ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಲ್ಲಿಯೂ ಪಟಾಕಿ ಶಬ್ದದ ಹಾವಳಿಯೇ ಹೆಚ್ಚಾಗಿರುತ್ತದೆ. ಪಟಾಕಿ ಇಲ್ಲದೇ ದೀಪಾವಳಿ ಹಬ್ಬವೇ ಅಪೂರ್ಣ ಎಂದು ಹಲವರು ಭಾವಿಸುತ್ತಾರೆ. ಸದ್ಯ ರಾಜ್ಯದಲ್ಲಿ ಸಾಮಾನ್ಯ ಪಟಾಕಿಗಳನ್ನು ನಿಷೇಧಿಸಿ ಬರೀ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಅವಕಾಶ ನೀಡಲಾಗಿದೆ. ಆದರೆ ಹಸಿರೆಂದರೆ ಉಸಿರಲ್ಲ. ಇತರೆ ಪಟಾಕಿಗಿಂತ ಕೊಂಚ ಕಡಿಮೆ ಅಪಾಯಕಾರಿಯಾಗಿದ್ದರೂ, ಹಸಿರು ಪಟಾಕಿಯೂ ನಮ್ಮ ಆರೋಗ್ಯ, ಪರಿಸರಕ್ಕೆ ಅಪಾಯಕಾರಿ.
ಸದ್ಯ ಸಾಮಾನ್ಯ ಪಟಾಕಿ ಬದಲಾಗಿ, ಹಸಿರು ಪಟಾಕಿಯೆಡೆ ಜನರು ವಾಲುತ್ತಿದ್ದಾರೆ. ಈ ಮೂಲಕ ನಾವು ಪರಿಸರಕ್ಕೆ ಆಗುವ ಹಾನಿಯನ್ನು ತಡೆಯುತ್ತಿದ್ದೇವೆ ಎಂಬ ಭ್ರಮೆಯೂ ಕೆಲವರಿಗಿದೆ. ಆದರೆ ಇದೂ ಅಪಾಯಕಾರಿ. ಸಾಮಾನ್ಯ ಪಟಾಕಿಗಿಂತ ಶೇಕಡ 30ರಷ್ಟು ಕಡಿಮೆ ವಾಯುಮಾಲಿನ್ಯವನ್ನು ಈ ಹಸಿರು ಪಟಾಕಿಗಳು ಉಂಟು ಮಾಡುತ್ತವೆ.
ಇದನ್ನು ಓದಿದ್ದೀರಾ? ದೀಪಾವಳಿ 2025 | ರಾಜ್ಯದಲ್ಲಿ ಪಟಾಕಿ ದಾಸ್ತಾನು, ವಿತರಣೆ ನಿಯಮ ಏನು ಹೇಳುತ್ತದೆ?
ಏನಿದು ಹಸಿರು ಪಟಾಕಿ, ವಾಯುಮಾಲಿನ್ಯ ತಡೆಯುತ್ತದೆಯೇ?
2018ರ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಹಾಗೂ ವಾಯುಮಾಲಿನ್ಯ ತಡೆ ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ 2020ರಲ್ಲಿ ಅಂದಿನ ಸರ್ಕಾರ ಪಟಾಕಿ ನಿಷೇಧಿಸಿತ್ತು. ಅಲ್ಲದೆ ಹಸಿರು ಪಟಾಕಿ ಸಿಡಿಸುವಂತೆ ಸೂಚಿಸಿತ್ತು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಅಭಿವೃದ್ದಿಪಡಿಸಿದ ಈ ಹಸಿರು ಪಟಾಕಿಗಳು ಶೆಲ್ ಗಾತ್ರಕ್ಕಿಂತಲೂ ಸಣ್ಣದಾಗಿರುವ ಈ ಪಟಾಕಿಗಳು ಸಿಡಿದಾಗ ಹೊಗೆ, ಶಬ್ಧದ ಬದಲಾಗಿ ಬೆಳಕು ಬರುತ್ತದೆ. ಶೇ.30ರಷ್ಟು ಮಾಲಿನ್ಯವನ್ನು ಈ ಪಟಾಕಿಗಳು ತಡೆಯುತ್ತದೆ. ಸಾಮಾನ್ಯವಾಗಿ ಪಟಾಕಿಗಳಲ್ಲಿ ಲೀಥಿಯಂ, ಚಾರ್ಕೋಲ್, ಬೇರಿಯಂ ನೈಟ್ರೇಟ್, ಆರ್ಸೆನಿಕ್, ವಿಷಕಾರಿ ಲೋಹಗಳು ಇರುತ್ತವೆ. ಆದರೆ ಹಸಿರು ಪಟಾಕಿಗಳಲ್ಲಿ ಥರ್ಮೈಟ್ ಮತ್ತು ಅಲ್ಯೂಮಿನಿಯಂ ಹುಡಿಗಳಿರುತ್ತವೆ. ಇವು ನೀರಿನಲ್ಲಿ ಕರಗುತ್ತವೆ.
