ಬಿಹಾರ ವಿಧಾನಸಭೆಯ ಫಲಿತಾಂಶ ಪ್ರಕಟವಾಗುವವರೆಗೂ ತಣ್ಣಗಿದ್ದ ಕಾಂಗ್ರೆಸ್ ಒಳಗಿನ ‘ನವೆಂಬರ್ ಕ್ರಾಂತಿ’ಗೆ ಏಕಾಏಕಿ ಮಿಂಚಿನ ಸಂಚಲನ ಪಡೆದುಕೊಂಡಿದೆ. ಸಿದ್ದು ಸರ್ಕಾರ ನ.20ಕ್ಕೆ ಎರಡೂವರೆ ವರ್ಷ ಪೂರೈಸಿದ ದಿನವೇ ಡಿಸಿಎಂ ಡಿ ಕೆ ಶಿವಕುಮಾರ್ ಬಣದ ಅದರಲ್ಲೂ ಒಕ್ಕಲಿಗ ನಾಯಕರು ದೆಹಲಿಗೆ ದೌಡಾಯಿಸಿದ್ದು, ನವೆಂಬರ್ ಕ್ರಾಂತಿಯ ಕಾವನ್ನು ಹೆಚ್ಚಿಸಿದೆ.
ಬಿಹಾರ ಫಲಿತಾಂಶ ಎಐಸಿಸಿಗೆ ದೊಡ್ಡ ಹಿನ್ನಡೆ ತಂದಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು. ಸ್ವತಃ ರಾಹುಲ್ ಗಾಂಧಿ ಅವರೇ ಬಿಹಾರ ಫಲಿತಾಂಶ ಹೀಗೆ ಹೊರಬರುತ್ತದೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಫಲಿತಾಂಶ ಪ್ರಕಟವಾದ ಮರುದಿನವೇ ಸಿಎಂ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ತಮ್ಮ ಭೇಟಿಗೆ ಅವಕಾಶ ನೀಡಿದ್ದು, ನವೆಂಬರ್ ಕ್ರಾಂತಿಯ ಕಿಚ್ಚಿಗೆ ಕಾರಣವಾಗಿದೆ.
ರಾಹುಲ್ ಗಾಂಧಿ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದು, ರಾಹುಲ್ ಅವರಿಗೆ ಧೈರ್ಯ ತುಂಬುವ ಜೊತೆಗೆ ಸಚಿವ ಸಂಪುಟ ಪುನಾರಚನೆ ವಿಚಾರ ಪ್ರಸ್ತಾಪಿಸಿ ಅವರಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ಸಚಿವ ಸಂಪುಟ ಪುನಾರಚನೆ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ಸಹೋದರರು ದೆಹಲಿಗೆ ಆಗಮಿಸಿ ವರಿಷ್ಠರ ಭೇಟಿ ಸಾಧ್ಯವಾಗದೇ ಬೆಂಗಳೂರಿಗೆ ಮರಳಿ ತೆರೆಯ ಹಿಂದೆ ಹೊಸ ಆಟ ಆರಂಭಿಸಿದ್ದಾರೆ.
ಡಿ ಕೆ ಶಿವಕುಮಾರ್ ದೆಹಲಿ ಪತ್ರಕರ್ತರ ಬಳಿ ಆಪ್ತ ದಿ ರೆಕಾರ್ಡ್ ಆಗಿ ಹೇಳಿದ್ದು ಏನೆಂದರೆ; “ಸಿಎಂ ಬಣ ಆಟ ಆರಂಭಿಸಿದರೆ, ಆಟ ಮುಗಿಸುವುದು ನಾನು” ಎಂಬುದು. ಹಾಗೆ ನೋಡಿದರೆ ಸಿಎಂ ಬಣದ ನಾಯಕರು ಔತಣಕೂಟ ಸೇರಿ ಸಭೆಗಳನ್ನು ಮಾಡುತ್ತಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆಗೆ ಕಸರತ್ತು ನಡೆಸುವ ಮೂಲಕ ಆಟ ಆರಂಭಿಸಿದ್ದಾರೆ.
