ನೈರುತ್ಯ ರೈಲ್ವೆ ಇಲಾಖೆ ಪದೋನ್ನತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಹೊರಗೆ ಇಡುವ ಮೂಲಕ ಕನ್ನಡಿಗರ ಬೆನ್ನಿಗೆ ಚೂರಿ ಹಾಕಿದೆ. ಇದು ಮೋಸದ, ಅನ್ಯಾಯದ, ನಂಬಿಕೆದ್ರೋಹದ, ಮಹಾವಂಚನೆಯ ನಿರ್ಧಾರವಾಗಿದೆ. ಈ ಕ್ರೂರ ದ್ರೋಹದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಾಳೆಯಿಂದಲೇ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಕರವೇ ರಾಜ್ಯಾಧ್ಯಕ್ಷರು ಟಿ. ಎ. ನಾರಾಯಣಗೌಡ ತಿಳಿಸಿದ್ದಾರೆ.
ಈ ಬಗ್ಗೆ ನಾರಾಯಣಗೌಡ ಅವರು ಪತ್ರಿಕಾ ಹೇಳಿಕೆ ನೀಡಿದ್ದು, “2025ರ ಸೆ.25ರಂದು ಗೂಡ್ಸ್ ಟ್ರೇನ್ ಮ್ಯಾನೇಜರ್ (ಶೇ.60 ಪ್ರಮೋಷನಲ್ ಕೋಟಾ) 194 ಹುದ್ದೆ ಹಾಗೂ 2025ರ ನ.5ರಂದು ಹುಬ್ಬಳ್ಳಿ ವಿಭಾಗದಲ್ಲಿ ಎಲ್ಡಿಸಿಇ (Limited departmental compitetive examination) (ಶೇ.15 ಪ್ರಮೋಷನಲ್ ಕೋಟಾ) 101 ಮುಂಬಡ್ತಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಲಾಗಿತ್ತು. ಅಧಿಸೂಚನೆಯ ಪ್ರಕಾರ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸಲು ಹೊರಟಿದ್ದ ರೈಲ್ವೆ ಇಲಾಖೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೆಪಿಎಸ್ಸಿ ಕರ್ಮಕಾಂಡ | ಮತ್ತೆ ಮರುಪರೀಕ್ಷೆಗೆ ಆಗ್ರಹಿಸಿ ಫೆ.18ರಂದು ಕರವೇ ಪ್ರತಿಭಟನೆ
“ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳ ಆಹ್ವಾನದ ಮೇರೆಗೆ ನಾನು ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸುದೀರ್ಘ ಸಭೆ ನಡೆಸಿದ್ದೆ. ಈ ಸಂದರ್ಭದಲ್ಲಿ ಆಗಿರುವ ತಪ್ಪನ್ನು ಒಪ್ಪಿಕೊಂಡ ಅಧಿಕಾರಿಗಳು ನಿಯಮಾವಳಿಗಳ ಪ್ರಕಾರ ಕನ್ನಡದಲ್ಲೂ ಪರೀಕ್ಷೆ ನಡೆಸುವುದಾಗಿ ಭರವಸೆ ನೀಡಿದ್ದರು. ಪರೀಕ್ಷಾರ್ಥಿಗಳೂ ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು” ಎಂದಿದ್ದಾರೆ.
“ಈ ವಿಷಯವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗು ಹಿರಿಯ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರ ಗಮನಕ್ಕೂ ತರಲಾಗಿತ್ತು. ಕನ್ನಡಿಗರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಉಭಯ ಸಚಿವರ ಭರವಸೆಯೂ ಸುಳ್ಳಾಗಿದೆ. ಪದೋನ್ನತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಕನ್ನಡದಲ್ಲಿ ಅಭ್ಯಾಸ ನಡೆಸಿದ್ದ ಕನ್ನಡಿಗ ಉದ್ಯೋಗಿಗಳು ಅತಂತ್ರರಾಗಿದ್ದಾರೆ. ಈ ವಂಚನೆಯನ್ನು ಹೇಗೆ ಸಹಿಸಿಕೊಳ್ಳುವುದು? ನಾಳೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದೇ ಹೋದರೆ ಈ ಕನ್ನಡಿಗ ಉದ್ಯೋಗಿಗಳ ಭವಿಷ್ಯವೇ ಹಾಳಾಗಲಿದೆ. ಇವರಿಗೆ ಆಗುವ ಅನ್ಯಾಯಕ್ಕೆ ಜವಾಬ್ದಾರಿ ಹೊರುವವರು ಯಾರು” ಎಂದು ಪ್ರಶ್ನಿಸಿದ್ದಾರೆ.
“ಪರೀಕ್ಷೆಗೆ ಕೇವಲ ನಾಲ್ಕು ದಿನಗಳು ಇರುವಂತೆ ನೋಟಿಫಿಕೇಷನ್ ಹೊರಡಿಸಲಾಗಿದೆ. ಪರೀಕ್ಷಾರ್ಥಿಗಳು ಯಾವುದೇ ರೀತಿಯ ಮೇಲ್ಮನವಿ ಸಲ್ಲಿಸದಂತೆ ತರಾತುರಿಯಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವೇ ಇರುವ ಹಾಗೆ ಕಾಣುತ್ತಿದೆ. ಕಾಣದ ಕೈಗಳು ಕನ್ನಡಿಗ ನೌಕರರ ಬಡ್ತಿಗೆ ಅಡ್ಡಿಯಾಗಿರುವ ಹಾಗೆ ಕಾಣುತ್ತಿದೆ. ಕದ್ದುಮುಚ್ಚಿ ಕುತಂತ್ರ ನಡೆಸುತ್ತಿರುವ ಈ ದ್ರೋಹಿಗಳನ್ನು ಬಯಲಿಗೆಳೆಯುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ರೈಲ್ವೆ ಇಲಾಖೆಯಲ್ಲಿರುವ ಉತ್ತರ ಭಾರತೀಯ ಅಧಿಕಾರಿಗಳು ಪದೇ ಪದೇ ಕನ್ನಡಿಗರಿಗೆ ಅನ್ಯಾಯವೆಸಗುತ್ತಾ, ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಕನ್ನಡಿಗರು ಇಂಥ ಅನ್ಯಾಯಗಳ ವಿರುದ್ಧ ಸಿಡಿದೆದ್ದರೆ ಏನಾಗುತ್ತದೆ ಎಂಬುದು ಇವರಿಗೆ ಅರಿವಿಲ್ಲವೇ? ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಈ ಬೇಜವಾಬ್ದಾರಿಯುತ ಅಧಿಕಾರಿಗಳೇ ಕಾರಣರಾಗುತ್ತಾರೆ. ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ಕಾರಣಕ್ಕೂ ಈ ಪರೀಕ್ಷೆಗಳನ್ನು ನಡೆಯಲು ಬಿಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಕನ್ನಡಿಗರ ಹಕ್ಕುಗಳನ್ನು ರಕ್ಷಿಸುವ ಕಾರ್ಯವನ್ನು ನಾವು ಮಾಡುತ್ತೇವೆ” ಎಂದು ತಿಳಿಸಿದ್ದಾರೆ.





