ಪ್ರಯಾಣಿಕರ ಅನುಕೂಲಕ್ಕೆ ಹಲವಾರು ಜನಪರ ಯೋಜನೆ ಪರಿಚಯಿಸಿ ಈಗಾಗಲೇ ಹಲವು ಪ್ರಶಸ್ತಿ ಗಳಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದ ಹೊಸ ಸಾಧನೆಗೆ ಕೇಂದ್ರ ಸರ್ಕಾರವು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕೇಂದ್ರ ಸರ್ಕಾರದ ವಸತಿ ಮತ್ರು ನಗರಾಭಿವೃದ್ಧಿ ಸಚಿವಾಲಯವು ನೀಡುವ 2025ನೇ ಸಾಲಿನ Award of Excellence in Urban Transport ಪ್ರಶಸ್ತಿ ಲಭಿಸಿದೆ.
ಹರಿಯಾಣದ ಗುರುಗ್ರಾಮ್ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರದ ಸಚಿವರಾದ ಮನೋಹರ್ ಲಾಲ್ ಕಟ್ಟರ್ ಹಾಗೂ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ ತೋಕನ್ ಸಾಹು ಅವರು ಕೆಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
THE STATE, WHICH HAS IMPLEMENTED BEST URBAN TRANSPORT PROJECTS DURING THE PREVIOUS YEAR ವರ್ಗದಲ್ಲಿ ನಿಗಮದ ಮೈಸೂರು ನಗರ ಸಾರಿಗೆಯ ‘ಧ್ವನಿಸ್ಪಂದನ’ ಯೋಜನೆಗೆ ಭಾರತ ಸರ್ಕಾರದಿಂದ ಈ ಪ್ರಶಸ್ತಿ ಲಭಿಸಿದೆ.
ಕೆಎಸ್ಆರ್ಟಿಸಿಯ ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಅಂಧ ಪ್ರಯಾಣಿಕರಿಗಾಗಿ ‘ಧ್ವನಿ ಸ್ಪಂದನ’ – ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಎಂಬ ದೇಶದ ಮೊದಲ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.
ದೃಷ್ಟಿ ವಿಕಲ ಚೇತನ ಪ್ರಯಾಣಿಕರ ಪ್ರಯಾಣ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದ್ದು, ಅವರ ಆತ್ಮವಿಶ್ವಾಸ, ಭದ್ರತೆ ಮತ್ತು ಸಂಚಾರದ ಸ್ವಾತಂತ್ರ್ಯದಲ್ಲಿ ದೊಡ್ಡಮಟ್ಟದ ಬದಲಾವಣೆಗೆ ಕಾರಣವಾಗಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ.
ಧ್ವನಿ ಸ್ಪಂದನ – ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್, ಐಐಟಿ ದೆಹಲಿಯ ರೈಸ್ಡ್ ಲೈನ್ಸ್ ಫೌಂಡೇಶನ್ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವಾಗಿದ್ದು, ಜರ್ಮನಿಯ GEZ ಸಂಸ್ಥೆಯ ಸಹಕಾರದೊಂದಿಗೆ ದೃಷ್ಟಿವಿಕಲ ಚೇತನ ಬಸ್ ಬಳಕೆದಾರರಿಗೆ ಬಸ್ಗಳನ್ನು ಗುರುತಿಸಲು ಹಾಗೂ ಧ್ವನಿ ಆಧಾರಿತ ಸೂಚನೆಗಳ ಮೂಲಕ ಬಸ್ ಪ್ರವೇಶದ ಸ್ಥಳವನ್ನು ಸುರಕ್ಷಿತವಾಗಿ ಕಂಡುಹಿಡಿಯಲು ಸಹಾಯ ಮಾಡುತ್ತದೆ. 400 ಕ್ಕೂ ಹೆಚ್ಚು ದೃಷ್ಟಿ ವಿಕಲ ಚೇತನ ಬಳಕೆದಾರರಿಗೆ ಇದರ ಬಳಕೆಯ ಕುರಿತು ತರಬೇತಿ ನೀಡಲಾಗಿದೆ

ಸರ್ಕಾರ, ಶಿಕ್ಷಣ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿದೆ ಜಾರಿಗೆ ತಂದಿರುವ ದೇಶದ ಮಾದರಿ ಯೋಜನೆ ಎಂಬ ಹೆಗ್ಗಳಿಕೆ ಪಡೆದಿದ್ದು, ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಈ ಪ್ರಶಸ್ತಿಯನ್ನು ನೀಡಿ, ಗೌರವಿಸಿದೆ.





