ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಿಂದುತ್ವವಾದಿ ಕೋಮು ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸನ್ಮಾನ ಮಾಡಿದ್ದಾರೆ. ಕಾರ್ಯಕ್ರಮದ ಬಳಿಕ ಪ್ರತಿಕ್ರಿಯಿಸಿರುವ ಅವರು, ‘ಯಾರಿಗೆ ಸನ್ಮಾನ ಅಂತ ನನಗೆ ಗೊತ್ತಿರಲಿಲ್ಲ. ನಾನು ಆ ಕಾರ್ಯಕ್ರಮಕ್ಕೆ ಹೋಗಬಾರದಿತ್ತು. ಒಳ್ಳೆಯ ಸಂಘಟನೆ ಅಂತ ಹೋಗಿದ್ದೆ’ ಎಂದು ಹೇಳಿದ್ದಾರೆ. ನನ್ನಿಂದ ತಪ್ಪಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
‘ದಿ ನ್ಯೂಸ್ ಪೇಪರ್ ಅಸೋಷಿಯೇಷನ್ ಆಫ್ ಕರ್ನಾಟಕ’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ದೆ ಭಾಗವಹಿಸಿದ್ದರು. ಈ ವೇಳೆ, ಸಂತೋಷ್ ಹೆಗ್ಡೆ ಅವರು ಪುನೀತ್ ಕೆರೆಹಳ್ಳಿಗೆ ಶಾಲು ಪೇಟ ತೊಡಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದರು.
ಸನ್ಮಾನದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಕೆರೆಹಳ್ಳಿ ಹಂಚಿಕೊಂಡಿದ್ದರು. ಚಿತ್ರವನ್ನು ಗಮನಿಸಿದ ನೆಟ್ಟಿಗರು ಸಂತೋಷ್ ಹೆಗ್ಡೆ ಅವರು ಸನ್ಮಾನಿಸಿದ್ದನ್ನು ಪ್ರಶ್ನಿಸಿದ್ದಾರೆ. ‘ಕ್ರಿಮಿನಲ್ ಹಿನ್ನಲೆ ಹೊಂದಿರುವ ವ್ಯಕ್ತಿಗೆ ಸನ್ಮಾನ ಮಾಡಿದ್ದೀರೀ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬೆನ್ನಲ್ಲೇ, ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್ ಹೆಗ್ಡೆ, “ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿ ನನಗೆ ಗೊತ್ತಿರಲಿಲ್ಲ. ಅರ್ಥಪೂರ್ಣ ಕಾರ್ಯಕ್ರಮವೆಂದು ಭಾವಿಸಿ ಹೋಗಿದ್ದೆ. ವೇದಿಕೆ ಮೇಲೆ ನಾನೊಬ್ಬನೇ ಪ್ರಶಸ್ತಿ ಕೊಟ್ಟಿಲ್ಲ. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.




