ದೆಹಲಿ ಸ್ಫೋಟದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ
ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರವೇ ಸಮಗ್ರ ತನಿಖೆ ನಡೆಸಿ ಉತ್ತರಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ‘ ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಏಕೆ ಸ್ಫೋಟಗಳು ಆಗುತ್ತಿವೆ ? ದೆಹಲಿ ಸ್ಫೋಟ ಮಂಗಳವಾರದ ಬಿಹಾರ ಚುನಾವಣೆ ವೇಳೆ ಪ್ರಭಾವ ಬೀರುತ್ತದೆಯೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಸ್ಫೋಟಗಳು ಆಗಬಾರದು. ಅದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಾರೆ. ಚುನಾವಣೆ ವೇಳೆಯಲ್ಲೇ ಏಕೆ ಸ್ಫೋಟಗಳು ಹೆಚ್ಚು ಎಂಬ ಬಗ್ಗೆ ಕೇಂದ್ರವೇ ಉತ್ತರಿಸಬೇಕು. ಈ ಸ್ಫೋಟವು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಯೇ ಹೆಚ್ಚು’ ಎಂದರು.
ಘಟನೆ ಬಗ್ಗೆ ಆಘಾತ ವ್ಯಕ್ರಪಡಿಸಿದ ಡಿಸಿಎಂ
ದೆಹಲಿ ಕೆಂಪು ಕೋಟೆ ಸಮೀಪ ಸಂಭವಿಸಿದ ಭೀಕರ ಸ್ಫೋಟ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ, “ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ದುರ್ಘಟನೆ ನನ್ನನ್ನು ಆಘಾತಗೊಳಿಸಿದೆ. ಅಮಾಯಕ ಜನರ ಪ್ರಾಣಹಾನಿ ಅತ್ಯಂತ ಮನಕಲುಕುವ ಘಟನೆ. ಪ್ರಾಣಹಾನಿ ಕುಟುಂಬಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸುಧಾರಣೆಯಾಗಬೇಕಾದದ್ದು ಜೈಲುಗಳೋ, ರಾಜ್ಯ ಸರ್ಕಾರವೋ?
ಪ್ರಧಾನಿ ಮೋದಿ ಅವರ ಹೊಣೆಗಾರಿಕೆಯನ್ನು ‘ಮುಖ್ಯಮಂತ್ರಿ ಮೋದಿ’ ಬಯಲು ಮಾಡಿದ್ದಾರೆ : ಪ್ರಿಯಾಂಕ್ ಖರ್ಗೆ
“ಪ್ರಧಾನಿ ನರೇಂದ್ರ ಮೋದಿ ಅವರ ಹೊಣೆಗಾರಿಕೆಯನ್ನು ‘ಮುಖ್ಯಮಂತ್ರಿ ಮೋದಿ’ ಅವರಿಗಿಂತ ಸ್ಪಷ್ಟವಾಗಿ ಬಯಲು ಮಾಡಬಲ್ಲವರು ಯಾರೂ ಇಲ್ಲ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಬಗ್ಗೆ ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಮೋದಿ ನೀಡಿದ್ದ ಭಯೋತ್ಪಾದನೆ ಕುರಿತ ಹೇಳಿಕೆಯ ವಿಡಿಯೋವನ್ನು ಪ್ರಿಯಾಂಕ್ ಖರ್ಗೆ ಬುಧವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
“ಪ್ರಧಾನಿ ಪಾಲಿಗೆ ಹೊಣೆಗಾರಿಕೆ ಎಂಬುದು ಇತರರಿಗೆ ಮಾತ್ರ ಅನ್ವಯಿಸುತ್ತದೆ. ವಿರೋಧದಲ್ಲಿದ್ದಾಗ ಹೊಣೆಗಾರಿಕೆಯ ಕುರಿತು ಮಾತನಾಡುತ್ತಿದ್ದ ಮೋದಿ, ಅಧಿಕಾರಕ್ಕೆ ಬಂದ ನಂತರ ಅದರಿಂದ ದೂರ ಉಳಿಯುತ್ತಿದ್ದಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
“ಪ್ರಧಾನಿ ಮೋದಿ ಪಲಾಯನವಾದಿ. ಸುದ್ದಿಗೋಷ್ಠಿಯಿಂದ ತಪ್ಪಿಸಿಕೊಳ್ಳುತ್ತಾರೆ, ಸಂಸತ್ತನ್ನು ಕಡೆಗಣಿಸುತ್ತಾರೆ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ವಿಷಯಾಂತರ ಮಾಡುತ್ತಾರೆ” ಎಂದು ಟೀಕಿಸಿದ್ದಾರೆ.
