ಸೇವೆಯಲ್ಲಿದ್ದ ಸಂದರ್ಭದಲ್ಲಿ ಬಡ್ತಿ ಪಡೆಯಲು ಮುಂದಾಗದೇ ನಿವೃತ್ತಿಯಾದ 15 ವರ್ಷಗಳ ಬಳಿಕ ಬಡ್ತಿ ನೀಡಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಸೇವೆಯಿಂದ ನಿವೃತ್ತರಾಗಿ 15 ವರ್ಷಗಳ ಬಳಿಕ ಬಡ್ತಿ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಆದೇಶ ಪ್ರಶ್ನಿಸಿ, ನಿವೃತ್ತ ಉಪನ್ಯಾಸಕ ಡಾ. ಕೆ. ಸತ್ಯನಾರಾಯಣ ಸಿಂಗ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು 1995ರಲ್ಲಿ ನಿವೃತ್ತರಾಗಿದ್ದಾರೆ. ಬಡ್ತಿಗೆ ಅವಕಾಶವಿದ್ದಾಗ ಪಡೆದುಕೊಳ್ಳದೇ ಮರೆತಿದ್ದು, ನಿವೃತ್ತಿಯ ಬಳಿಕ ಕೋರಿದ್ದಾರೆ. 1986ರಲ್ಲಿ ಬಡ್ತಿ ನಿರಾಕರಿಸಿದ್ದು, ಅದನ್ನು ಮತ್ತೆ ಪಡೆಯಬೇಕು ಎಂಬುದಕ್ಕೆ ಯಾವುದೇ ಪ್ರಯತ್ನ ಮಾಡಿಲ್ಲ. ನಿವೃತ್ತಿಯ 15 ವರ್ಷಗಳ ಬಳಿಕ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಶಿಕ್ಷಣ ಇಲಾಖೆಗೆ 2011ರಲ್ಲಿ ಮನವಿ ಸಲ್ಲಿಸಿ, ಬಳಿಕ 2012ರಲ್ಲಿ ಕೆಎಟಿ ಮೆಟ್ಟಿಲೇರಿದ್ದಾರೆ.
ಸೇವೆಯಲ್ಲಿದ್ದಾಗ ಬಡ್ತಿ ಪಡೆಯದೇ ನಿವೃತ್ತಿಯ ಬಳಿಕ ವೇತನ, ಸೌಲಭ್ಯಗಳ ಹೆಚ್ಚಳಕ್ಕಾಗಿ ಬಡ್ತಿ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿದ್ದು, ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಕಂಡುಬರುತ್ತಿಲ್ಲ ಎಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ-ಕ್ಸಿ-ಪುಟಿನ್ ಭೇಟಿ: ಅಮೆರಿಕ ವಿರುದ್ಧ ಪ್ರಬಲ ಗುಂಪು ರಚನೆ ಸಾಧ್ಯವೇ?
ಅರ್ಜಿದಾರರು 1971ರಲ್ಲಿ ಮುಖ್ಯೋಪಾದ್ಯಾಯ ಹುದ್ದೆಗೆ ನೇಮಕಗೊಂಡಿದ್ದರು. ಬಳಿಕ 1986ರಲ್ಲಿ ಬಡ್ತಿ ನೀಡಿ ಬೀದರ್ ಜಿಲ್ಲೆ ಮುಡಬಿಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜಿಗೆ ಸಮಾಜಶಾಸ್ತ್ರದ ಉಪನ್ಯಾಸಕ ಹುದ್ದೆಗೆ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು, ತನ್ನ ಪತ್ನಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಣಾಮ ಬಡ್ತಿ ಮತ್ತು ವರ್ಗಾವಣೆ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದ್ದರು. ಬಳಿಕ 1991ರಲ್ಲಿ ಮೈಸೂರಿನ ಸರ್ಕಾರಿ ವಿಶ್ವವಿದ್ಯಾಲಯಕ್ಕೆ ಉಪನ್ಯಾಸಕರಾಗಿ ವರ್ಗಾಯಿಸಲಾಗಿತ್ತು. 1995ರಲ್ಲಿ ವಯೋಸಹಜ ನಿವೃತ್ತಿ ಪಡೆದುಕೊಂಡಿದ್ದರು.
ಇದಾದ ನಂತರ 2011ರಲ್ಲಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ, 1991ರಿಂದ ಬಡ್ತಿ ಪರಿಗಣಿಸಿ ವೇತನ ಸೌಲಭ್ಯಗಳನ್ನು ನೀಡಬೇಕು ಎಂದು ಕೋರಿದ್ದರು. ಇದಕ್ಕೆ ಉತ್ತರಿಸಿದ್ದ ಸರ್ಕಾರ, 1986ರಲ್ಲಿ ಬಡ್ತಿ ನೀಡಿದ್ದರೂ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ನಿವೃತ್ತಿಯ ಬಳಿಕ ಬಡ್ತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ ಹಿಂಬರಹ ನೀಡಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಸರ್ಕಾರದ ಕ್ರಮ ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಡ್ತಿಯನ್ನು ತಿರಸ್ಕರಿಸಿಲ್ಲ. ಬದಲಿಗೆ ಸಂಶೋಧನೆ ಮತ್ತು ಪತ್ನಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದುದರ ಪರಿಣಾಮ, ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿರಲಿಲ್ಲ. ಇದಕ್ಕೆ ಪ್ರತಿಕ್ರಿಯೆಯೂ ನೀಡಿರಲಿಲ್ಲ. ಹೀಗಾಗಿ ಅರ್ಜಿದಾರರು ಬಡ್ತಿ ನಿರಾಕರಿಸಿದ್ದರು ಎನ್ನಲಾಗದು. ಆದ್ದರಿಂದ ಅರ್ಜಿದಾರರ ಸಲ್ಲಿಸಿರುವ ಮನವಿ ಪರಿಗಣಿಸಬೇಕು ಎಂದು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.





