ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ “ಬೆಂಗಳೂರು ಕೌಶಲ್ಯ ಶೃಂಗಸಭೆ 2025” ಗೆ ಗುರುವಾರ ತೆರೆ ಬಿದ್ದಿದೆ.
ಈ ಸಭೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜಾಗತಿಕ ಉದ್ಯೋಗಾವಕಾಶಗಳ ಕುರಿತು ಉನ್ನತ ಮಟ್ಟದ ಚಿಂತನೆಗೆ ವೇದಿಕೆಯಾಯಿತು. ಕರ್ನಾಟಕವನ್ನು ಜಗತ್ತಿಗೆ ಕೌಶಲ್ಯದ ದ್ವಾರವನ್ನಾಗಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅಂತಾರಾಷ್ಟ್ರೀಯ ತಜ್ಞರು ಶ್ಲಾಘಿಸಿದರು. ಶೃಂಗಸಭೆಯಲ್ಲಿ ಜರ್ಮನಿ ಮತ್ತು ಭಾರತದ ನಡುವಿನ ಕೌಶಲ್ಯ ಸಹಯೋಗ, ಸೇರಿದಂತೆ ಉದ್ಯೋಗಾವಕಾಶಗಳು, ಸೇರ್ಪಡೆ, ಡಿಜಿಟಲ್ ಪರಿವರ್ತನೆ ಮತ್ತು ಭವಿಷ್ಯದ ಕೌಶಲ್ಯಗಳ ಬಗ್ಗೆ ವಿಸ್ತೃತ ಚರ್ಚೆಗಳು ನಡೆದವು.
ಜರ್ಮನಿಯ ಡೀಫಾ ಏಜೆನ್ಸಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಥೋರ್ಸ್ಟನ್ ಕೀಫರ್ ಇಂದಿನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಅವರು ಜರ್ಮನಿಯ ಕೌಶಲ್ಯ ಕ್ಷೇತ್ರದ ಅನುಭವ ಹಂಚಿಕೊಂಡು “ಜರ್ಮನಿಗೆ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಾತ್ರ 2000 ಕ್ಕೂ ಹೆಚ್ಚು ಭಾರತೀಯರನ್ನು ಕಳುಹಿಸಲಾಗಿದೆ. ನಾವು ಭಾರತದ ಯುವಜನರಿಗಾಗಿ ಮೂರು ಪ್ರಮುಖ ವಿಷಯಗಳಾದ ಉತ್ತಮ ಗುಣಮಟ್ಟದ ಭಾಷಾ ತರಬೇತಿ ಮತ್ತು ಪರೀಕ್ಷೆಗಳು, ಸಾಮಾಜಿಕ ಏಕೀಕರಣ ಮತ್ತು ಪ್ರಾಯೋಗಿಕ ಕೌಶಲ್ಯಾಭ್ಯಾಸ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ವಿದೇಶದಲ್ಲಿ ಕೆಲಸ ಮಾಡಲು ಬಯಸುವ ಯುವಕರು ಅಲ್ಲಿ ಮಾತನಾಡುವ ಭಾಷೆಯಲ್ಲಿ ನಿಪುಣರಾಗಬೇಕು. ಕೇವಲ ಪುಸ್ತಕದ ಪಾಠವಲ್ಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯವನ್ನು ಕಲಿಯಬೇಕು. ತರಬೇತಿ ಸಂಸ್ಥೆಗಳಲ್ಲಿ ಈ ನೈಪುಣ್ಯ ತರಬೇತಿಯನ್ನು ಅಳವಡಿಸುವುದು ಅತ್ಯಂತ ಅಗತ್ಯ’ ಎಂದರು.
ಇದೇ ಸಂದರ್ಭದಲ್ಲಿ ಕೀಫರ್ ಅವರು ಕರ್ನಾಟಕ ಸರ್ಕಾರದ ಜರ್ಮನ್ ಭಾಷಾ ಪ್ರಯೋಗಾಲಯಗಳ ಸ್ಥಾಪನೆಯನ್ನು ಶ್ಲಾಘಿಸಿದರು “ಜರ್ಮನಿಯ ಡ್ಯೂಸೆಲ್ಡಾರ್ಫ್ ನಗರ ಮತ್ತು ಕರ್ನಾಟಕ ರಾಜ್ಯದ ನಡುವಿನ 2023ರ ಎಂಒಯು (MOU) ಸಹಕಾರದ ಹೊಸ ಅಧ್ಯಾಯ ತೆರೆದಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಪ್ರಾರಂಭಿಕ ಯೋಜನೆಗಳು ಸಂಪೂರ್ಣವಾಗಿ ಸ್ಥಾಪಿತ ಮಾರ್ಗಗಳಾಗಿ ರೂಪಾಂತರಗೊಳ್ಳುತ್ತವೆ. ಭಾರತ ಮತ್ತು ಜರ್ಮನಿಯ ಯುವ ಪ್ರತಿಭೆಗಳಿಗೆ ಪರಸ್ಪರ ಅಭಿವೃದ್ಧಿಯ ಸೇತುವೆಯಾಗಲಿದೆ” ಎಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಮ್ಯೂ ಸಿಗ್ಮಾ ಇಂಕ್. ಇಂಡಿಯಾ ನಿರ್ದೇಶಕ ಅಲೋಕೇಶ್ ದಾಸ್ ಮತ್ತು ಫಿಲಿಪ್ಸ್ ಇನೋವೇಷನ್ ಕ್ಯಾಂಪಸ್, ಬೆಂಗಳೂರು ಸಂಸ್ಥೆಯ ಮುಖ್ಯಸ್ಥರಾದ ಅರವಿಂದ ಐಶ್ನವ್ ಮಾತನಾಡಿದರು.
