಲ್ ಹಾಕಿದ್ದ ಬೆಂಗಳೂರಿನ ಮೀನುಗಾರಿಕಾ ಮಾಹಿತಿ ಹಾಗೂ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಚೇತನ್ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿ, ” ಅಲಂಕಾರಿಕಾ ಮೀನುಗಳ ಬಗ್ಗೆ ನಮ್ಮ ಕೇಂದ್ರದಲ್ಲಿ ಸಂಶೋಧನೆ ನಡೆಸುತ್ತಾ ಸಾರ್ವಜನಿಕರ ಸಹಿತ ಮೀನು ಕೃಷಿಕರಿಗೆ ಮಾಹಿತಿ ನೀಡುತ್ತಿದ್ದೇವೆ. ಅಲಂಕಾರಿಕಾ ಮೀನುಗಳ ಕೃಷಿಯ ಮೂಲಕ ಹೇಗೆ ಆದಾಯ ಗಳಿಸಬಹುದು ಎಂಬ ಬಗ್ಗೆಯೂ ತರಬೇತಿ ನೀಡುತ್ತೇವೆ. ಸಂಶೋಧನಾ ಕೇಂದ್ರಗಳಲ್ಲಿ ಸಿಗುವ ಅಲಂಕಾರಿಕಾ ಮೀನುಗಳಿಗೂ ಅಂಗಡಿಗಳಲ್ಲಿ ಸಿಗುವ ಮೀನಿಗೂ ಹಲವು ವ್ಯತ್ಯಾಸಗಳಿವೆ. ಈ ಬಗ್ಗೆಯೂ ಜನರಿಗೆ ಅರಿವು ಮೂಡಿಸುತ್ತಿದ್ದೇವೆ. ಅಲಂಕಾರಿಕಾ ಮೀನುಗಳ ಪೈಕಿ ಗೋಲ್ಡನ್ ಫಿಶ್ ಹೆಚ್ಚು ಜನರಿಗೆ ಇಷ್ಟ” ಎಂದು ತಿಳಿಸಿದರು.
ಮೇಳಕ್ಕೆ ಬಂದಿದ್ದ ಮಹೇಶ್ ಈದಿನ ಜೊತೆಗೆ ಮಾತನಾಡುತ್ತಾ, “ಮೊದಲ ಬಾರಿಗೆ ಮತ್ಸ್ಯಮೇಳಕ್ಕೆ ಬಂದಿದ್ದೇನೆ. ನಮ್ಮ ಮನೆಯಲ್ಲಿ ಅಕ್ವೇರಿಯಂ ಇರುವುದರಿಂದ ನಮಗೂ ಮೀನಿನ ಬಗ್ಗೆ ತಿಳಿದುಕೊಳ್ಳುವ ಉತ್ಸಾಹದಿಂದ ಬಂದಿದ್ದೇನೆ. ಚೆನ್ನಾಗಿ ವ್ಯವಸ್ಥೆ ಮಾಡಿರುವುದು ಖುಷಿಕೊಟ್ಟಿದೆ” ಎಂದು ತಿಳಿಸಿದರೆ, ಮಹೇಶ್ ಅವರ ಮಗ ದಕ್ಷಿತ್, ನನಗೆ ಮೀನು ಅಂದರೆ ತುಂಬಾ ಇಷ್ಟ. ಹಾಗಾಗಿ, ತಂದೆಯ ಜೊತೆಗೆ ಬಂದಿದ್ದೇನೆ. ಬೇರೆ ಬೇರೆ ಮೀನುಗಳನ್ನು ನೋಡಿದೆ” ಎಂದು ತಮ್ಮ ಖುಷಿಯನ್ನು ಹಂಚಿಕೊಂಡ.
