ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದವರ ಪೈಕಿ ಬರೋಬ್ಬರಿ 1,06,922 ಫಲಾನುಭವಿಗಳಿಗೆ ಮರಣದ ನಂತರವೂ ಗೃಹಲಕ್ಷ್ಮಿ ಹಣ ಪಾವತಿಯಾಗಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ನಡೆದ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರು ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಅಂಕಿ-ಅಂಶಗಳ ಸಹಿತ ಮಾಹಿತಿ ನೀಡಿದ್ದು, “2025ರ ನವೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 1.29 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಈ ಪೈಕಿ ಪ್ರಾರಂಭದಿಂದ ಈವರೆಗೆ 2,47,554 ಫಲಾನುಭವಿಗಳು ಮೃತಪಟ್ಟಿದ್ದಾರೆ. ಇವರಲ್ಲಿ 1,06,922 ಫಲಾನುಭವಿಗಳಿಗೆ ಮರಣದ ನಂತರವೂ ಹಣ ಪಾವತಿಯಾಗಿದೆ” ಎಂದು ಸ್ಪಷ್ಟಪಡಿಸಿದರು.
“ಯೋಜನೆಯ ಧನ ಸಹಾಯವನ್ನು ಮೃತ ಫಲಾನುಭವಿಗಳು ಖಾತೆ ಹೊಂದಿರುವ ಬ್ಯಾಂಕ್ಗಳಿಂದ ವಾಪಸ್ ಪಡೆದು ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮೆ ಮಾಡುವಂತೆ ರಾಜ್ಯಮಟ್ಟದ ಬ್ಯಾಂಕ್ರಗಳ ಸಮಿತಿ ಮೂಲಕ ಎಲ್ಲ ಬ್ಯಾಂಕ್ಗಳಿಗೆ ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ SOP(Standard Operating Procedure) ಸಹ ನೀಡಲಾಗಿರುತ್ತದೆ” ಎಂದು ಹೇಳಿದರು.
ಮೃತ ಫಲಾನುಭವಿಗಳ ವಾರಸುದಾರರು ಮರಣ ಪ್ರಮಾಣ ಪತ್ರ ಪಡೆದ ನಂತರದಲ್ಲಿ ಇ-ಜನ್ಮ ಪೋರ್ಟಲ್ನಲ್ಲಿ ಮಾಹಿತಿ ದಾಖಲಾಗುತ್ತದೆ. ಪ್ರಸ್ತುತ, ಮರಣ ಹೊಂದಿದ ಫಲಾನುಭವಿಗಳ ಮಾಹಿತಿಯನ್ನು ಪ್ರತಿ 15 ದಿನಗಳಿಗೊಮ್ಮೆ ಇ-ಆಡಳಿತ ಕೇಂದ್ರದ ಕುಟುಂಬ ಪೋರ್ಟಲ್, ಇ-ಜನ್ಮ ಪೋರ್ಟಲ್ನಿಂದ ಮಾಹಿತಿ ಪಡೆದು EDCSನೊಂದಿಗೆ ಬ್ರಾಡ್ಕಾಸ್ಟ್ ಮಾಡಲಾಗುತ್ತಿದೆ. ತದನಂತರ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕಂತಿನ ಪಾವತಿಗೂ ಮುನ್ನ ಮರಣ ಹೊಂದಿದ ಫಲಾನುಭವಿಯ ಮಾಹಿತಿಯನ್ನು ಇ-ಜನ್ಮ ಪೋರ್ಟಲ್ನಲ್ಲಿನ ಮಾಹಿತಿಯನುಸಾರ ಅಪ್ಡೇಟ್ ಮಾಡಿದ ನಂತರದಲ್ಲಿ ಕ್ರಮವಹಿಸಲಾಗುತ್ತದೆ” ಎಂದು ತಿಳಿಸಿದರು.
ಹಣ ಬಿಡುಗಡೆ ವಿಳಂಬ ಹಾಗೂ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸದಾ ಚರ್ಚೆಗೆ ಗ್ರಾಸವಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಇದೀಗ ಮತ್ತೊಂದು ಯಡವಟ್ಟು ಬಹಿರಂಗವಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವ ಮಾಹಿತಿ ಖುದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರೇ ಬಹಿರಂಗಪಡಿಸಿದ್ದಾರೆ. ಅಂದರೆ, ಈ ನಿರ್ಲಕ್ಷ್ಯದ ಹೊಣೆಯನ್ನು ಇಲಾಖೆ, ಸಚಿವರು, ಅಧಿಕಾರಿಗಳು ಹೊರಬೇಕಲ್ಲವೇ? ಎಂಬುದು ಸಾರ್ವಜನಿಕರ ಅಭಿಮತ.
ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000 ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಿದ್ದು ಸುಳ್ಳಲ್ಲ. ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಬದುಕಿಗೆ ಆಸರೆಯಾದ ಉದಾಹರಣೆಗಳು ಕಣ್ಮುಂದೆ ಇವೆ.
ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡ ಕೆಲವರು ಅನಾರೋಗ್ಯ, ವಯೋಸಹಜ ಕಾಯಿಲೆ, ಅಪಘಾತ ವಿವಿಧ ಕಾರಣದಿಂದ ಮೃತಪಟ್ಟಿದ್ದಾರೆ. ಆದರೆ, ಕಾಲಕಾಲಕ್ಕೆ ಅವರ ವಿವರವನ್ನು ಪರಿಶೀಲಿಸುವ ಕೆಲಸವನ್ನು ಇಲಾಖೆ ಅಧಿಕಾರಿಗಳು ಮಾಡದೇ ಇರುವುದರಿಂದ ಈ ಯಡವಟ್ಟು ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಮೃತರ ಖಾತೆಗಳನ್ನು ಪರಿಷ್ಕರಿಸಿ ಜಮೆಯಾದ ಹಣ ರಿಕವರಿ ಮಾಡಲಾಗುವುದು ಎಂಬುದು ಗ್ಯಾರಂಟಿ ಅನುಷ್ಠಾನ ಸಮಿತಿ ಹೇಳುತ್ತಿದೆ. ಆದರೂ ಅದು ಸುಲಭದ ಕೆಲಸವೇ? ಇದು ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸುವುದಂತೂ ಸತ್ಯ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಮರಣ ಹೊಂದಿದ 1,06,922 ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 5,72,657 ಕಂತುಗಳಿಗೆ ಪ್ರತಿ ತಿಂಗಳು ₹2,000ರಂತೆ ಡಿಬಿಟಿ ಮುಖಾಂತರ ಮೃತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ. ಈ ಹಣವನ್ನು ವಾಪಸ್ ಪಡೆಯಲು ಸರ್ಕಾರ ಇದೀಗ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ನಿರ್ಲಕ್ಷ್ಯ ತೋರಿದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಏನು? ಸರ್ಕಾರಿ ಬೊಕ್ಕಸಕ್ಕೆ ಆಗಿರುವ ಕೋಟ್ಯಂತರ ನಷ್ಟದ ಬಗ್ಗೆ ಇಲಾಖೆ ಸಚಿವರ ಕ್ರಮವೇನು?
ಬೆಳಗಾವಿಯಲ್ಲಿ ಹೆಚ್ಚು :
ಬೆಳಗಾವಿ ಜಿಲ್ಲೆಯಲ್ಲಿ 19,345 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿ ಮೃತಪಟ್ಟಿದ್ದಾರೆ. ಈ ಪೈಕಿ 8,549 ಮೃತ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ 47,427 ಕಂತುಗಳಲ್ಲಿ ಜಮೆಯಾಗಿದೆ. ಇನ್ನು ನಂತರದಲ್ಲಿ ತುಮಕೂರು-6,914, ಬೆಂಗಳೂರು ನಗರ-6,146, ಮೈಸೂರು-5,851 ಹಾಗೂ 4,927 ಮೃತ ಫಲಾನುಭವಿಗಳಿಗೆ ಹಣ ಪಾವತಿಯಾಗಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ
ಇನ್ನು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕಲಬುರಗಿ-3,717, ಬೀದರ್-2,559, ರಾಯಚೂರು-3,125, ಬಳ್ಳಾರಿ-2,186, ಕೊಪ್ಪಳ-2,612, ಯಾದಗಿರಿ-1762 ಹಾಗೂ ವಿಜಯನಗರ-2,415 ಮೃತ ಮಹಿಳೆಯರ ಖಾತೆ ಗೃಹಲಕ್ಷ್ಮಿ ಹಣ ವಿವಿಧ ಕಂತುಗಳಲ್ಲಿ ಪ್ರತಿ ತಿಂಗಳು ₹2,000 ಧನಸಹಾಯ ಜಮೆ ಆಗಿರುವುದು ತಿಳಿದುಬಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ನೀಡಿರುವ ಮಾಹಿತಿಯಂತೆ, ಇಂತಹ ಲೋಪಗಳನ್ನು ತೊಡೆದುಹಾಕಲು ಸರ್ಕಾರವು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಮರಣ ಪ್ರಮಾಣಪತ್ರಗಳ ಆಧಾರದಲ್ಲಿ ಡೇಟಾಬೇಸ್ ಸ್ವಚ್ಛಗೊಳಿಸುವುದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ಮತ್ತು ಸಾಫ್ಟ್ವೇರ್ ಆಧಾರಿತ ಮಾನಿಟರಿಂಗ್ ವ್ಯವಸ್ಥೆಯನ್ನು ಬಲಪಡಿಸುವುದು ಅಗತ್ಯ.
ಇಲ್ಲದಿದ್ದರೆ ಯೋಜನೆಯ ಪ್ರಾಮಾಣಿಕತೆ ಕಳೆದುಕೊಳ್ಳುತ್ತದೆ ಮತ್ತು ನಿಜವಾದ ಅರ್ಹ ಮಹಿಳೆಯರಿಗೆ ಇದರ ಲಾಭ ತಲುಪದಂತಾಗುತ್ತದೆ. ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು, ಗೃಹಲಕ್ಷ್ಮಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಮಾತ್ರ ರಾಜ್ಯದ ಮಹಿಳಾ ಸಬಲೀಕರಣದ ಗುರಿ ಸಾಧ್ಯವಾಗಬಹುದು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




