ಧರ್ಮಸ್ಥಳದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಎರಡನೇ ಬಾರಿಗೆ ಆದೇಶ ಹೊರಡಿಸಿದ್ದಾರೆ. ಆದೇಶವನ್ನು ತಿಮರೋಡಿ ಅವರ ಮನೆ ಬಾಗಿಲಿಗೆ ಅಂಟಿಸಿದ್ದಾರೆ.
ಈ ಹಿಂದೆಯೂ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ತಮ್ಮ ಗಡಿಪಾರು ಆದೇಶದ ವಿರುದ್ಧ ತಿಮರೋಡಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಮರುಪರಿಶೀಲನೆಗೆ ಸೂಚಿಸಿತ್ತು. ಇದೀಗ, ಮತ್ತೊಮ್ಮೆ ತಿಮರೋಡಿ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಸಹಾಯಕ ಆಯುಕ್ತರು ಗಡಿಪಾರು ಆದೇಶವನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಳಿಸಿದ್ದಾರೆ. ಪೊಲೀಸರು ಉಜಿರೆಯಲ್ಲಿರುವ ತಿಮರೋಡಿ ಅವರ ಮನೆಗೆ ತೆರಳಿದ್ದು, ಅವರ ಆದೇಶ ಪ್ರತಿಯನ್ನು ಮನೆ ಬಾಗಿಲಿಗೆ ಅಂಟಿಸಿ ಬಂದಿದ್ದಾರೆ. ಈ ಸಂದರ್ಭದಲ್ಲಿ, ತಿಮರೋಡಿ ಅವರು ಮನೆಯಲ್ಲಿ ಇರಲಿಲ್ಲವೆಂದು ಹೇಳಲಾಗಿದೆ.
ಅಲ್ಲದೆ, ತಿಮರೋಡಿ ಅವರ ಗಡಿಪಾರು ಕುರಿತು ಬೆಳ್ತಂಗಡಿ ಪೊಲೀಸರು ಉಜಿರೆಯಲ್ಲಿ ಮೈಕ್ ಮೂಲಕವೂ ಪ್ರಕಟಿಸಿದ್ದಾರೆ ಎಂದು ವರದಿಯಾಗಿದೆ.




