"ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯು ನಮಗೆ ತೋರಿಸಿಯೇ ಯಾವುದೇ ಆದೇಶ ಮಾಡಬೇಕೆಂದು ಮಾದಿಗ ಸಮುದಾಯದ ಸಚಿವರು ಸೂಚನೆ ನೀಡಬೇಕು" ಎಂದು ಎಚ್.ಆಂಜನೇಯ ಆಗ್ರಹಿಸಿದ್ದಾರೆ
“ಮಾದಿಗರು ತಾಯಿ ಕರುಳಿನವರು. ಅಲೆಮಾರಿ ಸಮುದಾಯಗಳ ಜೊತೆ ನಾವು ಸದಾ ಇರುತ್ತೇವೆ. ನಾವು ಉಪವಾಸವಿದ್ದರೂ ಬೇರೆಯವರಿಗೆ ಅನ್ನ ಹಾಕಿದ ಸಮುದಾಯ ನಮ್ಮದು. ಹಂಚಿಕೊಂಡು ತಿಂದವರು ಮಾದಿಗರು. ಅಲೆಮಾರಿಗಳ ಹಿತ ಕಾಯುವ ಕೆಲಸ ಮಾಡುತ್ತೇವೆ” ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಕರ್ನಾಟಕ ಮಾದಿಗ ಅಧಿಕಾರಿ ಮತ್ತು ನೌಕರರ ಸಮನ್ವಯ ಸಮಿತಿ ವತಿಯಿಂದ ಬೆಂಗಳೂರಿನ ಗಾಂಧಿಭವನದಲ್ಲಿ ಇಂದು (ಭಾನುವಾರ) ಆಯೋಜಿಸಲಾಗಿದ್ದ ‘ಒಳ ಮೀಸಲಾತಿ- ಮುಂದಿನ ಹೆಜ್ಜೆಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಲೆಮಾರಿಗಳನ್ನು ಮುಂದುವರಿದವರ ಗುಂಪಿಗೆ ಹಾಕಿದ್ದಾರೆ. ಇದು ಸರಿ ಇಲ್ಲ ಎಂದು ಹೇಳಿದ್ದೇನೆ. ಅಲೆಮಾರಿಗಳ ಜೊತೆ ಒಳಮೀಸಲಾತಿ ಹೋರಾಟಗಾರರು ಇದ್ದಾರೆ. ಅಲೆಮಾರಿಗಳನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿಸಿದ್ದೇನೆ. ಬೇರೆ ವ್ಯವಸ್ಥೆ ಮಾಡುವ ಭರವಸೆಯನ್ನು ಸಿಎಂ ನೀಡಿದ್ದಾರೆ. ನಮ್ಮ ಪಾಲು ನಮಗೆ ಕೊಡಿ; ಆಂಧ್ರ, ತೆಲಂಗಾಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕೊಟ್ಟಿದ್ದಾರೆ ಎಂಬುದನ್ನು ಅಲೆಮಾರಿಗಳು ಪ್ರಸ್ತಾಪಿಸಿದ್ದಾರೆ ಎಂದು ವಿವರಿಸಿದರು.
ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಅವರು ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಿದ್ದರು. ಅವರು ಜಾತಿಯ ಆಧಾರದಲ್ಲಿ ಒಳಮೀಸಲಾತಿ ನೀಡಿರಲಿಲ್ಲ. ಸುಪ್ರೀಂಕೋರ್ಟ್ ಸೂಚನೆಯನ್ನು ಪಾಲಿಸಿದ್ದರು. ಆದರೆ ನಾಗಮೋಹನ ದಾಸ್ ಅವರ ಬಗ್ಗೆ ಕೆಲವರು ಹಗುರವಾಗಿ ಮಾತನಾಡಿದರು. ವರದಿಯನ್ನು ಸುಟ್ಟು ಹಾಕಿದರು. ಪ್ರತಿಭಟನೆಯನ್ನು ನಡೆಸಿದರು. ಅಂತಿಮವಾಗಿ ಒಳಮೀಸಲಾತಿ ಜಾರಿಯಾಗಿದೆ. ಅದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇವೆ. ಆದರೆ ಮಾದಿಗ ಸಮುದಾಯವು ಅಲೆಮಾರಿಗಳೊಂದಿಗೆ ಎಂದಿಗೂ ಇರಲಿದೆ ಎಂದು ಭರವಸೆ ನೀಡಿದರು.

