ಪಕ್ಷದ ಬಲಾಬಲ ಬದಲಾದರೂ ಸಭಾಪತಿಯನ್ನು ಬದಲಾವಣೆ ಮಾಡಿದ್ದು ಕಡಿಮೆ. ಕಾಂಗ್ರೆಸ್ ಅಂತಹ ಇತಿಹಾಸ ನಿರ್ಮಾಣ ಮಾಡುವುದಾದರೆ ಮಾಡಲಿ. ಈ ಕುರ್ಚಿ ಯಾರಿಗೂ ಶಾಶ್ವತವಲ್ಲ. ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಶಿರಸಿ ನಗರದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಶುಕ್ರವಾರ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
“ವಿಧಾನಪರಿಷತ್ನಲ್ಲಿ ಕಾಂಗ್ರೆಸ್ಗೆ ಬಹುಮತ ಬಂದರೂ ನಾನು ಅಧಿಕಾರಕ್ಕೆ ಅಂಟಿಕೊಂಡ ವ್ಯಕ್ತಿಯಲ್ಲ. ಒಂದು ವರ್ಷ ಸಭಾಪತಿ ಆದರೂ ಮಾಜಿ ಸಭಾಪತಿ ಅಥವಾ ಹತ್ತು ವರ್ಷ ಮಾಡಿದರೂ ಮಾಜಿ ಎನ್ನುತ್ತಾರೆ. ಹೀಗಾಗಿ ಸಭಾಪತಿ ಸ್ಥಾನದಿಂದ ಇಳಿಸುವ ಪ್ರಯತ್ನ ನಡೆದಾಗ ತಕ್ಷಣ ರಾಜೀನಾಮೆ ನೀಡುತ್ತೇನೆ. ಹಿಂದೆ ಉಗ್ರಪ್ಪ ಹಾಗೂ ಶಂಕರಮೂರ್ತಿ ಅವರನ್ನು ಮಾತ್ರ ಪಕ್ಷ ಬದಲಾದಾಗ ಅಧಿಕಾರದಿಂದ ಇಳಿಸಲಾಗಿತ್ತು. ಈಗ ಕಾಂಗ್ರೆಸ್ ಅಂತಹ ಕೆಲಸ ಮಾಡಿದಲ್ಲಿ ಇತಿಹಾಸ ನಿರ್ಮಿಸಿದಂತಾಗಲಿದೆ” ಎಂದಿದ್ದಾರೆ.
“ಇಂದು ಪರಿಷತ್ ನಲ್ಲಿ ಮಾತ್ರವಲ್ಲದೇ ಎಲ್ಲಿಯೂ ಮೌಲ್ಯ ಉಳಿದಿಲ್ಲ. ಅವೆಲ್ಲವೂ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೇ ಮುಗಿದಿದೆ. ದುಡ್ಡು ತೆಗೆದುಕೊಂಡು ಮತ ಹಾಕುವುದು. ದುಡ್ಡು ಕೊಟ್ಟು ಮತ ಪಡೆಯುವುದು ಮಾತ್ರ ನಡೆಯುತ್ತಿದೆ. ಮೌಲ್ಯ ಯಾರಾದರೂ ಉಳಿಸಿದಲ್ಲಿ ಅದು ಮಾಧ್ಯಮದಿಂದ ಮಾತ್ರ ಸಾಧ್ಯವಿದೆ ಎಂದ ಅವರು, ನಾವೂ ಸಹ ವಿವಿಧ ತರಬೇತಿ ಶಿಕ್ಷಣದ ಮೂಲಕ ಮೌಲ್ಯ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.





