ಮಹಿಳಾ ಚಳುವಳಿ ಹಲವು ಸವಾಲುಗಳನ್ನು ಎದುರಿಸುತ್ತ ಮುಂದೆ ಸಾಗುತ್ತಿದೆ. ದಲಿತ ಮಹಿಳೆಯರು, ರೈತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮುಸ್ಲಿಂ ಮಹಿಳೆಯರ ಮೇಲೆ ಅವಮಾನಕಾರಿ ನಡೆಗಳು ಹೆಚ್ಚುತ್ತಿವೆ. ಹಾಗಾಗಿ ಮಹಿಳೆಯರು ಶಿಕ್ಷಣ, ಸ್ವಾವಲಂಬನೆ ಮೂಲಕ ಮುನ್ನಡೆಯಬೇಕು ಎಂದು ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಪ್ರಶ್ನಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವೀಯ ಗೌರವಕ್ಕಾಗಿ ಮಹಿಳೆಯರ ಒಗ್ಗಟ್ಟಿನ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಸನ ಜಿಲ್ಲಾ ಘಟಕದಿಂದ ಮಾರ್ಚ್ 7 ಮತ್ತು 8ರಂದು ಎರಡು ದಿನಗಳ ಕಾಲ ಜಾಥಾ, ಸಾರ್ವಜನಿಕ ಸಮಾವೇಶ, ಮೌನ ಜಾಗೃತಿ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದ ಮೊದಲ ದಿನದಂದು ಮಾತನಾಡಿದರು.
“ಕರ್ನಾಟಕವೆಂದರೆ ನನಗೆ ಎರಡನೇ ಮನೆ ಇದ್ದಂತೆ. ನನಗೆ ಇಲ್ಲಿ ಬರಲು ತುಂಬಾ ಖುಷಿಯಾಗುತ್ತದೆ. ಪ್ರಸ್ತುದಲ್ಲಿ ನಾವೆಲ್ಲ ಎಂತಹ ಕಾಲದಲ್ಲಿ ಬದುಕಿದ್ದೇವೆ. ಆದರೂ ಕೂಡ ರಸ್ತೆಗಳ ಮೇಲೆ ಒಗ್ಗೂಡುತ್ತಿದ್ದೇವೆ. ಎಂಬುದು ತುಂಬಾ ಮುಖ್ಯವಾಗಿದ್ದು,, ನಿಮ್ಮೆಲ್ಲರ ಒಗ್ಗೂಡುವಿಕೆ ಕರ್ನಾಟಕದಲ್ಲಿ ಆಗುತ್ತಿರುವುದು ಖುಷಿ ಇದೆ. ನೀವು ಅನುಭವಿಸುತ್ತಿರುವ ಸಾಲಿಡಾರಿಟಿ ಇದೆಯಲ್ಲ ಇದು ತುಂಬಾ ಮುಖ್ಯ” ಎಂದು ತಿಳಿಸಿದರು.
“ಹಿಂಸಾಚಾರಗಳು ನಡೆಯುವುದು ಕೇವಲ ಗುಜರಾತ್ನಲ್ಲಿ ಮಾತ್ರ ಅಲ್ಲ. ಶಾಲೆಗಳಲ್ಲಿ, ಮನೆಯ ಒಳಗೆ , ಹೊರಗೆ ಸೇರಿದಂತೆ ದೇಶ ಹಾಗೂ ಜಗತ್ತಿನಾದ್ಯಂತ ಎಲ್ಲ ಕಡೆ ಹಿಂಸೆ ಇದೆ. ಎಲ್ಲರಿಗೂ ಸವಾಲುಗಳಿವೆ. ನಾವು ಹೀಗೆ ಒಗ್ಗೂಡದಿದ್ದರೆ ಹಲವು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ನೀವು ರೈತ ಮಹಿಳೆಯರಿಗಾಗಿ ಯಾವ ರೀತಿಯ ಕೆಲಸಗಳನ್ನು ಮಾಡುತ್ತಿದ್ದೀರಾ? ಮನೆಗೆಲಸದ ಮಹಿಳೆಯರು, ಪೌರಕಾರ್ಮಿಕ ಮಹಿಳೆಯರ ಪರವಾಗಿ ಯಾವ ರೀತಿಯ ಕೆಲಸಗಳನ್ನು ಕೈಗೊಂಡಿದ್ದೀರಾ” ಎಂದು ಪ್ರಶ್ನಿಸಿದರು.