ಪರೆಯ, ಮೊಗೇರ ಸಮುದಾಯಗಳನ್ನು ಮಾದಿಗರೊಂದಿಗೆ ಸೇರಿಸಲಾಗಿತ್ತು. ಅವರನ್ನು ಹೊರತುಪಡಿಸಿದರೂ ಮಾದಿಗರೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 27 ಲಕ್ಷ ಜನರು ಮಾದಿಗ ಎಂದೂ, 5 ಲಕ್ಷ ಜನರು ಮಾದಾರ ಎಂದು ಬರೆಸಿದ್ದಾರೆ. ಜೆಡಿಎಸ್ನವರು ತಮ್ಮ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಯ ಭರವಸೆ ನೀಡಿದ್ದರು. ಬಿಜೆಪಿಯವರು ವರ್ಗೀಕರಣಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ ಅವರು ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದರೆ ಜಾರಿಯಾಗುತ್ತಿತ್ತು. ಯಾರೂ ಮಾಡಲಾಗದ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿ ತೋರಿಸಿದ್ದಾರೆ ಎಂದು ಬಣ್ಣಿಸಿದರು.
ಇದನ್ನೂ ಓದಿರಿ: ‘ಜಾತಿ ಸಮೀಕ್ಷೆಯಲ್ಲಿ ಉಪಜಾತಿಗಳನ್ನು ಒಂದೇ ಕಡೆ ಸೇರಿಸಿ’; ಕೆ.ಎನ್.ಲಿಂಗಪ್ಪ ಸಲಹೆ
ನಮಗೆ ತೋರಿಸಿಯೇ ಆದೇಶ ಮಾಡಬೇಕು: ಇನ್ನು ಮುಂದೆ ಸಮಾಜ ಕಲ್ಯಾಣ ಇಲಾಖೆಯು ನಮಗೆ ತೋರಿಸಿಯೇ ಯಾವುದೇ ಆದೇಶ ಮಾಡಬೇಕು ಎಂದು ಮಾದಿಗ ಸಮುದಾಯದ ಸಚಿವರು ಸೂಚನೆ ನೀಡಬೇಕು. ಎಚ್.ಸಿ.ಮಹದೇವಪ್ಪ ಅವರೊಂದಿಗೂ ಸಚಿವರು ಮಾತನಾಡಬೇಕು ಎಂದು ಎಚ್. ಆಂಜನೇಯ ಆಗ್ರಹಿಸಿದರು.
‘ನೀವು ಎಂಎಲ್ಸಿ ಆಗಬೇಕು’ ಎಂದು ಪ್ರೇಕ್ಷಕರೊಬ್ಬರು ಹೇಳಿದಾಗ, “ನಾನು ಭಿಕ್ಷುಕನಲ್ಲ, ಹೋರಾಟಗಾರ. ಒಳಮೀಸಲಾತಿಯೊಂದನ್ನು ಮಾಡಿ, ಮತ್ತೆ ಇನ್ನೇನೂ ಬೇಕಿಲ್ಲ ಎಂದು ನಮ್ಮ ಪಕ್ಷದ ನಾಯಕರಲ್ಲಿ ಕೋರಿದ್ದೆ. ಕಳೆದ ಚುನಾವಣೆಯಲ್ಲಿ ಸೋಲಿನ ಸುಳಿವು ಇತ್ತು. ಸ್ಪರ್ಧಿಸಬೇಡಿ, ನೀವು ಹಾಗೆಯೇ ಸಚಿವರಾಗುತ್ತೀರಿ ಎಂದು ಪಕ್ಷ ಹೇಳಿತ್ತು. ಆದರೆ ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆಂದು ಹೋದೆ, ಸೋತೆ. ನನಗೆ ಅಧಿಕಾರದ ಆಸೆ ಇಲ್ಲ. ಒಳಮೀಸಲಾತಿ ನಾನು ಸತ್ತ ಮೇಲೆ ಆಗಬಹುದು ಎಂದುಕೊಂಡಿದ್ದೆ. ಸದ್ಯ ಬದುಕಿದ್ದಾಗಲೇ ಜಾರಿಗೆ ಬಂದಿದೆ” ಎಂದು ಪ್ರತಿಕ್ರಿಯಿಸಿದರು.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, “ಪ್ರತಿಯೊಬ್ಬ ಮಾದಿಗ ಬಂಧುಗಳಿಗೆ ಈ ಗೆಲುವು ಸೇರಬೇಕು. ಒಳಮೀಸಲಾತಿ ಸರಿಯಾಗಿ ಹಂಚಿಕೆಯಾಗಿಲ್ಲ ಎಂಬ ಆಕ್ಷೇಪಗಳೂ ಹುಟ್ಟಿವೆ. ಕೋರ್ಟ್ಗೂ ಹೋಗುತ್ತಾರೆಂಬ ಆತಂಕವೂ ಮನೆಮಾಡಿದೆ” ಎಂದರು.