“ಪ್ರತಿ ವರ್ಷವೂ ಮತ್ಸ್ಯಮೇಳಕ್ಕೆ ಬರುತ್ತಿದ್ದೇನೆ. ವಿವಿಧ ಮೀನಿನ ಖಾದ್ಯಗಳನ್ನು ಸವಿಯಲೆಂದೇ ಕುಟುಂಬ ಸದಸ್ಯರ ಜೊತೆಗೆ ಮೇಳಕ್ಕೆ ಬರುತ್ತಿದ್ದೇನೆ. ಈ ವರ್ಷವೂ ಸವಿದಿದ್ದೇನೆ. ಆದರೆ, ಬೆಲೆ ಸ್ವಲ್ಪ ಜಾಸ್ತಿಯಾಯ್ತು. 900 ರೂ. ಕೊಟ್ಟು ಮೂರು ಮೀನುಗಳನ್ನು ಸವಿದೆ. ದರ ಕಡಿಮೆ ಇಟ್ಟಲ್ಲಿ ಜನರಿಗೆ ಉಪಯೋಗ ಆಗ್ತದೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಟಾಲ್ಗಳಲ್ಲಿ ದರ ಕಡಿಮೆ ಇಡುವಂತೆ ನೋಡಿಕೊಳ್ಳಬೇಕು” ಎಂದು ಸಾಗರ ಮೂಲದ ಯಲಹಂಕ ನಿವಾಸಿ ರಜನಿ ಗಿರೀಶ್ ಅಭಿಪ್ರಾಯಿಸಿದರು.

ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಜಲಕೃಷಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರವೀಂದ್ರಗೌಡ ಪಾಟೀಲ್ ಮಾತನಾಡುತ್ತಾ, “ಮೀನಿನಲ್ಲಿ ವಿವಿಧ ರೀತಿಯ ಖಾದ್ಯಗಳ ಜೊತೆಗೆ ತಿಂಡಿ ತಿನಿಸುಗಳನ್ನು ಕೂಡ ಮಾಡಬಹುದು. ಈ ಬಗ್ಗೆ ನಾವು ಜನರಿಗೆ ಮಾಹಿತಿ ನೀಡುತ್ತಿದ್ದೇವೆ. ಮೀನಿನ ಚಕ್ಕುಲಿ, ಸಿಗಡಿ ಉಪ್ಪಿನಕಾಯಿ, ಮೀನಿನ ಹಪ್ಪಳಗಳನ್ನು ಪ್ರದರ್ಶಿಸುತ್ತಿದ್ದೇವೆ. ಕಡಿಮೆ ಖರ್ಚಿನಲ್ಲಿ ಹೇಗೆ ಹೆಚ್ಚು ಮೀನು ಕೃಷಿ ಮಾಡಬಹುದು ಎಂಬುದರ ಬಗ್ಗೆಯೂ ಕೃಷಿಕರಿಗೆ ತರಬೇತಿ ನೀಡುತ್ತಿದ್ದೇವೆ” ಎಂದು ತಿಳಿಸಿದರು.
ಚಿಕ್ಕಮಗಳೂರಿನಿಂದ ಬಂದಿದ್ದ ಜಾಯ್ಸ್ ಈದಿನದ ಜೊತೆಗೆ ಮಾತನಾಡುತ್ತಾ, “ನಾನು ಏಡಿ ಕೃಷಿ ಮತ್ತು ಲಾರ್ವಾ ಕೃಷಿಯನ್ನು ಮಾಡುತ್ತಿದ್ದೇನೆ. ಲಾರ್ವಾವನ್ನು ಬೆಕ್ಕು ಸಾಕಣೆ ಮತ್ತು ಕೋಳಿ ಸಾಕಣೆಗೆ ಬಳಸಲಾಗುತ್ತದೆ. ಸರಿಯಾಗಿ ಮಾಹಿತಿ ತಿಳಿದುಕೊಂಡು ಕೃಷಿ ಮಾಡಿದರೆ ಉತ್ತಮ ಆದಾಯ ಗಳಿಸಲು ಸಾಧ್ಯ” ಎಂದು ತಿಳಿಸಿದರು.

