ಮಹಿಳೆಯರು ಸ್ವತಂತ್ರವಾಗಿ ದುಡಿಯಲು ಮತ್ತು ಪ್ರಶ್ನಿಸಲು ಮನರೇಗಾ ಯೋಜನೆ ದೊಡ್ಡ ಮಾನಸಿಕ ಬಲ ನೀಡಿತ್ತು. ಎಡಪಕ್ಷಗಳ ಹೋರಾಟದ ಫಲವಾಗಿ ಜಾರಿಯಾದ ಮನರೇಗಾ ಕಾಯ್ದೆ ಗ್ರಾಮೀಣ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಕಾರಣವಾಗಿತ್ತು. ಆದರೆ ಈಗ ವಿವಿಧ ಹೆಸರಿನಲ್ಲಿ ಈ ಕಾಯ್ದೆಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಮನರೇಗಾ ಯೋಜನೆ ತನ್ನ ಮೂಲ ಸ್ವರೂಪದಲ್ಲಿಯೇ ಮುಂದುವರಿಯಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಒತ್ತಾಯಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವೀಯ ಗೌರವಕ್ಕಾಗಿ ಮಹಿಳೆಯರ ಒಗ್ಗಟ್ಟಿನ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಸನ ಜಿಲ್ಲಾ ಘಟಕದಿಂದ ಮಾರ್ಚ್ 7 ಮತ್ತು 8ರಂದು ಎರಡು ದಿನಗಳ ಕಾಲ ಜಾಥಾ, ಸಾರ್ವಜನಿಕ ಸಮಾವೇಶ, ಮೌನ ಜಾಗೃತಿ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದ ಮೊದಲ ದಿನದಂದು ಮಾತನಾಡಿದರು.
ಸಾಹಿತಿ ಡಾ. ಸಬಿತಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, “ಸಾವಿರ ತಲೆ-ಕೈಕಾಲುಗಳಿರುವ ದೌರ್ಜನ್ಯಗಳನ್ನು ಎದುರಿಸಲು ಪದೇಪದೆ ಅವತಾರ ಪುರುಷರೇ ಯಾಕೆ ಬರಬೇಕು? ನಾವು ರಾಮ ಅಥವಾ ಕೃಷ್ಣರಂತೆ ದೌರ್ಜನ್ಯಕಾರರನ್ನು ಕೊಲ್ಲುವುದಿಲ್ಲ. ಬದಲಿಗೆ ದೌರ್ಜನ್ಯ ಎಸಗುವ ಕೈಗಳನ್ನು ಸೋಲಿಸುವುದು ಮತ್ತು ಮನಸ್ಥಿತಿಗಳನ್ನು ಬದಲಿಸುವುದರ ಮೂಲಕವೇ ನಾವು ಜಯ ಸಾಧಿಸುತ್ತೇವೆ. ಹೀಗೆ ಇತಿಹಾಸವನ್ನು ಬರೆಯುತ್ತೇವೆ” ಎಂದರು.
ಜನಪರ ವೈದ್ಯೆ ಡಾ. ಎಚ್ ಎಸ್ ಅನುಪಮ ಮಾತನಾಡಿ, “ಗುಜರಾತ್ ರಾಜ್ಯವನ್ನು 56 ಇಂಚಿನ ಎದೆ ಎಂಬ ರಾಜಕೀಯ ಘೋಷಣೆಯಿಂದಲ್ಲ, ದೌರ್ಜನ್ಯಕ್ಕೆ ವಿರುದ್ಧವಾಗಿ ನಿಂತ ಮಹಿಳೆಯರ ಹೋರಾಟಗಳಿಂದ ಗುರುತಿಸಬೇಕು. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ವಿರುದ್ಧವಾಗಿ ಹೋರಾಡಿ ನ್ಯಾಯ ಪಡೆದ ಬಿಲ್ಕಿಸ್ ಬಾನು, ದಿಟ್ಟ ಪತ್ರಕರ್ತೆ ತೀಸ್ತಾ ಸೆಟಲ್ವಾಡ್, ಹೋರಾಟಗಾರ್ತಿಯರಾದ ಮೇಧಾ ಪಾಟ್ಕರ್ ಹಾಗೂ ಜಕೀಯಾ ಸೋಮನ ಅವರಂತಹ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ” ಎಂದು ಹೇಳಿದ ಅವರು ಯುವ ನಾಯಕ ಜಿಗ್ನೇಶ್ ಮೆವಾನಿಯ ಹೋರಾಟವನ್ನೂ ಸ್ಮರಿಸಿದರು.
ವಾಣಿ ಪೆರಿಯೋಡಿ ಹಾಗೂ ಸಂಘಟನೆಯ ಕಾರ್ಯಕರ್ತೆಯರು ನೇಯ್ದ ಕೌದಿಯನ್ನು ತೀಸ್ತಾ ಸೆಟಲ್ವಾಡ್ ಅವರಿಗೆ ಹೊದಿಸಿ ಗೌರವಿಸಿ, ʼಕೌದಿ ಹೆಣ್ತನದ ಸಂಕೇತವಾಗಿದೆʼ ಎಂದು ತಿಳಿಸಿದರು.
ಸಮಾವೇಶಕ್ಕೂ ಮುನ್ನ ಹಾಸನದ ಪ್ರಮುಖ ಬೀದಿಗಳಲ್ಲಿ ನೂರಾರು ಮಹಿಳೆಯರು ಮೆರವಣಿಗೆ ನಡೆಸಿದರು. ಕೋಲಾಟ ಮತ್ತು ಡೊಳ್ಳು ಬಾರಿಸುವ ಮೂಲಕ ಮಹಿಳೆಯರು ಗಮನ ಸೆಳೆದರು. ಇದೇ ವೇಳೆ ‘ಹಾಸನ ಮಣ್ಣಿನ ಹೆಣ್ಣು ದನಿಗಳು’ ಎಂಬ ಪುಸ್ತಕವೂ ಬಿಡುಗಡೆಯಾಯಿತು.
ಇದನ್ನೂ ಓದಿದ್ದೀರಾ? ಹಾಸನದಲ್ಲಿ ಬೃಹತ್ ಮಹಿಳಾ ಸಮಾವೇಶ: ಮಹಿಳೆಯರು ಶಿಕ್ಷಣ, ಸ್ವಾವಲಂಬನೆ ಮೂಲಕ ಮುನ್ನಡೆಯುವಂತೆ ತೀಸ್ತಾ ಕರೆ
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರೂಪಾ ಹಾಸನ, ಮಮತಾ ಶಿವು, ಮಮತಾ ನಿರಂಜನ, ಬಾ ಹ ರಮಾ, ಅರ್ಚನಾ ಜಯಂತ್, ಪ್ರಭಾವತಿ ದೇಸಾಯಿ, ಸುಜಾತ ಕುಮಾರಸ್ವಾಮಿ, ಮಮತರಾಣಿ, ಸೌಮ್ಯ ಬಿ ಎಂ, ಶಾನು, ಧರಣಿ, ರಶ್ಮಿ, ನಾಗಮ್ಮ ಬೈಂದೂರು ಸೇರಿದಂತೆ ಅನೇಕ ನಾಯಕಿಯರು ಇದ್ದರು.





