ಗೌರಿ ಲಂಕೇಶ್ ಅವರಂತವರ ನೆರಳುಗಳು ಬಿದ್ದಿದ್ದರಿಂದಲೇ ನಾನೂ ಕೂಡ ‘ಲ್ಯಾಂಡ್ ಲಾರ್ಡ್’ ರೀತಿಯ ಸಿನಿಮಾಗಳಿಗೆ ಕೈಹಾಕಿದ್ದೇನೆ. ಎಲ್ಲರ ಬೆಂಬಲದೊಂದಿಗೆ ಮುಂದೆ ಸಾಗುತ್ತಿದ್ದೇನೆ. ಈ ಹೋರಾಟವನ್ನು ಯಾರಿಂದಲೂ ನಿಲ್ಲಿಸಲು ಆಗುವುದಿಲ್ಲ ಎಂದು ನಟ ದುನಿಯಾ ವಿಜಯ್ ಹೇಳಿದರು.
ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ ಗೌರಿ ಮೀಡಿಯಾ ಟ್ರಸ್ಟ್ ಆಯೋಗಿಸಿದ್ದ ‘ನಾವೆಲ್ಲರೂ ಗೌರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಬನಶಂಕರಿಯಲ್ಲಿ ಜಿಮ್ ಟ್ರೈನರ್ ಆಗಿದ್ದಾಗ, ಅವರು ಜಿಮ್ಗೆ ಬರುತ್ತಿದ್ದರು. ಜಿಮ್ ಫೀಸ್ ಜೊತೆಗೆ ಹೆಚ್ಚುವರಿ 500 ರೂ. ಕೊಡುತ್ತಿದ್ದರು. ‘ನೀನು ತುಂಬಾ ಹಾರ್ಡ್ ವರ್ಕ್ ಮಾಡ್ತೀಯಾ, ಮುಂದೆ ಏನೋ ಆಗ್ತೀಯಾ’ ಅಂತ ಹೇಳುತ್ತಿದ್ದರು. ಅಂದು 500 ರೂಪಾಯಿ ನನಗೆ ಕೋಟಿ ರೂಪಾಯಿಗೆ ಸಮ. ಅಂದಿನ 500 ರೂ. ಇಂದು ಕೋಟಿ ಜನರ ಮೆಚ್ಚುಯಾಗಿ ದಕ್ಕಿದೆ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡದ ನಿರ್ದೇಶಕಿ ಕವಿತಾ ಲಂಕೇಶ್, “ಗೌರಿ ಎಂದಿಗೂ ತನ್ನ ವೈಯಕ್ತಿಕ ಕೆಲಸಕ್ಕಾಗಿ ಯಾವುದೇ ಕಚೇರಿಗೆ ಹೋದವರಲ್ಲ. ನೊಂದವರಿಗೆ,ಕಷ್ಟದಲ್ಲಿರುವವರಿಗೆ ನೆರವು ಕೊಡಿಸಲೆಂದು ಮಾತ್ರವೇ ಹೋಗುತ್ತಿದ್ದರು. ಗೌರಿ ಹೆಸರಿನಲ್ಲಿ ಪತ್ರಿಕಾ ಪ್ರಶಸ್ತಿ ಆರಂಭಸಲಾಗಿತ್ತು. ಅದು ಸ್ಥಗಿತಗೊಂಡಿದೆ. ಅದನ್ನು ಪುನರಾರಂಭಿಸಲಾಗುವುದು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ‘ಸ್ಕಾಲರ್ಶಿಪ್’ ಆರಂಭಿಸುವ ಚಿಂತನೆ ಇದೆ” ಎಂದು ತಿಳಿಸಿದರು.
ಗೌರಿ ಮೀಡಿಯಾ ಟ್ರಸ್ಟ್ನ ನೂರ್ ಶ್ರೀಧರ್ ಮಾತನಾಡಿ, “ನಕ್ಸಲ್ ಚಳುವಳಿಯಲ್ಲಿದ್ದವರು ಮುಖ್ಯವಾಹಿನಿಗೆ ಬಂದು ಜನರ ನಡುವೆ ಕೆಲಸ ಚಳುವಳಿ ಕಟ್ಟಲು ಸಾಧ್ಯವಾಗಿದ್ದು ಗೌರಿ ಅವರಿಂದ. ನಕ್ಸಲ್ ಹೋರಾಟಗಾರರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಿದರು. ಕಾಡಿನಲ್ಲಿದ್ದವರು ನಾಡಿಗೆ ಮರಳಲು ವೇದಿಕೆ ರೂಪಿಸಿದ್ದರು. ಅವರು ರೂಪಿಸಿದ ವೇದಿಕೆಯಿಂದ ಹಲವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ” ಎಂದು ಹೇಳಿದರು.
“ಹಲವರು ಮುಖ್ಯವಾಹಿನಿಗೆ ಬರುವ ವೇಳೆಗೆ ಗೌರಿ ಇರಲಿಲ್ಲ. ಆದರೆ, ಅವರು ಹಾಕಿಕೊಟ್ಟ ಹಾದಿಯಲ್ಲಿ ಹಲವರು ಕಾಡಿನಿಂದ ನಾಡಿಗೆ ಬಂದಿದ್ದಾರೆ. ಕಳೆದ ವರ್ಷ ನಕ್ಸಲ್ ಚಳುವಳಿಯಲ್ಲಿದ್ದವರು ಮುಖ್ಯವಾಹಿನಿಗೆ ಬರುವ ಚರ್ಚೆಗಳು ನಡೆದಾಗ, ಕಾಡಿನ ಹಕ್ಕಿಗಳನ್ನು ತಂದು ಪಾಪದ ಪಂಜರದಲ್ಲಿ ಹಾಕುವಂತೆ ಮಾಡಬೇಡಿ ಎಂದು ಸಿದ್ದರಾಮಯ್ಯರಿಗೆ ಹೇಳಿದ್ದೆವು. ನಾಡಿಗೆ ತಂದೇ ತರುತ್ತೇವೆಂದು ಭರವಸೆ ನೀಡಿದ್ದರು. ಆದರೆ, ಇಂದಿಗೂ ಕಾಡಿನ ಹಕ್ಕಿಗಳು ಜೈಲಿನಲ್ಲಿದ್ದಾರೆ. ಗೌರಿ ಇದ್ದಿದ್ದರೆ, ಈ ಪರಿಸ್ಥಿತಿ ಇರುತ್ತಿರಲಿಲ್ಲ” ಎಂದರು.
“ಗೌರಿ ಎಂದರೆ ಅದಮ್ಯ ಚೇತನ. ಇಂದಿಗೂ ನಮ್ಮೆಲ್ಲರನ್ನೂ ಬೆಸೆದಿರುವುದು ಗೌರಿಯೇ” ಎಂದರು.
ಕಾರ್ಯಕ್ರಮದಲ್ಲಿ ಶಿವಸುಂದರ್ ರಚನೆಯ, ಹಂಸಲೇಕ ಸಂಗೀತ ಸಂಯೋಜಿಸಿರುವ ‘ತಮಂಧದ ಘನವು’ ಹಾಡನ್ನು ಬಿಡುಗಡೆ ಮಾಡಲಾಯಿತು. ಹಲವರು ಗೌರಿ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್, ರಾಜಲಕ್ಷ್ಮಿ ಅಂಕಲಗಿ, ಶಿವಸುಂದರ್, ನಗರಕೆರೆ ರಮೇಶ್, ಆಝಾದ್ ಕಂಡಿಗ ಸೇರಿದಂತೆ ಹಲವರು ಇದ್ದರು.