ಡಿ ಕೆ ಶಿವಕುಮಾರ್ ಇದಕ್ಕೆ ಪ್ರತ್ಯುತ್ತರವಾಗಿ ಆಟ ಆರಂಭಿಸಿದ್ದಾರೆ. ಡಿಕೆ ಬಣದ ಒಕ್ಕಲಿಗ ನಾಯಕರು ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಹೈಕಾಂಡ್ ಭೇಟಿ ಮಾಡಿ ಶುಕ್ರವಾರ ಬೆಂಗಳೂರಿಗೆ ಮರಳಿದ್ದಾರೆ. ಅವರ ಭೇಟಿಯ ಉದ್ದೇಶ, ‘ಅಧಿಕಾರ ಹಸ್ತಾಂತರ ಆಗಿದೆಯೋ ಇಲ್ಲವೋ ಎಂಬುದು ಹೈಕಮಾಂಡ್ ಖಚಿತಪಡಿಸಬೇಕು. ಪಕ್ಷಕ್ಕಾಗಿ ದುಡಿದ ಡಿ ಕೆ ಶಿವಕುಮಾರ್ ಅವರಿಗೂ ಇದೇ ಅವಧಿಯಲ್ಲಿ ಸಿಎಂ ಸ್ಥಾನ ಕೊಡಬೇಕು. ಸಿಎಂ ಸಿದ್ದರಾಮಯ್ಯ ಅವರು ಎಷ್ಟು ದಿನ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಾರೋ ಅಲ್ಲಿಯವರೆಗೂ ಡಿ ಕೆ ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು..’ ಎಂಬ ಸಂದೇಶವನ್ನು ಡಿ ಕೆ ಶಿವಕುಮಾರ್ ನಿಯೋಗದ ಮೂಲಕ ಹೈಕಮಾಂಡ್ಗೆ ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಅನ್ನು ಭೇಟಿ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗೆಯೇ ವಿಮಾನದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚಲುವರಾಯಸ್ವಾಮಿ ಸುದ್ದಿಗಾರರ ಜೊತೆ ಮಾತನಾಡಿ, “ಸದ್ಯ ಎದ್ದಿರುವ ಗೊಂದಲಗಳನ್ನು ಹೈಕಮಾಂಡ್ ಶೀಘ್ರ ಬಗೆಹರಿಸಲಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಈ ʼಗಣ್ಯರುʼ ಸರ್ಕಾರದ ತುತ್ತೂರಿಯಾದರೆ ಸಾಕೇ? ಸತ್ಯವಂತ ಸಮಾಜಮುಖಿ ಆಗಲೂ ಬೇಕೇ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಖರ್ಗೆ ನಿವಾಸವೇ ಇನ್ಮುಂದೆ ಪವರ್ ಸೆಂಟರ್ ಆಗುವ ನಿರೀಕ್ಷೆ ಇದೆ. ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಖರ್ಗೆ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಇತ್ತ ಡಿಕೆ ಸಹೋದರರಿಗೂ ಖರ್ಗೆ ಅವರು ಭೇಟಿಯಾಗಲು ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಸಹಜವಾಗಿಯೇ ಕುತೂಹಲ ಸೃಷ್ಟಿಸಿದ್ದು, ದೆಹಲಿಯಿಂದ ಖರ್ಗೆ ಅವರು ಯಾವ ಸಂದೇಶ ಹೊತ್ತು ಆಗಮಿಸಿದ್ದಾರೆ ಎನ್ನುವುದು ನಿಗೂಢವಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಹೊತ್ತು ತಂದ ಸಂದೇಶದಲ್ಲಿ ಸಿಎಂ ಬದಲಾವಣೆ ಇಲ್ಲ ಎನ್ನುತ್ತವೆ ಪಕ್ಷದೊಳಗಿನ ಮೂಲಗಳು. ಪಕ್ಷದೊಳಗಿನ ಗುಂಪುಗಾರಿಕೆಗೆ ತಡೆಯೊಡ್ಡುವುದು, ಸಿಎಂ ಸಿದ್ದರಾಮಯ್ಯ ಅವರು ಪದೇಪದೆ ನಾನೇ 5 ವರ್ಷ ಸಿಎಂ ಎಂದು ಹೇಳುವುದಕ್ಕೆ ಪೂರ್ಣವಿರಾಮ ಹಾಕುವುದು, ಎರಡೂ ಬಣಗಳ ಒಲೈಕೆ ಮಾತಿಗೆ ಕಡಿವಾಣ ಹಾಕುವುದು ಹಾಗೂ ಅಧಿಕಾರ ಹಸ್ತಾಂತರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡುವುದನ್ನು ಇನ್ಮುಂದೆ ನಿಲ್ಲಿಸುವುದೇ ಆಗಿರಲಿದೆ. ಪವರ್ ಸೆಂಟರ್ ಖರ್ಗೆ ನಿವಾಸದಲ್ಲಿ ಏನೆಲ್ಲ ಬೆಳವಣಿಗೆಯಾಗಲಿದೆ ಎಂಬುದೇ ಸದ್ಯದ ಕುತೂಹಲ.