ಹಸಿರು ಪಟಾಕಿ ಉತ್ಪಾದನೆಗೆ ಸರ್ಕಾರ ದೇಶದ 230 ಕಂಪನಿಗಳಿಗೆ ಮಾತ್ರ ಅನುಮತಿ ನೀಡಿದೆ. ಇವುಗಳನ್ನು ಮಾರಾಟ ಮಾಡಲು ಪರವಾನಿಗೆ ಅತ್ಯಗತ್ಯ. ಬೀದಿ ಬದಿ ವ್ಯಾಪಾರಿಗಳಿಂದ ಹಸಿರು ಪಟಾಕಿಗಳನ್ನು ಖರೀದಿಸಬಾರದು. ಪರವಾನಗಿ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಹಸಿರು ಪಟಾಕಿಗಳ ಪ್ಯಾಕ್ ಮೇಲೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಇರುತ್ತದೆ. ಇದರ ಮೂಲಕ ಗುರುತಿಸಬಹುದು. ಅಲ್ಲದೆ ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಇರಲಿದೆ.
ಇದನ್ನು ಓದಿದ್ದೀರಾ? ವಾಯುಮಾಲಿನ್ಯ | ದೆಹಲಿಯನ್ನು ಹಿಂದಿಕ್ಕಲು ಬೆಂಗಳೂರಿನ ಓಟ!
ಗ್ರಾಹಕರು ಪ್ಲೇಸ್ಟೋರ್ನಲ್ಲಿ CSIR, NEERI ಗ್ರೀನ್ ಕ್ಯೂಆರ್ ಕೋಟ್ ಅಪ್ಲಿಕೇಶನ್ ಬಳಸಿ ಸ್ಕ್ಯಾನರ್ಅನ್ನು ಡೌನ್ಲೋಡ್ ಮಾಡಿ ಅದರ ಮೂಲಕ ಹಸಿರು ಪಟಾಕಿಗಳನ್ನು ಗುರುತಿಸಬಹುದು. SWAS, SAFAL ಮತ್ತು STAR ಎಂಬ ಮೂರು ವರ್ಗದಲ್ಲಿ ಹಸಿರು ಪಟಾಕಿಗಳು ಸಿಗುತ್ತವೆ. ಇವನ್ನು CSIR ಅಭಿವೃದ್ಧಿಪಡಿಸಿವೆ.
ಆದರೆ ಹಸಿರು ಪಟಾಕಿ ಸೂಕ್ತವೇ?
