ರಾಜ್ಯದ ಮಹಿಳಾ ನೌಕರರಿಗೆ ನೀಡಲಾಗುವ ವೇತನ ಸಹಿತ ‘ಮುಟ್ಟಿನ ರಜೆ’ ನಿಯಮವನ್ನು ಜಾರಿಗೊಳಿಸದ ಉದ್ಯೋಗದಾತರಿಗೆ ಕಾರಣ ಕೇಳಿ ರಾಜ್ಯ ಸರ್ಕಾರ ಶೋಕಾಸ್ ನೋಟಿಸ್ ನೀಡುತ್ತಿದೆ. ಸರ್ಕಾರದ ಈ ನಡೆಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ನೋಟಿಸ್ ನೀಡದಂತೆ ಮೌಖಿಕವಾಗಿ ಎಚ್ಚರಿಕೆ ನೀಡಿದೆ.
2025ರ ನವೆಂಬರ್ 20ರಂದು ರಾಜ್ಯ ಕಾರ್ಮಿಕ ಇಲಾಖೆಯು ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ನೀಡುವಂತೆ ಅಧಿಸೂಚನೆ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ‘ಬೆಂಗಳೂರು ಹೋಟೆಲ್ಗಳ ಸಂಘ’ದ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಮತ್ತು ಇತರ ಉದ್ಯಮಿಗಳು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.
ವಿಚಾರಣೆಯ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಬಿ.ಕೆ. ಪ್ರಶಾಂತ್, “ಋತುಚಕ್ರದ ರಜೆ ನೀಡುವ ನೀತಿಯು ಹೋಟೆಲ್ ಮತ್ತು ಇತರ ಸೇವಾ ಉದ್ಯಮಗಳ ಹಿತಾಸಕ್ತಿಗೆ ವಿರುದ್ಧವಾಗಿದೆ. ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪ್ರಕರಣವು ನ್ಯಾಯಾಲಯದ ವಿಚಾರಣೆಯ ಹಂತದಲ್ಲಿರುವಾಗಲೇ, ರಜೆ ನೀಡದ ಉದ್ಯೋಗದಾತರಿಗೆ ಸರ್ಕಾರ ಷೋಕಾಸ್ ನೋಟಿಸ್ ನೀಡುತ್ತಿದೆ. ಇದು ಉದ್ಯಮ ನಡೆಸಲು ತೀವ್ರ ಅಡಚಣೆ ಉಂಟುಮಾಡುತ್ತಿದೆ” ಎಂದು ವಾದಿಸಿದ್ದಾರೆ.
ಮುಂದುವರೆದು, “ಸರ್ಕಾರವು ಮಹಿಳಾ ನೌಕರರ ರಕ್ಷಣೆಯ ನೆಪದಲ್ಲಿ ಕೆಲಸಗಾರರು ಮತ್ತು ಉದ್ಯೋಗದಾತರ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ” ಎಂದು ದೂರಿದ್ದಾರೆ.
ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, “ಸರ್ಕಾರದ ಅಧಿಸೂಚನೆಯಲ್ಲಿ ಉದ್ಯೋಗದಾತರಿಗೆ ತೊಂದರೆಯಾಗುವ ಯಾವುದೇ ಅಂಶಗಳಿಲ್ಲ. ಅಲ್ಲದೆ, ಮಾಹಿತಿಯ ಪ್ರಕಾರ ಈವರೆಗೆ ಯಾರೊಬ್ಬರಿಗೂ ಇಂತಹ ನೋಟಿಸ್ ಜಾರಿಯಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯವು, “ಪ್ರಕರಣವು ವಿಚಾರಣಾ ಹಂತದಲ್ಲಿರುವಾಗ ಉದ್ಯೋಗದಾತರ ವಿರುದ್ಧ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು. ಒಂದು ವೇಳೆ ಸರ್ಕಾರವು ಷೋಕಾಸ್ ನೋಟಿಸ್ ನೀಡುವುದನ್ನು ಮುಂದುವರಿಸಿದರೆ, ಅಂತಹ ನೋಟಿಸ್ಗಳಿಗೆ ನ್ಯಾಯಾಲಯವು ತಡೆ ನೀಡಬೇಕಾಗುತ್ತದೆ” ಎಂದು ಮೌಖಿಕವಾಗಿ ಎಚ್ಚರಿಸಿದೆ.
ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದೆ.




