ಹಿಂದಿನ ವರ್ಷಗಳ ಕಬ್ಬಿನ ಬಾಕಿ ಬಿಲ್ ಪಾವತಿ ಮಾಡಲು ಆಗ್ರಹಿಸಿ ಮತ್ತು ಪ್ರಸಕ್ತ ವರ್ಷ ಸರ್ಕಾರ ನಿಗದಿಪಡಿಸಿರುವ ಕಬ್ಬಿನ ದರವನ್ನು ವಿರೋಧಿಸಿ ಬಾಗಲಕೋಟೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.
ಮುಧೋಳದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ಗೆ ಕಿಡಿಗೇಡಿಗಳು ಬೆಂಕಿ ಹಂಚಿದ್ದಾರೆ. ಸುಮಾರು 20 ಟ್ರ್ಯಾಕ್ಟರ್ಗಳಿಗೆ ಬೆಂಕಿ ತಗುಲಿದೆ ಎನ್ನಲಾಗುತ್ತಿದೆ.
ಹಳೆಯ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಇಳುವರಿ ಆಧರಿಸಿ ಈ ವರ್ಷ ರಾಜ್ಯ ಸರ್ಕಾರ ನಿಗದಿಪಡಿಸಿರುವ ಬೆಲೆಗೆ ನಮ್ಮ ಒಪ್ಪಿಗೆಯಿಲ್ಲ. ಪ್ರತಿ ಟನ್ಗೆ ₹3,500 ನೀಡಬೇಕು ಹಾಗೂ 2024-25ನೇ ಸಾಲಿನ ಎರಡನೇ ಕಂತಿನ ಹಣ ಘೋಷಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆಯ ಮುಧೋಳ ಮತ್ತು ಜಮಖಂಡಿ ಭಾಗದ ರೈತರು ರಾಜ್ಯ ಹೆದ್ದಾರಿ ಮೇಲೆ ಮುಳ್ಳಿನ ಕಂಟಿಗಳನ್ನು ಹಾಕಿ ವಾಹನ ಸಂಚಾರ ತಡೆದು ಬುಧವಾರ ಪ್ರತಿಭಟನೆ ಮಾಡಿದ್ದರು.
ಪ್ರತಿಭಟನೆಗೆ ಕಿವಿಗೊಡದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ರೈತರು ಇಂದು ಕಬ್ಬು ತುಂಬಿದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಿಂತಿರುವ 100ಕ್ಕೂ ಟ್ರಾಲಿಗಳಿಗೆ ಬೆಂಕಿ ವ್ಯಾಪಿಸಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಬೆಂಕಿ ನಂದಿಸುವ ಕಾರ್ಯ ಅಗ್ನಿಶಾಮಕ ದಳ ಕಾರ್ಯನಿರತವಾಗಿದೆ.





