ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಬಗ್ಗೆ ಶುಕ್ರವಾರದ ವಿಧಾನಸಭೆ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆದು, ವಿಪಕ್ಷ ಸದಸ್ಯರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಗೃಹಲಕ್ಷ್ಮಿ ಯೋಜನೆಯ ಹಣ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ. ಆದರೆ, ಸಚಿವರು ಈ ಕುರಿತಂತೆ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಸದನದಲ್ಲೇ ಆರೋಪಿಸಿದರು. ವಿಪಕ್ಷ ನಾಯಕ ಆರ್ ಅಶೋಕ್, ಸದಸ್ಯರಾದ ವಿ ಸುನಿಲ್ ಕುಮಾರ್ ಹಾಗೂ ಅರವಿಂದ ಬೆಲ್ಲದ ಅವರು ಟೆಂಗಿನಕಾಯಿ ಅವರ ಆರೋಪವನ್ನು ವಿಸ್ತರಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿದ ದಾಖಲೆ ಬಿಡುಗಡೆ ಮಾಡಿದ ಶಾಸಕ ಮಹೇಶ ಟೆಂಗಿನಕಾಯಿ, “ಗೃಹ ಲಕ್ಷ್ಮಿ ಯೋಜನೆಯ ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ನೀಡಿರುವದಾಗಿ ತಪ್ಪು ಮಾಹಿತಿ ನೀಡಿರುತ್ತಾರೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ಸಂಬಂಧಿತ ಇಲಾಖಾ ಉಪ ನಿರ್ದೇಶಕರು ಫೆಬ್ರವರಿ, ಮಾರ್ಚ್ 2025ರ ಮೊತ್ತ ನೀಡಿಲ್ಲ. ಸಚಿವರು ಈ ವಿಷಯದಲ್ಲಿ ಸದನಕ್ಕೆ ಸುಳ್ಳು ಹೇಳಿದ್ದಾರೆ” ಎಂದು ಗಮನ ಸೆಳೆದರು.
ಸುನಿಲ್ ಕುಮಾರ್ ಮಧ್ಯ ಪ್ರವೇಶಿಸಿ, “ಸಭಾಧ್ಯಕ್ಷರೇ ಪ್ರತಿ ಹಂತದಲ್ಲೂ ಸರ್ಕಾರದ ಸಮರ್ಥನೆಗೆ ಇಳಿಯಬೇಡಿ. ನಮ್ಮ ಕಡೆಯೂ ಗಮನ ಹರಿಸಿ. ಯಾವ ಶಾಸಕರು ಗೈರಾಗಿದ್ದಾರೆ ಎಂದು ಗಮನಕೊಡುವಿರಿ. ಆದರೆ ಸಚಿವರ ಗೈರಿನ ಬಗ್ಗೆ ನೀವು ತುಟಿಯೇ ಬಿಚ್ಚುವುದಿಲ್ಲ. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಸಚಿವರು ಎಲ್ಲಿದ್ದಾರೆ? ಕನಿಷ್ಠ 9 ಸಚಿವರು ಹಾಜರಿರಬೇಕು ಎಂದು ಹೇಳುತ್ತೀರಿ? ಕಲಾಪದಲ್ಲಿ ಇಬ್ಬರು ಸಚಿವರಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಆರ್ ಅಶೋಕ್ ಮಾತನಾಡಿ, “ಸದನಕ್ಕೆ ಸಚಿವರು ಸುಳ್ಳು ಉತ್ತರ ನೀಡುತ್ತಾರೆ ಎಂದರೆ ಏನು ಅರ್ಥ. ಮುಖ್ಯಮಂತ್ರಿ ಅವರು ಸಚಿವರ ತಪ್ಪುನ್ನು ಸಮರ್ಥಿಸಿಕೊಂಡು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಸರಿಯಾಗಿ ಹಣ ಜಮೆ ಆಗುತ್ತಿಲ್ಲ. ಈ ಬಗ್ಗೆ ನಾವು ಗಮನ ಸೆಳೆದರೆ ಅದರಲ್ಲೂ ಸರ್ಕಾರದಿಂದ ಸದನಕ್ಕೆ ತಪ್ಪು ಉತ್ತರ” ಎಂದು ಕುಟುಕಿದರು.





