“ಕರ್ನಾಟಕ ರಾಜ್ಯೋತ್ಸವ ಅಂದರೆ ಕೇವಲ ಭಾಷಾಭಿಮಾನ ಅಲ್ಲ. ಭಾಷೆಯ ಗರ್ಭ, ಭಾವವೆಂದರೆ ಬಸವಣ್ಣ. ಸರ್ವ ಜನಾಂಗದ ಶಾಂತಿಯ ತೋಟ ಎಂಬುದು ಕನ್ನಡ ಭಾಷೆಯ ಭಾವ. ಇದು ರಾಷ್ಟ್ರಕವಿ ಕುವೆಂಪು ಅವರ ಸಂದೇಶ. ಕನ್ನಡಿಗರು ಕುವೆಂಪು ಅವರ ತತ್ವದಂತೆ ವಿಶ್ವ ಮಾನವರಾಗಬೇಕು” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಎಲ್ಲ ಸಾಧಕರ ಪರವಾಗಿ ಅವರು ಮಾತನಾಡಿದರು.
“ನನಗೆ ಬಹಳ ಭಾವನಾತ್ಮಕವಾದ ಕ್ಷಣವಿದು. ನಾಲ್ಕು ದಶಕಗಳ ಹಿಂದೆ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜ್ನಲ್ಲಿ ಕಾಮರ್ಸ್ ಪದವಿ ಓದಿದೆ. ಪದವಿ ಮುಗಿದ ನಂತರ ಯಾಕೋ ಬ್ಯಾಂಕ್ ಮ್ಯಾನೇಜರ್ ಆಗಬೇಕೂಂತ ಅನಿಸಲಿಲ್ಲ. ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ನಾಟಕ-ನಟನೆ ಮಾಡುತ್ತಿದ್ದೆ. ಏನೂ ಗೊತ್ತಿಲ್ಲದೇ ಈ ರವೀಂದ್ರ ಕಲಾಕ್ಷೇತ್ರಕ್ಕೆ ನಡೆದುಕೊಂಡು ಬಂದೆ. ಮೇಲಿನ ಮಹಡಿಯಲ್ಲಿ ನಿದ್ದೆ ಮಾಡುತ್ತಿದ್ದೆವು. ನಾಟಕ ನಡೆಯುತ್ತಿದ್ದಾಗ ಊಟ ಮಾಡುತ್ತಿದ್ದೆ. ದಿವಂಗತ ಕನ್ನಡದ ನಟ ಶಂಕರ್ನಾಗ್ ಅವರು ನಾಗಮಂಡಲ ನಾಟಕ ಮಾಡಿದಾಗ ನಾನು ಮತ್ತು ಬಿ ಸುರೇಶ್ ಅವರು ಮೇಲ್ಗಡೆಯಿಂದ ಬೊಂಬೆ ಕುಣಿಸಿ, ಮೇಲಿನಿಂದ ನೋಡಿದ್ದೆ. ಕನ್ನಡದ ಸಾಹಿತ್ಯ, ನಾಟಕ, ಕನ್ನಡದ ಶ್ರೀಮಂತಿಕೆಯ ಬಗ್ಗೆ ಕಲಿತದ್ದೆಲ್ಲ ಕಲಾಕ್ಷೇತ್ರದಿಂದ” ಎಂದು ತಮ್ಮ ವೃತ್ತಿ ಬದುಕಿನ ಪ್ರಾರಂಭದ ದಿನಗಳನ್ನು ಪ್ರಕಾಶ್ ರಾಜ್ ನೆನಪಿಸಿಕೊಂಡರು.