“ಒಳಮೀಸಲಾತಿಯಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಹದಿನೇಳು ಪರ್ಸೆಂಟ್ನಲ್ಲಿ ನಮಗೆ ಈವರೆಗೆ ಸಿಗುತ್ತಿದ್ದದ್ದು ಕೇವಲ ಒಂದೂವರೆ ಪರ್ಸೆಂಟ್ ಅಷ್ಟೇ. ಮುಕ್ಕಿದ್ದನ್ನು ಬೇರೆಯವರು ತಿನ್ನುತ್ತಿದ್ದರು. ನಾವು ಸುಮ್ಮನೇ ನೋಡುತ್ತಾ ಕೂರುತ್ತಿದ್ದೆವು. ಆದರೆ ಈಗ ಒಳಮೀಸಲಾತಿ ಜಾರಿಯಾಗಿದೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕ್ಯಾಬಿನೆಟ್ ಒಳಗೆ ಎಷ್ಟೆಲ್ಲ ನಾಟಕೀಯ ಬೆಳವಣಿಗೆಗಳಾದವು ಎಂಬುದು ಗೊತ್ತಿದೆ. ಅವುಗಳನ್ನು ಇಲ್ಲಿ ಹೇಳಲಾರೆ” ಎಂದು ತಿಳಿಸಿದರು.
ಸರ್ಕಾರಿ ಎಡಗೈ ನೌಕರರ ಸಂಘದ ಅಧ್ಯಕ್ಷ ಪಿ.ಒ.ಮಂಜುನಾಥ ಮಾತನಾಡಿ, “ಒಳಮೀಸಲಾತಿಯಿಂದಾಗಿ ಬಡ್ತಿ ಮತ್ತು ರೋಸ್ಟರ್ನಲ್ಲಿ ಮಾದಿಗ ಸಮುದಾಯಕ್ಕೆ ಅನುಕೂಲವಾಗುತ್ತಿದೆ. ಇದರ ಮೊದಲ ಫಲಾನುಭವಿಗಳು ನೌಕರರೇ ಆಗಿರುತ್ತಾರೆ. ಹೋರಾಟಗಾರರಿಗೆ ನಾವೆಲ್ಲ ಋಣಿಯಾಗಿರಬೇಕು. ಹಸಿವು, ನಿದ್ರೆಯನ್ನು ಬಿಟ್ಟು, ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಒಳಮೀಸಲಾತಿಗಾಗಿ ಹೋರಾಡಿದವರ ಮಕ್ಕಳು ಇದರಿಂದ ಹೆಚ್ಚು ಫಲವನ್ನುಣ್ಣುವುದಿಲ್ಲ. ಒಂದಿಷ್ಟು ಆರ್ಥಿಕ ಸ್ಥಿತಿ ಉತ್ತಮವಾಗಿರುವ ನಮ್ಮಂಥ ನೌಕರರ ಮಕ್ಕಳಿಗೆ ಇದರಿಂದ ಭಾರೀ ಅನುಕೂಲವಾಗುತ್ತದೆ. ಈವರೆಗೆ ಆಗುತ್ತಿದ್ದ ಅನ್ಯಾಯವನ್ನು ಹೋಗಲಾಡಿಸಿದ ಎಲ್ಲ ಹೋರಾಟಗಾರರಿಗೆ ನಾವು ದೊಡ್ಡಮಟ್ಟದಲ್ಲಿ ಸನ್ಮಾನಿಸಬೇಕು. ಅವರಿಗೆ ನಾವು ಎಂದಿಗೂ ಬಲ ತುಂಬಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿರಿ: ವಿಧಾನಸಭೆ, ಲೋಕಸಭೆಯಲ್ಲಿ ಒಬಿಸಿಗಳಿಗೆ ಮೀಸಲಾತಿ ಬೇಕೇಬೇಕು: ಎ.ನಾರಾಯಣ
ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾದಿಗ ಅಧಿಕಾರಿ ಮತ್ತು ನೌಕರರ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಗೋನಾಳ ಭೀಮಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ, ಮಾಜಿ ಸಂಸದ ಎಲ್. ಹನುಮಂತಯ್ಯ, ಒಳಮೀಸಲಾತಿ ಹೋರಾಟಗಾರರಾದ ಎಸ್.ಮಾರೆಪ್ಪ, ಅಂಬಣ್ಣ ಅರೋಲಿಕರ್, ಬಸವರಾಜ ಕೌತಾಳ್, ದಾಸನೂರು ಕೂಸಣ್ಣ, ಪಾವಗಡ ಶ್ರೀರಾಮ್, ಕೇಶವಮೂರ್ತಿ, ಮಾಜಿ ಎಂಎಲ್ಸಿ ಸಿ.ರಮೇಶ್, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಆಹಾರ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್, ನಿವೃತ್ತ ಅಧಿಕಾರಿ ಭೀಮಶಂಕರ್, ‘ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡಕಟ್ಟು ಒಕ್ಕೂಟ’ದ ಕಾರ್ಯಾಧ್ಯಕ್ಷ ಚಾವಡಿ ಲೋಕೇಶ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.