ಹಸಿರು ಪಟಾಕಿಯೂ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ತಜ್ಞರುಗಳು ಹೇಳುತ್ತಾರೆ. ಹಸಿರು ಪಟಾಕಿಗಳೂ ರಾಸಾಯನಿಕದಿಂದ ಕೂಡಿರುತ್ತದೆ. ಇದು ಖಂಡಿತವಾಗಿಯೂ ಪರಿಸರಕ್ಕೆ ದುಷ್ಪರಿಣಾಮ ಬೀರುತ್ತವೆ. ಈ ಪಟಾಕಿಗಳು ಉರಿಯಲು, ಸ್ಫೋಟಗೊಳ್ಳಲು, ಹೆಚ್ಚು ಪ್ರಕಾಶಮಾನವಾಗಿ ಕಾಣಲು ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹೀಗಾಗಿ ಪಟಾಕಿಗಳನ್ನೇ ನಿಷೇಧಿಸಿದರೆ ಉತ್ತಮ ಎಂದು ಕೆಲವು ಪರಿಸರ ತಜ್ಞರು ಅಭಿಪ್ರಾಯಿಸಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆ ಮಾತನಾಡಿದ ಹೃದ್ರೋಗ ತಜ್ಞ ವೈದ್ಯ ಪ್ರದೀಪ್, “ಹಸಿರು ಪಟಾಕಿ ಬಳಸುವುದರಿಂದ ವಾಯುಮಾಲಿನ್ಯ ಕಡಿಮೆಯಾಗಬಹುದೇ ಹೊರತು, ಇದು ಸಂಪೂರ್ಣವಾಗಿ ವಾಯುಮಾಲಿನ್ಯಕ್ಕೆ ತಡೆಯಲ್ಲ. ಜನರ ಆರೋಗ್ಯಕ್ಕೆ ಖಂಡಿತವಾಗಿಯೂ ಪ್ರಭಾವ ಬೀರುತ್ತದೆ. ಪಟಾಕಿಯಿಂದ ಶಬ್ದ ಮಾಲಿನ್ಯವಾಗುತ್ತದೆ. ಇದು ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ಹೃದಯದ ಸಮಸ್ಯೆ ಇರುವವರಿಗೆ ಅತಿ ಶಬ್ದದಿಂದ ಒತ್ತಡ ಹೆಚ್ಚಾಗಿ ಹೃದಯಾಘಾತ ಉಂಟಾಗುವ ಸಾಧ್ಯತೆಯಿರುತ್ತದೆ. ರಕ್ತದೊತ್ತಡವೂ ಏರುಪೇರಾಗುವ ಸಾಧ್ಯತೆಗಳಿವೆ. ಚಳಿಗಾಲ ಆರಂಭವಾಗುವ ಸಮಯದಲ್ಲೇ ದೀಪಾವಳಿ ಬರುತ್ತದೆ. ಒಂದೆಡೆ ಹವಾಮಾನ ಬದಲಾಗುವಾಗ ಜನರು ಸಂಭ್ರಮಿಸುತ್ತಾ ಪಟಾಕಿಯನ್ನು ಸಿಡಿಸುತ್ತಾರೆ. ಆದರೆ ಇದು ಅಸ್ತಮಾ, COPD, ಮೊದಲಾದ ಶ್ವಾಸಕೋಶ ಸಂಬಂಧಿತ ಆರೋಗ್ಯ ಸಮಸ್ಯೆಗಳಿದ್ದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉಸಿರಾಟದ ಸಮಸ್ಯೆ ಇದ್ದವರಿಗೆ ತುಂಬಾ ಕಷ್ಟ ಉಂಟಾಗುತ್ತದೆ. ಹಸಿರು ಪಟಾಕಿಯಿಂದ ಸಮಸ್ಯೆಗಳು ಕಡಿಮೆಯಾಗಬಹುದೇ ಹೊರತು ಸಂಪೂರ್ಣವಾಗಿ ವಾಯುಮಾಲಿನ್ಯ ತಡೆಗಟ್ಟಲಾಗದು. ಆದ್ದರಿಂದ ಪಟಾಕಿ ಹೊಡೆಯದಿರುವುದೇ ಉತ್ತಮ” ಎಂದು ಜನರಿಗೆ ಸಲಹೆ ನೀಡಿದ್ದಾರೆ.
ದೀಪಾವಳಿ ಬೆಳಕಿನ ಹಬ್ಬವಾಗಲಿ, ದುರಂತಕ್ಕೆ ಕಾರಣವಾಗದಿರಲಿ. ಮುಂಜಾಗರೂಕತೆಯಿಂದ ಹಬ್ಬ ಆಚರಿಸಿ. ಆದಷ್ಟು ಪಟಾಕಿಯಿಂದ ದೂರ ಇರುವುದೇ ಉತ್ತಮ. ಅದರಲ್ಲೂ ಮಕ್ಕಳನ್ನು ಪಟಾಕಿಯಿಂದ ದೂರವಿರಿಸಿ. ವಾಯುಮಾಲಿನ್ಯ ತಡೆಗಟ್ಟಲು ಜತೆಗೆ ನಿಮ್ಮ ಆರೋಗ್ಯದ ರಕ್ಷಣೆಗಾಗಿ ಪಟಾಕಿ ಬದಲು ದೀಪ ಹಚ್ಚಿರಿ.