“ಇವತ್ತು ನಾನು ಎಷ್ಟೇ ಎತ್ತರಕ್ಕೆ ಏರಿದ್ದರೂ ಅದರ ಮೂಲ ನೆಲೆ, ಬೇರು ಎಲ್ಲವೂ ಇರುವುದು ಕನ್ನಡ ನೆಲ ಮತ್ತು ಸಾಹಿತ್ಯದಲ್ಲಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ನನ್ನ ಸಾಧನೆಗೆ ಸಿಕ್ಕಿದ್ದಲ್ಲ. ಒಬ್ಬ ಕಲಾವಿದ ಬೆಳೆಯುವುದು ಜನರ ಪ್ರೀತಿಯಿಂದ. ಹಾಗಾಗಿಯೇ, ಕನ್ನಡದ ದೊಡ್ಡ ಪ್ರಶಸ್ತಿ ಸಿಕ್ಕಿದೆ. ಜನರು ಪ್ರೀತಿಯಿಂದ ನಮ್ಮನ್ನು ಬೆಳೆಸಿದ ಮೇಲೆ, ಜನರ ಪರವಾಗಿ ಮಾತನಾಡುವುದು ನಮ್ಮಂಥವರ ಮೇಲಿರುವ ಬಾಧ್ಯತೆ, ಜವಾಬ್ದಾರಿಯಾಗಿದೆ. ಆ ಕಾರಣದಿಂದಲೇ ಜನರ ಪರವಾಗಿ ಮಾತನಾಡುತ್ತಿರುತ್ತೇನೆ” ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.

ರಾಜ್ಯೋತ್ಸವ ಅಂದರೆ ಭಾಷಾಭಿಮಾನ ಅಲ್ಲ. ಭಾಷೆ ಎಂದರೆ ಕೇವಲ ಧ್ವನಿ ಅಷ್ಟೇ. ಕನ್ನಡದ ಭಾಷೆಯ ಭಾವ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ನಂಬಿಕೆ. ಇದು ಕುವೆಂಪು ಅವರ ವಿಶ್ವ ಮಾನವ ಸಂದೇಶ. ಎಲ್ಲ ಧರ್ಮದವರನ್ನು ಅಪ್ಪಿಕೊಂಡು ಬದುಕು ನಡೆಸುವುದೇ ರಾಜ್ಯೋತ್ಸವ. ಕನ್ನಡಿಗ ತನ್ನ ಭಾಷೆಯ ಬಗ್ಗೆ ಅಭಿಮಾನ, ಪ್ರೀತಿ ಇಟ್ಟುಕೊಳ್ಳುವುದು ಅಹಂಕಾರ ಅಲ್ಲ. ಕನ್ನಡಕ್ಕೆ, ಕರ್ನಾಟಕಕ್ಕೆ ಇರುವ ವೈಶಿಷ್ಟ್ಯತೆಯನ್ನು ಸಂಭ್ರಮಿಸುವುದಾಗಿದೆ. ರಾಜ್ಯದ ಸರ್ಕಾರವು ಈ ನಿಟ್ಟಿನಲ್ಲಿ ಕನ್ನಡಪರವಾಗಿ, ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಿಕೆಶಿ – ತೇಜಸ್ವಿ ಸೂರ್ಯ ಕಚ್ಚಾಟದಲ್ಲಿ ಬೆಂಗಳೂರಿಗಿಲ್ಲ ಲಾಭ!
“ದೇಶದಲ್ಲಿ ನಡೆಯುತ್ತಿರುವ ವಿದ್ರೋಹ ಕೃತ್ಯ, ಮತೋನ್ಮಾದದ ತಡೆಗೆ ಕನ್ನಡಿಗರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅದಕ್ಕೆ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾವೆಲ್ಲರೂ ವಿಶ್ವ ಮಾನವರಾಗಬೇಕು. ವಿಶ್ವಮಾನವ ಸಂದೇಶವನ್ನು ಸಂಭ್ರಮಿಸುವುದೇ ಕನ್ನಡವನ್ನು ಸಂಭ್ರಮಿಸುವುದಾಗಿದೆ” ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಪ್ರಶಸ್ತಿಯು ₹5 ಲಕ್ಷ ನಗದು, 25 ಗ್ರಾಂ ಚಿನ್ನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಇಲಾಖೆ ಕಾರ್ಯದರ್ಶಿ ಟಿಎಚ್ಎಂ ಕುಮಾರ್, ನಿರ್ದೇಶಕಿ ಗಾಯತ್ರಿ, ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ ಇದ್ದರು.