“ಹಿಂದುತ್ವದ ಹೆಸರಿನಲ್ಲಿ ಮಾತನಾಡುವವರು ಮನೆ ಕೆಲಸಗಾರರು ಹಾಗೂ ಸ್ವಚ್ಛತಾ ಕಾರ್ಮಿಕರನ್ನು ನಿಜವಾಗಿಯೂ ಗೌರವದಿಂದ ನೋಡಿಕೊಳ್ಳುತ್ತಾರೆಯೇ? ರಾಧಿಕಾ ವೇಮುಲಾ, ಅಮಿನಾ ತರವಿ ಎನ್ನುವವರ ಮಕ್ಕಳು 700 ಮಂದಿ ಯುವಜನರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಇಲ್ಲಿಯ ಜಾತಿ ವ್ಯವಸ್ಥೆ ಬೇರೂರಿದೆ. ಇದು ಕೇವಲ ಆತ್ಮಹತ್ಯೆ ಅಲ್ಲ. ಶಿಕ್ಷಣ ಸಂಸ್ಥೆ ನಡೆಸಿದ ಕೊಲೆ. ಹಾಗಾಗಿ ಇಂತಹ ಮಕ್ಕಳ ತಾಯಂದಿರನ್ನು ನಾನು ನೆನಪಿಸಿಕೊಳ್ಳುತ್ತೇನೆ. ಜಾತಿ, ಲಿಂಗತ್ವ, ಲಿಂಗತ್ವ ಅಲ್ಪಸಂಖ್ಯಾತರ ವಿಚಾರಗಳನ್ನು ನಾವು ತೆಗೆದುಕೊಳ್ಳಬೇಕು. ಸಾವಿತ್ರಿ ಬಾಯಿ, ಫಾತೀಮಾ ಶೇಕ್, ಪಂಡಿತಾ ರಮಾ ಬಾಯಿಯಂತಹ ಮಹನೀಯ ಮಹಿಳೆಯರು ನಾಲ್ಕು ದಿಕ್ಕುಗಳಲ್ಲೂ ಸಿಗುತ್ತಾರೆ. ಇವರೆಲ್ಲರೂ ಜಾತಿ ದೌರ್ಜನ್ಯ, ಲಿಂಗತಾರತಮ್ಯಗಳನ್ನು ಪ್ರಶ್ನಿಸಿದರು. ಅಂತಯೇ ನಾವೂ ಕೂಡ ಇವರದೇ ಹಾದಿಯಲ್ಲಿ ಮುನ್ನಡೆಯಬೇಕು” ಎಂದು ಕರೆ ನೀಡಿದರು.
“ಈ ಎರಡು ದಿನಗಳ ಸಮಾವೇಶದಲ್ಲಿ ಯಾವ ರೀತಿಯ ಹಕ್ಕೊತ್ತಾಯಗಳನ್ನು ಮಂಡಿಸುತ್ತಿದ್ದೀರೋ ನನಗೆ ಗೊತ್ತಿಲ್ಲ. ಆದರೆ, ಇಡೀ ವಿಶ್ವಾದ್ಯಂತ ನಡೆಯುತ್ತಿರುವ ಹಿಂಸೆ ಹಾಗೂ ಗಾಝಾ ಮತ್ತು ಇರಾನ್ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ 70 ಸಾವಿರ ಮಂದಿ ತೀರಿಕೊಂಡಿದ್ದಾರೆ. ಇದರಲ್ಲಿ 18 ಸಾವಿರ ಮಕ್ಕಳು ಮೃತಪಟ್ಟಿದ್ದಾರೆ. ಆ ಮಕ್ಕಳ ಅಮ್ಮಂದಿರ ದುಃಖ ನಮ್ಮ ದುಃಖವೂ ಆಗಿದೆ. ಹಾಗಾಗಿ ಇದಕ್ಕೆ ಕಾರಣವಾಗಿರುವುದರ ವಿರುದ್ಧ ನಾವು ಧ್ವನಿ ಎತ್ತಲೇಬೇಕಾಗಿದೆ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಒಂದು ಸುಳ್ಳು ಯುದ್ಧ ಅಂದರೆ, ಇದು ಅತಿಕ್ರಮಣವಾಗಿದೆ. ಇಂಥದ್ದನ್ನೆಲ್ಲ ಮಹಿಳಾ ಚಳವಳಿ ಗಮನಿಸಿ ಪ್ರಶ್ನಿಸಬೇಕಾಗಿದೆ” ಎಂದು ಹೇಳಿದರು.