ಇದನ್ನು ಓದಿದ್ದೀರಾ? ಕರ್ನಾಟಕವನ್ನು ಜ್ಞಾನ ಮತ್ತು ಕೌಶಲ್ಯ ರಾಜಧಾನಿಯನ್ನಾಗಿಸುತ್ತೇವೆ: ಸಚಿವ ಪ್ರಿಯಾಂಕ್ ಘೋಷಣೆ
“ಇಂದು ಇರುವ ಉದ್ಯೋಗಗಳು ಎರಡು ವರ್ಷಗಳಲ್ಲಿ ಇರದಿರಬಹುದು. ಬದಲಾವಣೆಯ ವೇಗ ಅತ್ಯಂತ ಹೆಚ್ಚಾಗಿರುತ್ತದೆ. ತಾಂತ್ರಿಕ ಶಿಕ್ಷಣ, ಉದ್ಯಮ-ಅಕಾಡೆಮಿಯಾ ಸಹಕಾರ ಮತ್ತು ಅಪ್ರೆಂಟಿಸ್ ಯೋಜನೆಗಳನ್ನು ಬಲಪಡಿಸುವ ಅಗತ್ಯ ಇದೆ ಎಂದು ಅಲೋಕೇಶ್ ದಾಸ್ ಹೇಳಿದರೆ, ಡಿಜಿಟಲ್, ಡೇಟಾ ಮತ್ತು ಡೊಮೇನ್ — ಇವು ಮುಂದಿನ ದಶಕದ ಮೂರೂ ಪ್ರಮುಖ ಕೌಶಲ್ಯ ಅಸ್ತ್ರಗಳು. ಜೊತೆಗೆ ಸಹಯೋಗ, ಸೃಜನಶೀಲತೆ ಮತ್ತು ತಂತ್ರಜ್ಞಾನ ಬಳಕೆಯಂತಹ ಸಾಫ್ಟ್ ಕೌಶಲ್ಯಗಳು ಉದ್ಯೋಗಾರ್ಹತೆಯನ್ನು ಹೆಚ್ಚಿಸುತ್ತವೆ ಎಂದು ಅರವಿಂದ ಐಶ್ನವ್ ಅಭಿಪ್ರಾಯ ಪಟ್ಟರು.
“ಕಂಟ್ರಿ ಪಾರ್ಟ್ನರ್ ಸೆಷನ್ ಬೈ ಜರ್ಮನ್ ಮಿಷನ್ಸ್ ಇನ್ ಇಂಡಿಯಾ | ಗ್ಲೋಬಲ್ ಆಪರ್ಚುನಿಟೀಸ್: ಪಾಥ್ವೇಸ್ ಟು ಜರ್ಮನಿ” ಎಂಬ ವಿಷಯವಾಗಿ ನಡೆದ ಕಾರ್ಯಾಗಾರದಲ್ಲಿ ಬೆಂಗಳೂರಿನಲ್ಲಿರುವ ಜರ್ಮನ್ ಕಾನ್ಸುಲೇಟ್ ಉಪ ರಾಯಭಾರಿ ಅನೆಟ್ ಬೆಸ್ಲರ್. ಇಂಡೋ-ಜರ್ಮನ್ ಚೇಂಬರ್ ಆಫ್ ಕಾಮರ್ಸ್ ಮುಖ್ಯಸ್ಥರಾದ ಡೆನಿಸ್ ಐಚ್ಹೋರ್ನ್ ಮತ್ತು ಬೆಂಗಳೂರಿನ ಗೋಯಥೆ ಇನ್ಸ್ಟಿಟ್ಯೂಟ್ / ಮ್ಯಾಕ್ಸ್ ಮುಲ್ಲರ್ ಭವನದ ನಿರ್ದೇಶಕರಾದ ಡಾ. ಮೈಕಲ್ ಹೈನ್ಸ್ಟ್ ಭಾಗವಹಿಸಿದ್ದರು. ಈ ಅಧಿವೇಶನದಲ್ಲಿ ಅವರು ಜರ್ಮನಿಯತ್ತ ವೃತ್ತಿಪರ ಮಾರ್ಗಗಳು, ನ್ಯಾಯಸಮ್ಮತ ವಲಸೆ ನೀತಿಗಳು ಹಾಗೂ ಭಾಷಾ ಮತ್ತು ಸಾಂಸ್ಕೃತಿಕ ಏಕೀಕರಣದ ಅಗತ್ಯತೆ ಕುರಿತು ಚರ್ಚಿಸಿದರು.