ಹೆಸರಘಟ್ಟದ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪವನ್ ಕುಮಾರ್ ಮಾತನಾಡುತ್ತಾ, “ನಮ್ಮ ಕೇಂದ್ರದಲ್ಲಿ ಅಮುರ್ ಮೀನು ಕೃಷಿ ಪ್ರಮುಖವಾದದ್ದು. ನಮ್ಮ ಕೇಂದ್ರದಿಂದಲೇ ದೇಶದೆಲ್ಲೆಡೆಗೆ ಕಳುಹಿಸಲಾಗುತ್ತಿದೆ. ಜೊತೆಗೆ ನಮ್ಮ ಕೇಂದ್ರದಲ್ಲಿ ಸಿಹಿನೀರಿನಲ್ಲಿ ಮುತ್ತು ಕೃಷಿಯ ಬಗ್ಗೆಯೂ ತರಬೇತಿ ನೀಡುತ್ತಿದ್ದೇವೆ. ಸಣ್ಣ ಏಡಿಯನ್ನು ಸುಮಾರು 300ರಿಂದ 400 ಗ್ರಾಂ ಆಗುವಂತೆ ಮಾಡುವ ‘ಕ್ರ್ಯಾಬ್ ಫ್ಯಾಟನಿಂಗ್’ ಅನ್ನು ಕೂಡ ಮಾಡುತ್ತಿದ್ದೇವೆ. ಈ ಏಡಿಗೆ ಮಾರುಕಟ್ಟೆಯಲ್ಲಿ ಕೆ.ಜಿ,ಗೆ ಒಂದು ಸಾವಿರದಷ್ಟು ಬೆಲೆ ಇದೆ” ಎಂದು ಮಾಹಿತಿ ನೀಡಿದರು.
ಮೀನು ಹಿಡಿಯಲು ಬಳಸುವ ವಿವಿಧ ರೀತಿಯ ಬಲೆಗಳನ್ನು ಸಾರ್ವಜನಿಕರಿಗೆ ಮತ್ಸ್ಯಮೇಳದಲ್ಲಿ ಪ್ರದರ್ಶಿಸಲಾಗಿತ್ತು. ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಕೃಷ್ಣಮೂರ್ತಿಯವರು ಎಲ್ಲ ವಿಧದ ಬಲೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದರು. ಜೊತೆಗೆ ಮೇಳದಲ್ಲಿ ಫಿಶ್ ಟನೆಲ್, ಹಳೆಯ ಕಾಲದಲ್ಲಿ ಮೀನುಗಾರಿಕೆಗೆ ಬಳಸುತ್ತಿದ್ದ ಪರಿಕರಗಳನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿತ್ತು
ಮಳಿಗೆಗಳಲ್ಲಿ ತರಹೇವಾರಿ ಮೀನಿನ ಖಾದ್ಯಗಳು: ಬೆಲೆ ಮಾತ್ರ ದುಬಾರಿ!
ಮತ್ಸ್ಯ ಮೇಳದ ಭಾಗವಾಗಿ ಸಾರ್ವಜನಿಕರು ಮೀನಿನ ಖಾದ್ಯಗಳನ್ನು ಸವಿಯಲೆಂದು ಮಳಿಗೆಗಳನ್ನು ಹಾಕಲಾಗಿತ್ತಾದರೂ, ಹೆಚ್ಚಿನ ಜನರು ಮೀನಿನ ಖಾದ್ಯದ ಬೆಲೆ ಕೇಳಿ ಹಿಂದಿರುಗುತ್ತಿದ್ದ ದೃಶ್ಯ ಕಂಡುಬಂತು.
“ಮಾರುಕಟ್ಟೆಗಿಂತಲೂ ಸ್ಟಾಲ್ಗಳಲ್ಲಿ ಬೆಲೆ ಜಾಸ್ತಿ ಇದೆ, ಬೆಲೆ ಹೆಚ್ಚಾದರೆ ಜನರು ಕೊಂಡುಕೊಳ್ಳಲು ಬಯಸಲ್ಲ. ಜನಸಾಮಾನ್ಯರು ಕೂಡ ಮೀನಿನ ಖಾದ್ಯಗಳನ್ನು ಸವಿಯುವಂತಾಗಬೇಕಾದರೆ ಬೆಲೆ ಕಡಿಮೆ ಮಾಡಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮುಂದಿನ ಮತ್ಸ್ಯ ಮೇಳದಲ್ಲಾದರೂ ಈ ಬಗ್ಗೆ ಗಮನಹರಿಸಲಿ” ಎಂಬ ಮಾತು ಸ್ಟಾಲ್ನ ಪಕ್ಕ ನಿಂತಿದ್ದ ಹಿರಿಯರೋರ್ವರಿಂದ ಕೇಳಿಬಂತು.