“ಅಲ್ಲದೆ, ರಾಜ್ಯದಲ್ಲಿ ನಿನ್ನೆಯಷ್ಟೇ ಬಜೆಟ್ ಮಂಡನೆಯಾಗಿದೆ. ಇದರಲ್ಲಿ ಸಾಮಾಜಿಕ ನ್ಯಾಯ ಎಷ್ಟರ ಮಟ್ಟಿಗೆ ಅನ್ವಯಿಸಲ್ಪಟ್ಟಿದೆ. ಲಿಂಗ ಸಮಾನತೆಗೆ ನ್ಯಾಯ ದೊರಕಿಸಲು ಎಷ್ಟೆಷ್ಟು ಅನುದಾನ ನೀಡಿದ್ದಾರೆ ಎಂಬುದನ್ನೂ ಕೂಡ ಮಹಿಳಾ ಚಳವಳಿ ಗಮನಿಸಬೇಕು. ಲಿಂಗ ತಾರತಮ್ಯ ಎಂಬುದು ನಮ್ಮ ಕುಟುಂಬದಿಂದ ಹಿಡಿದು, ರಸ್ತೆ, ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಈ ಸಮಾಜದಲ್ಲಿ ಹರಿದಾಡುತ್ತಲೇ ಇದೆ. ಎಲ್ಲ ಕಡೆ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪುರುಷಾಧಿತ್ಯ ಸಾಧಿಸುತ್ತಲೇ ಬಂದಿದೆ. ಇವೆಲ್ಲವನ್ನೂ ನಾವು ಪ್ರಶ್ನಿಸಲೇಬೇಕಾಗಿದೆ” ಎಂದರು.
ಇದನ್ನೂ ಓದಿದ್ದೀರಾ? ದಾವಣಗೆರೆ | ಶಿಕ್ಷಣ ಕ್ಷೇತ್ರದಲ್ಲಿ ಮಾನಸಿಕ ಆರೋಗ್ಯ ಸುಧಾರಣೆಗೆ ಸಲಹೆಗಾರರ ನೇಮಕ ಉತ್ತಮ ನಿರ್ಧಾರ
“ಮಹಿಳೆಯರು ಶಿಕ್ಷಣ ಮತ್ತು ಸ್ವಾವಲಂಬನೆಯ ಮೂಲಕ ಸಮಾಜದಲ್ಲಿ ಮುನ್ನಡೆಯಬೇಕು. ಮಹಿಳೆಯರ ಮೇಲಿನ ಅನ್ಯಾಯ, ಹಿಂಸೆ ಮತ್ತು ಭೇದಭಾವಗಳನ್ನು ತಡೆಗಟ್ಟಲು ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಈ ರೀತಿಯ ಬೃಹತ್ ಸಮಾವೇಶಗಳು ನಡೆಯುವುದರಿಂದ ಮಹಿಳೆಯರಲ್ಲಿ ಐಕ್ಯತೆ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಾಸನದಲ್ಲಿ ನಡೆದ ಈ ಕಾರ್ಯಕ್ರಮ ಮಹಿಳಾ ಚಳವಳಿಗೆ ಹೊಸ ಉತ್ಸಾಹ ನೀಡಿದಂತೆ ಕಂಡುಬಂದಿದೆ” ಎಂದು ನುಡಿದರು.