ಬಾಂಬ್ ಸ್ಫೋಟ: ನೈತಿಕ ಹೊಣೆಹೊತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಲಿ: ಬಿಕೆ ಹರಿಪ್ರಸಾದ್
ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಬಾಂಬ್ ಸ್ಫೋಟದ ಕ್ರೂರ ಘಟನೆ ರಾಷ್ಟ್ರದ ಭದ್ರತೆಗೆ ಎದುರಾದ ಗಂಭೀರ ಸವಾಲು. ಅಮಾಯಕ ನಾಗರಿಕರ ಪ್ರಾಣ ಕಸಿದುಕೊಂಡ ಈ ಭಯಾನಕ ಕೃತ್ಯವನ್ನು ಕಾಂಗ್ರೆಸ್ ಮುಖಂಡ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಖಂಡಿಸಿದ್ದಾರೆ.
ರಾಷ್ಟ್ರದ ರಾಜಧಾನಿಯಲ್ಲೇ ಇಂತಹ ಕೃತ್ಯ ನಡೆದಿರುವುದು ಸರ್ಕಾರದ ಭದ್ರತಾ ವ್ಯವಸ್ಥೆಯ ವಿಫಲತೆಯ ಸ್ಪಷ್ಟ ನಿದರ್ಶನ. ದೆಹಲಿಯಂತಹ ಉನ್ನತ ಭದ್ರತಾ ವಲಯದಲ್ಲಿ ಸ್ಫೋಟ ಸಂಭವಿಸಿರುವುದು ಕೇವಲ ಕಾನೂನು ಸುವ್ಯವಸ್ಥೆಯ ವಿಷಯವಲ್ಲ — ಇದು ರಾಷ್ಟ್ರದ ಆಂತರಿಕ ಭದ್ರತೆಯ ಮೇಲಿನ ನಂಬಿಕೆಗೆ ಬಿದ್ದ ಭಾರಿ ಹೊಡೆತ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಭದ್ರತಾ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ದೇಶದ ರಾಜಧಾನಿಯೇ ಸುರಕ್ಷಿತವಾಗಿರದಿದ್ದರೆ, ಇಡೀ ಭಾರತವು ಹೇಗೆ ಸುರಕ್ಷಿತವಾಗಿರಲು ಸಾಧ್ಯ? ಗೃಹ ಸಚಿವರ ಅಸಮರ್ಥತೆ ಮತ್ತು ನಿರ್ಲಕ್ಷ್ಯದಿಂದಲೇ ಇಂತಹ ದಾರುಣ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ. ಪುಲ್ವಾಮಾ ಬಳಿ 40 ಭಾರತೀಯ ವೀರ ಯೋಧರನ್ನ ಬಲಿ ಪಡೆದುಕೊಂಡಿದ್ದು, ಪಹಲ್ಗಾಮ್ ನಲ್ಲಿ ಅಮಾಯಕ 26 ಪ್ರವಾಸಿಗರ ಬಲಿ, ರಾಷ್ಟ್ರ ರಾಜಧಾನಿಯಲ್ಲೇ ಭೀಕರ ಬಾಂಬ್ ಸ್ಪೋಟ ಹೀಗೆ ಸಾಲು ಸಾಲು ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದರು ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗುತ್ತಿದೆ.
ಅಮಾಯಕ ಜನರ ಪ್ರಾಣಗಳು ರಾಜಕೀಯ ಆಟಗಳಿಗೆ ಬಲಿಯಾಗುತ್ತಿರುವುದು ಅಕ್ಷಮ್ಯ. ಜನರ ಜೀವ ಮತ್ತು ಸುರಕ್ಷತೆಯ ಖಾತ್ರಿ ನೀಡಬೇಕಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗೃಹ ಸಚಿವರ ಮೇಲ್ವಿಚಾರಣೆಯಲ್ಲಿರುವ ಭದ್ರತಾ ವ್ಯವಸ್ಥೆ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿರುವಾಗ, ನೈತಿಕ ಹೊಣೆಹೊತ್ತು ಗೃಹ ಸಚಿವ ಅಮಿತ್ ಶಾ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ದೆಹಲಿಯ ಜನತೆಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಬೇಕು, ಮತ್ತು ಭದ್ರತಾ ವ್ಯವಸ್ಥೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಪಡಿಸಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್
ದೆಹಲಿ ನಗರದಲ್ಲಿ ನಿನ್ನೆ ಸಂಜೆ ಸಂಭವಿಸಿದ ಬಾಂಬ್ ಸ್ಫೋಟದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯೆ ನೀಡಿದ ಅವರು, “ದೆಹಲಿ ಸ್ಫೋಟದಿಂದ ನಾನು ತೀವ್ರವಾಗಿ ದುಃಖಗೊಂಡಿದ್ದೇನೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.