ಶೃಂಗಸಭೆಯ ಇನ್ನೊಂದು ಗಮನ ಸೆಳೆದ ಚರ್ಚಾ ವೇದಿಕೆ “ಉದ್ಯಮದ ಧ್ವನಿಗಳು: ವ್ಯವಹಾರಕ್ಕೆ ಒಳಗೊಳ್ಳುವಿಕೆ ಏಕೆ ಮುಖ್ಯ” ಎಂಬುದರ ಈ ಚರ್ಚೆಯಲ್ಲಿ ಲೈಟ್ಕ್ಯಾಸ್ಟ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಕಂಟ್ರಿ ಹೆಡ್ ಆದ ಸರಸ್ವತಿ ರಾಮಚಂದ್ರ ಅವರು ಹಲವು ಅಭಿಪ್ರಾಯಗಳನ್ನು ಹಂಚಿಕೊಂಡರು. “ದತ್ತಾಂಶವು ಒಳಗೊಂಡವರ ಕುರಿತಷ್ಟೇ ಹೇಳುತ್ತದೆ, ಹೊರಗುಳಿದವರ ಕುರಿತಂತೆ ಹೇಳುವುದಿಲ್ಲ. ಭಾರತದ ಶೇ. 93 ಕೆಲಸಗಾರರು ಅನೌಪಚಾರಿಕ ಕ್ಷೇತ್ರದಲ್ಲಿದ್ದಾರೆ, ಅವರು ಡಿಜಿಟಲ್ ವಿಶ್ವದ ಅಂಕಿಗಳಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಡಿಜಿಟಲ್, ಆರೋಗ್ಯ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳು ಮುಂದಿನ ವರ್ಷಗಳಲ್ಲಿ ವೇಗವಾಗಿ ಬೆಳೆಯಲಿವೆ. ಆದರೆ ತರಬೇತಿಯನ್ನು ತಳ ಮಟ್ಟದವರಿಗೂ ತಲುಪಿಸದಿದ್ದರೆ, ಅವಕಾಶಗಳು ಅಲ್ಲಿ ನಿಂತುಕೊಳ್ಳುತ್ತವೆ. ವೈವಿಧ್ಯತೆ, ಒಳಗೊಂಡಿಕೆ ಮತ್ತು ಸಮಾನ ಅವಕಾಶಗಳು ಕೇವಲ ನೀತಿಗಳಲ್ಲ; ಅವು ವ್ಯವಹಾರದ ಬೆಳವಣಿಗೆಗೆ ಬಲವಾಗಿವೆ ಎಂದು ತಿಳಿಸಿದರು.
ಶೃಂಗಸಭೆಯ ಅಂತಿಮ ಹಂತದಲ್ಲಿ ಸ್ಕಿಲಿಥಾನ್ ಸ್ಪರ್ಧೆಯ ವಿಜೇತರಿಗೆ, ಕೌಶಲ್ಯ, ಉದ್ಯಮಶೀಲತೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಿವಕಾಂತಮ್ಮ (ಕಾಂತಾ) ನಾಯ್ಕ್ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಶೃಂಗಸಭೆಯು ಕೇವಲ ಕೌಶಲ್ಯಾಭಿವೃದ್ಧಿ ಚರ್ಚೆಯಲ್ಲ; ಅದು ಕರ್ನಾಟಕವನ್ನು ಜಾಗತಿಕ ಕೌಶಲ್ಯ ಕೇಂದ್ರವನ್ನಾಗಿ ರೂಪಿಸುವ ದೃಷ್ಟಿಕೋನದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಜರ್ಮನಿಯಂತಹ ರಾಷ್ಟ್ರಗಳೊಂದಿಗೆ ಸಹಕಾರ, ಭಾಷಾ ತರಬೇತಿ, ಒಳಗೊಳ್ಳುವ ಮೌಲ್ಯಗಳು ಮತ್ತು ತಂತ್ರಜ್ಞಾನಾಧಾರಿತ ಕಲಿಕೆಯ ಮಾರ್ಗಗಳು — ಇವುಗಳ ಸಮನ್ವಯದಿಂದ ಭಾರತವು ಕೌಶಲ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯ ತೆರೆದಿದೆ.





