ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು, ದ್ವಿಭಾಷಾ ನೀತಿ ಜಾರಿಯ ಘೋಷಣೆ ಮಾಡಬೇಕು, ಕನ್ನಡ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರಿನ ಗಾಂಧಿನಗರದ ಕರ್ನಾಟಕ ರಕ್ಷಣಾ ವೇದಿಕೆ ಕೇಂದ್ರ ಕಚೇರಿಯ ಮುಂಭಾಗ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು.
ಅಧಿಕಾರ ಶಾಶ್ವತವಲ್ಲ, ಅಧಿಕಾರ ಇದ್ದಾಗ ಮಾಡಿದ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಕರ್ನಾಟಕದ ಜನತೆ ಶಾಶ್ವತವಾಗಿ ನೆನಪಲ್ಲಿ ಇಟ್ಟುಕೊಳ್ಳುವ ಕಾರ್ಯವನ್ನು ಸರ್ಕಾರಗಳು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕದಲ್ಲಿ ಹಿಂದಿ ಸಾಮ್ರಾಜ್ಯಶಾಹಿಗಳು ಅಬ್ಬರಿಸುತ್ತಿದ್ದಾರೆ. ಗುಜರಾತಿ ಮೂಲದ ಕಿರಣ್ ಮಜುಂದಾರ್, ಕೊಂಕಣಿ ಮೂಲದ ಮೋಹನ್ ದಾಸ್ ಪೈ ಎಂಬ ಉದ್ಯಮಿಗಳ ಗೊಡ್ಡು ಬೆದರಿಕೆಗೆ ಹೆದರಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆಯನ್ನು ಜಾರಿ ಮಾಡುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆ ಹಿಡಿದರು. ಕನ್ನಡಿಗರಿಗೆ ಉದ್ಯೋಗ ಕೊಡುವುದಾದರೆ ಇಲ್ಲಿ ಬದುಕಿ, ಇಲ್ಲದಿದ್ದಲ್ಲಿ ಕರ್ನಾಟಕ ಬಿಟ್ಟು ತೊಲಗಿ ಎಂದು ಇಂಥ ಕನ್ನಡ ದ್ರೋಹಿಗಳಿಗೆ ಸಿದ್ದರಾಮಯ್ಯನವರು ಹೇಳಬೇಕಿತ್ತು ಎಂದು ಎಂದು ಅವರು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಿಕೆಶಿ – ತೇಜಸ್ವಿ ಸೂರ್ಯ ಕಚ್ಚಾಟದಲ್ಲಿ ಬೆಂಗಳೂರಿಗಿಲ್ಲ ಲಾಭ!
ಪ್ರತಿದಿನ ಸಾವಿರಾರು ಮಂದಿ ಬೆಂಗಳೂರಿಗೆ ಉತ್ತರ ಭಾರತದಿಂದ ವಲಸೆ ಬರುತ್ತಿದ್ದಾರೆ, ಕರ್ನಾಟಕದ ಇತರ ನಗರಗಳಿಗೂ ಇದೇ ರೀತಿ ವಲಸೆ ನಡೆಯುತ್ತಿದೆ. ಕರ್ನಾಟಕವನ್ನು ಈ ಆಡಳಿತ ವ್ಯವಸ್ಥೆ ಏನು ಮಾಡಲು ಹೊರಟಿದೆ ? ಹೊರಗಿಂದ ಬಂದವರು ಈಗ ನಮ್ಮನ್ನೇ ಅಲ್ಪಸಂಖ್ಯಾತರು ಎಂದು ಹೇಳುತ್ತಿದ್ದಾರೆ. ಇದನ್ನು ನೋಡಿ ಸಹಿಸಿಕೊಂಡು ಇರಬೇಕಾ ಎಂದು ಪ್ರಶ್ನಿಸಿದ ಅವರು, ಕನ್ನಡಿಗರ ಇಂದಿನ ಅತಂತ್ರ ಸ್ಥಿತಿಗೆ ನಮ್ಮನ್ನು ಆಳುತ್ತಿರುವ ಜನ ನಾಯಕರೇ ಕಾರಣ, ಅವರಿಗೆ ಕನ್ನಡ ಅಭಿಮಾನವಿಲ್ಲ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷರಾದ ಡಾ. ಆರ್. ಅರುಣಾಚಲಂ, ಸುರೇಶ್, ಪಾಲನಹಳ್ಳಿ ಮಠದ ಸ್ವಾಮೀಜಿ ಸೇರಿದಂತೆ ಕರವೇ ಮುಖಂಡರು ಉಪಸ್ಥಿತರಿದ್ದರು