ಬಂಗುಡೆ ಮೀನೊಂದಕ್ಕೆ 100₹ಯಂತೆ ಕೆಲವರು ಮಾರಾಟ ಮಾಡುತ್ತಿದ್ದರೆ, ಕೆಲವು ಮಳಿಗೆಯವರು ದೊಡ್ಡಗಾತ್ರದ ಕಾರಣಕ್ಕೆ 120ರಿಂದ 140 ರೂ.ವರೆಗೆ ಮಾರಾಟ ಮಾಡುತ್ತಿದ್ದದ್ದು ಕಂಡುಬಂತು. ಅಂಜಲ್ ಮೀನಿನ ಒಂದು ಪೀಸ್ಗೆ 250 ರೂಪಾಯಿಯಾದರೆ, ಫಿಶ್ ಕಬಾಬ್ 220ರಿಂದ 250ರವರೆಗೆ ವ್ಯಾಪಾರಸ್ಥರು ಮಾರುತ್ತಿದ್ದರು.
ಮುರುಡೇಶ್ವರದಿಂದ ಬಂದಿದ್ದ ಮೀನು ವ್ಯಾಪಾರಿ ಮಹಿಳೆ ಕಲಾವತಿ, “ಮುರುಡೇಶ್ವರದಿಂದಲೇ ತಂದಿರುವ ಮೀನನ್ನು ಬೆಂಗಳೂರಿನ ಜನರಿಗೆ ಸವಿಯಲು ನೀಡುತ್ತಿದ್ದೇವೆ. ಬಂಗುಡೆ ತವಾ ಫ್ರೈ, ಫಿಶ್ ಕಬಾಬ್, ಅಂಜಲ್ ಫ್ರೈ ಸೇರಿದಂತೆ ಎಲ್ಲ ರೀತಿಯ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದೇವೆ. ನಮ್ಮ ಸ್ಟಾಲ್ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಪ್ರತಿದಿನವೂ ಬಸ್ ಮೂಲಕ ಮುರುಡೇಶ್ವರದಿಂದ ಮೀನನ್ನು ತರಿಸುತ್ತಿದ್ದೇವೆ. ಮೀನುಗಾರಿಕಾ ಸಚಿವರಾದ ಮಂಕಾಳ್ ವೈದ್ಯ ನಮ್ಮ ಊರಿನವರು. ಮೀನುಗಾರರ ಬದುಕು ಏನೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಸಚಿವರಿಗೆ ಧನ್ಯವಾದ ಸಲ್ಲಿಸಿದರು.

ನ.21ರಿಂದ ಆರಂಭಗೊಂಡಿರುವ ಮತ್ಸ್ಯಮೇಳಕ್ಕೆ ಈಗಾಗಲೇ ಸಾವಿರಾರು ಮಂದಿ ಭೇಟಿ ನೀಡಿ, ತರಹೇವಾರಿ ಮೀನಿನ ಖಾದ್ಯಗಳು, ಮೀನುಗಳು, ಮೀನಿನ ಉತ್ಪನ್ನಗಳನ್ನು ನೋಡಿ ಖುಷಿ ಪಟ್ಟರು. ನ.23ರ ಭಾನುವಾರ ಮತ್ಸ್ಯ ಮೇಳದ ಕೊನೆಯ ದಿನವಾಗಿದ್ದು ಪ್ರವೇಶ ಉಚಿತವಾಗಿರುವುದರಿಂದ ಇನ್ನಷ್ಟು ಜನರು ಭೇಟಿ ನೀಡುವ ನಿರೀಕ್ಷೆ ಇದೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.





