ನಮ್ಮದು ಬೂದು ಬಣ್ಣದ ಚುನಾಯಿತ ಪ್ರಜಾಪ್ರಭುತ್ವದ ಮಾದರಿಯಾಗಿತ್ತು. ಅದೀಗ ಚುನಾಯಿತ ಸರ್ವಾಧಿಕಾರಕ್ಕೆ, ಅಂದರೆ ಗ್ರೇ ಎಲೆಕ್ಟೋರಲ್ ಆಟೋಕ್ರಸಿಗೆ ಹೊರಳಿದೆ. ಕಳೆದ 4 ತಿಂಗಳಿಂದ ಭಾರತ ಎಲೆಕ್ಟೋರಲ್ ಆಟೋಕ್ರಸಿಯಲ್ಲಿದೆ ಎಂಬುದು ಖಚಿತವಾಗಿದೆ. ಇಂತಹ ವರ್ಗೀಕರಣದ ವ್ಯಾಪ್ತಿಯೊಳಗೆ ರಷ್ಯಾ ದೇಶವಿರುವುದನ್ನು ಗಮನಿಸಬಹುದು ಎಂದು ಒಬಾಮಾ ಆಡಳಿತ ಸಲಹೆಗಾರ ಹಾಗೂ ತಾಂತ್ರಿಕ ಸುರಕ್ಷಣಾ ತಜ್ಞ ಮಾಧವ ದೇಶಪಾಂಡೆ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಸೋಮವಾರ ʼಎದ್ದೇಳು ಕರ್ನಾಟಕʼ ಆಯೋಜಿಸಿದ್ದ, ಚುನಾವಣಾ ಆಯೋಗ ದೇಶವ್ಯಾಪಿ ಮಾಡಲು ಹೊರಟಿರುವ SIR ಪ್ರಕ್ರಿಯೆಯನ್ನು ವಿರೋಧಿಸಿ ನಡೆಯುತ್ತಿರುವ ಮಂಥನಾ ಸಮಾವೇಶದಲ್ಲಿ ಅವರು ಮಾತನಾಡಿದರು.
“ಪ್ರಜಾಪ್ರಭುತ್ವದ ನಾಲ್ಕು ಪ್ರಮುಖ ಸ್ತಂಭಗಳು ಕುಸಿಯುತ್ತಿರುವುದು ರಾಜಕೀಯ ಸಮಸ್ಯೆ ಮಾತ್ರವಲ್ಲದೆ, ನಾಗರಿಕ ಹಕ್ಕುಗಳನ್ನು ಕಳ್ಳತನ ಮಾಡುವ ಪ್ರಕ್ರಿಯೆಯಾಗಿಯೂ ರೂಪುಗೊಂಡಿದೆ. ಪ್ರಜಾಪ್ರಭುತ್ವದ ಮೂಲ ಉದ್ದೇಶಗಳು ಹೇಗೆ ನಾಶವಾಗುತ್ತಿವೆ, ನಮ್ಮದೇ ನಾಗರಿಕತ್ವ ನಮ್ಮವರ ಕೈಯಲ್ಲಿಯೇ ಹೇಗೆ ಕಸಿಯಲ್ಪಡುತ್ತಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂಪೂರ್ಣ ಡಿಜಿಟಲ್ ಆಗಿರುವ ಚುನಾವಣಾ ವ್ಯವಸ್ಥೆಗೆ ಯಾವುದೇ ಎಲೆಕ್ಟ್ರಾನಿಕ್ ಲಾಕಿಂಕ್ ಸಿಸ್ಟಮ್ ಇಲ್ಲದಿರುವುದು, ಡೇಟಾ ತಿದ್ದುಪಡಿಯ ಅಪಾಯವನ್ನು ಸ್ಪಷ್ಟವಾಗಿ ಹೇಳುತ್ತದೆ. Evm ಯಂತ್ರಗಳ ವಿನಿಮಯವೂ ಇಲ್ಲಿ ಸಾಧ್ಯ. ಹೀಗಿರುವಾಗ ಯಾವುದರ ಆಧಾರದ ಮೇಲೆ ಇಡೀ ಚುನಾವಣಾ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗಿದೆ ಎನ್ನುವುದನ್ನು ಗಂಭೀರವಾಗಿ ಚಿಂತಿಸಬೇಕಿದೆ” ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಹಾಗೂ ರಾಜಕೀಯ ವಿಶ್ಲೇಷಕ ಶಿವಸುಂದರ್, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ನ ಮುಖ್ಯಸ್ಥ ಹರೀಶ್ ನರಸಪ್ಪ, ಜಾಮಾಅತೆ ಇಸ್ಲಾಮಿ ಹಿಂದ್ನ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಕುನ್ನಿ, ಎದ್ದೇಳು ಕರ್ನಾಟಕದ ಮುಖ್ಯಸ್ಥೆ ತಾರಾ ರಾವ್, ನಮ್ಮ ಓಟು, ನಮ್ಮ ಹಕ್ಕು ಅಭಿಯಾನದ ಮಾನವಿ, ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





