“ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಬೇಕು ಅಥವಾ ಮರುಪರಿಶೀಲಿಸಬೇಕು ಎಂಬುದು ನಿಮ್ಮ ಪಕ್ಷದ ನಿಲುವಾಗಿದ್ದರೆ, ಧೈರ್ಯವಾಗಿ ಸದನದಲ್ಲಿ ಅಧಿಕೃತ ನಿರ್ಣಯ ಮಂಡಿಸಿ. ಆನಂತರ ಜನರ ಮುಂದೆ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸೋಣ” ಎಂದು ಬಿಜೆಪಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಗ್ಯಾರಂಟಿ ಯೋಜನೆಗಳ ರದ್ದತಿಗೆ ಆಗ್ರಹಿಸಿದಾಗ, ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.”ಸುರೇಶ್ ಗೌಡ ಅವರೇ, ನೀವು ಹಿರಿಯ ನಾಯಕರು. ನಿಮ್ಮ ಪಕ್ಕದಲ್ಲೇ ಮಾಜಿ ಉಪಮುಖ್ಯಮಂತ್ರಿಗಳಿದ್ದಾರೆ. ಗ್ಯಾರಂಟಿ ರದ್ದುಗೊಳಿಸುವ ಬಗ್ಗೆ ನೀವು ಆಡುತ್ತಿರುವ ಮಾತುಗಳು ಕೇವಲ ನಿಮ್ಮ ವೈಯಕ್ತಿಕ ಅಭಿಪ್ರಾಯವಲ್ಲ. ಅದು ನಿಮ್ಮ ಪಕ್ಷದ ನಿಲುವು ಎಂದೇ ಭಾವಿಸುತ್ತೇನೆ. ಈ ಬಜೆಟ್ ಅಧಿವೇಶನ ಮುಗಿಯುವ ಒಳಗೇ ನಿಮ್ಮ ಪಕ್ಷದ ಅಧಿಕೃತ ತೀರ್ಮಾನವನ್ನು ಸದನಕ್ಕೆ ತಿಳಿಸಿ, ನಾವು ಅದರ ಬಗ್ಗೆ ಚಿಂತನೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.
“ಯಡಿಯೂರಪ್ಪ ಅವರು ಈ ಹಿಂದೆ ‘ಒಂದು ಕಾಳು ಅಕ್ಕಿ ಕಡಿಮೆಯಾದರೂ ಬಿಡುವುದಿಲ್ಲ’ ಎಂದು ಎಚ್ಚರಿಸಿದ್ದರು. ಅಕ್ಕಿ ವಿತರಣೆ ಬಗ್ಗೆ ನೀವೇ ಟೀಕೆ ಮಾಡಿದ್ದೀರಿ. ನಿಮ್ಮ ಸವಾಲುಗಳನ್ನು ಸ್ವೀಕರಿಸಿಯೇ ನಾವು ಆರು ತಿಂಗಳೊಳಗೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ನಿಮ್ಮ ಮಾತನ್ನು ಕೇಳಿಯೇ ನಾವು ಈ ಯೋಜನೆಗಳನ್ನು ನೀಡಿದ್ದೇವೆ” ಎಂದಿದ್ದಾರೆ.
ಇತ್ತೀಚಿನ ಅಸ್ಸಾಂ ಪ್ರವಾಸವನ್ನು ಪ್ರಸ್ತಾಪಿಸಿದ ಶಿವಕುಮಾರ್, “ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಯೋಜನೆಗಳನ್ನು ನೀಡಲಾಗುತ್ತಿದೆ. ಆದರೆ, ನಮ್ಮದು ಸರ್ವರಿಗೂ ಸಮಬಾಳು. ನೀವು ಬೇಕಿದ್ದರೆ ‘ಚಾಟ್ ಜಿಪಿಟಿ’ಯಲ್ಲಿ ಗುಜರಾತ್ ಚುನಾವಣೆ ಗೆಲ್ಲುವುದು ಹೇಗೆ ಎಂದು ಹುಡುಕಿ ನೋಡಿ, ಅಲ್ಲಿಯೂ ಕರ್ನಾಟಕದ ಗ್ಯಾರಂಟಿ ಮಾದರಿಯನ್ನೇ ಅನುಸರಿಸಲು ಸಲಹೆ ಸಿಗುತ್ತದೆ. ಶ್ರೀಮಂತರಿಗೆ ಈ ಯೋಜನೆಗಳು ಬೇಕಿಲ್ಲದಿರಬಹುದು. ಆದರೆ ಬಡವರಿಗೆ ಇದು ಆಸರೆ” ಎಂದು ಪ್ರತಿಪಾಸಿದ್ದಾರೆ.




