ಬಸವಣ್ಣ ಈಗಲೂ ಪ್ರಸ್ತುತ ಅಂದರೆ ಖುಷಿ ಪಡಬೇಕಾ ಅಥವಾ ದುಃಖ ಪಡಬೇಕಾ? ಬಸವಣ್ಣ ಎಲ್ಲರಿಗೂ ಬೇಕಾದವನು, ದುರ್ದೈವ ಎಂದರೆ ರಾಜಕೀಯ ವಸ್ತುವಾಗಿ ಬಸವಣ್ಣನನ್ನು ಬಳಕೆಯಾಗುತ್ತಿರುವುದು ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.
ಡಾ. ಸಿ.ಸೋಮಶೇಖರ ಶ್ರೀಮತಿ ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಜೀವಮಾನ ಸಾಧನೆಗಾಗಿ ಹಿರಿಯ ಸಾಧಕರಿಗೆ ಸಂಸ್ಕೃತಿ ಸಂಗಮ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಕಲ್ಯಾಣ ರಾಜ್ಯವನ್ನು ವಚನಗಳ ಮೂಲಕ ನೆನಪಿಸಿಕೊಳ್ಳುತ್ತೇವೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡದ ದೊಡ್ಡ ಸಾಹಿತ್ಯ. ಬಸವಣ್ಣನನ್ನು ಎಲ್ಲರೂ ಹಂಚಿಕೊಂಡಿದ್ದಾರೆ. ದೇಶ ಅನ್ನುವ ಕಲ್ಪನೆ ಒಪ್ಪಿಕೊಳ್ಳದಿರುವುದು ದುರ್ದೈವದ ಸಂಗತಿ. ಈಗ ಗಟ್ಟಿಯಾಗಿ ನಿಂತರೆ ಮುಂದಿನ ಒಂದು ಶತಮಾನ ನಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನಾವೆಲ್ಲ ಹಲವಾರು ರಂಗದಲ್ಲಿ ಕೆಲಸ ಮಾಡಿದ್ದೇವೆ. ದೇಶ ಮತ್ತು ನಾಡು ಕಟ್ಟಲು ನಾವು ಏನು ಮಾಡಿದ್ದೇವೆ ಎಂದು ಚಿಂತನೆ ಮಾಡಬೇಕು. ಸ್ವಾತಂತ್ರ್ಯ ಬಂದಾಗಿನ ದೇಶದ ಕಲ್ಪನೆ ಗೂ ಇಂದಿನ ಕಲ್ಪನೆಗೂ ವ್ಯತ್ಯಾಸ ಇದೆ” ಎಂದು ಹೇಳಿದರು.
“ಇವತ್ತಿನ ಕನ್ನಡಕ್ಕೆ ಕನ್ನಡಿಗರಿಂದ ಹೊರಗಡೆಯಿಂದ ಸವಾಲಿದೆ. ಕನ್ನಡದ ಮೇಲೆ ದಕ್ಷಿಣದ ಇತರ ಭಾಷೆಗಳು ಒಪ್ಪಿಕೊಳ್ಳುವುದಿಲ್ಲ. ನಮ್ಮ ನೆರೆ ಹೊರೆಯವರೆ ನಮ್ಮನ್ನು ವೈಷ್ಯಮ್ಯದಿಂದ ನೊಡುತ್ತಾರೆ. ಅವರೆಲ್ಲರನ್ನು ಸರಿಪಡಿಸಿಕೊಂಡು ಕನ್ನಡವನ್ನು ಮೇಲೆತ್ತುವ ಕೆಲಸ ಆಗಬೇಕಿದೆ” ಎಂದು ತಿಳಿಸಿದರು.
“ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ ಮತ್ತು ನಾಗರಿಕತೆಯ ಬಗ್ಗೆ ವ್ಯತ್ಯಾಸ ಗೊತ್ತಿಲ್ಲ. ಒಬ್ಬ ಶ್ರೀಮಂತ ನನ್ನು ದೊಡ್ಡ ಸುಸಂಸ್ಕೃತ ಅಂತ ಹೊಗಳುತ್ತೇವೆ. ಆತನನ್ನು ಹತ್ತಿರದಿಂದ ನೋಡಿದಾಗ ಗೊತ್ತಾಗುತ್ತದೆ. ನಾಗರಿಕತೆ ಅಂದರೆ ಸೈಕಲ್ ಇತ್ತು, ಬೈಕ್, ಬಸ್ ಬಂತು, ಈಗ ವಿಮಾನ ಬಂದಿದೆ ನಗರಗಳು ಬೆಳೆದಿವೆ. ನಮ್ಮ ಬಳಿ ಏನಿದೆ ಅದು ನಾಗರಿಕತೆ ನಾವು ಏನಾಗಿದ್ದೇವೆ ಅದು ಸಂಸ್ಕೃತಿ. ನಮ್ಮ ಬಳಿ ಏನೇ ಶ್ರೀಮಂತಿಕೆ ಬಂದರೂ ಎಷ್ಟು ಉಸಿರಾಡುತ್ತೇವೊ ಅಷ್ಟೇ ಉಸಿರಾಡುತ್ತೇವೆ. ಗಾಳಿ, ಬೆಳಕು ಎಲ್ಲರಿಗೂ ಸಮಾನವಾಗಿದೆ” ಎಂದು ಹೇಳಿದರು.
ವಿವಿಗಳಿಂದ ಜಂಟಿ ಕಾರ್ಯ ಅಗತ್ಯ
“ಜಾನಪದ ಲೋಕದ ಎಚ್. ಎಲ್. ನಾಗೇಗೌಡರು ನಮಗೆ ಪರಿಚಿತರು. ಅವರ ಪ್ರೇರಣೆಯಿಂದ ಶಿಗ್ಗಾವಿಯಲ್ಲಿ ಜಾನಪದ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಿದ್ದೇವೆ. ಜಾನಪದ ಲೋಕ ಮತ್ತು ಜಾನಪದ ವಿಶ್ವವಿದ್ಯಾಲಯ ಜಂಟಿಯಾಗಿ ಕಾರ್ಯ ನಿರ್ವಹಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಕಪ್ಪಣ್ಣ, ಕಾ.ತ ಚಿಕ್ಕಣ್ಸ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಕಸ್ತೂರಿ ಶಂಕರ ಅವರು ನಮ್ಮ ಮನದಾಳದಲ್ಲಿ ಅವರ ಹಾಡುಗಳು ಪ್ರತಿ ದಿನ ಕೇಳುತ್ತೇವೆ” ಎಂದರು.
ಈ ಸಂದರ್ಭದಲ್ಲಿ ಸುತ್ತೂರು ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ, ಪ್ರಶಸ್ತಿ ಪುರಸ್ಕೃತರಾದ ಹೀ, ಚಿ. ಬೋರಲಿಂಗಯ್ಯ, ಕಾ.ತ.ಚಿಕ್ಕಣ್ಣ, ಶ್ರೀನಿವಾಸ್ ಜಿ. ಕಪ್ಪಣ್ಣ, ರಂಜಾನ್ ದರ್ಗಾ, ಕಸ್ತೂರಿ ಶಂಕರ, ಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಎನ್. ಸರ್ವಮಂಗಳ ಹಾಜರಿದ್ದರು.





