ಇಂದು (ಫೆ.೨೪) ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಕೊಡ ಮಾಡುವ ನಾಡೋಜ ಪ್ರಶಸ್ತಿಗೆ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಶತಾಯುಷಿ ಪ್ರೊ ಸಿ ಮಹದೇವಪ್ಪ, ಡಾ ಜಿ ರಾಮಕೃಷ್ಣ ಮತ್ತು ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಎಚ್ ಸಿ ಸತ್ಯನ್ ಅವರಿಗೆ ನಾಡೋಜ ಪ್ರಶಸ್ತಿ ನೀಡುವುದಾಗಿ ಕುಲಪತಿ ಪ್ರೊ ಡಿ ವಿ ಪರಮಶಿವಮೂರ್ತಿ ನಿನ್ನೆ ಪ್ರಕಟಿಸಿದ್ದಾರೆ. ಪಟ್ಟಿ ಹೊರಬರುತ್ತಿದ್ದಂತೆ ಸತ್ಯನ್ ಹೆಸರಿಗೆ ಆಕ್ಷೇಪ ವ್ಯಕ್ತವಾಗಿದೆ. “ಈ ಹೆಸರು ವಿವಿ ಕಳಿಸಿದ ಪಟ್ಟಿಯಲ್ಲಿ ಇರಲಿಲ್ಲ” ಎಂದು ʼಈ ದಿನ.ಕಾಮ್ʼ ಗೆ ಹಂಪಿ ಯುನಿವರ್ಸಿಟಿ ಸಿಂಡಿಕೇಟ್ ಸದಸ್ಯರೊಬ್ಬರು ತಿಳಿಸಿದ್ದಾರೆ. ವಿವಿಯಿಂದ ಹತ್ತು ಸಾಧಕರ ಪಟ್ಟಿ ಕಳಿಸಿಕೊಡಲಾಗಿದೆ. ಅದರಲ್ಲಿ ಇಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸತ್ಯನ್ ಹೆಸರು ರಾಜ್ಯಪಾಲರ ಆಯ್ಕೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ವಿವಿಗಳ ಪ್ರಶಸ್ತಿ, ಗೌರವ ಡಾಕ್ಟರೇಟ್, ನಾಡೋಜ ಸೇರಿದಂತೆ ಎಲ್ಲ ಪ್ರಶಸ್ತಿಗಳ ಪಟ್ಟಿ ರಾಜ್ಯಪಾಲರ ಕಚೇರಿಯಲ್ಲಿ ಫೈನಲ್ ಆಗುತ್ತದೆ. ವಿಶ್ವವಿದ್ಯಾಲಯದ ಸಿಂಡಿಕೇಟ್ನಲ್ಲಿ ಆಯ್ಕೆ ಮಾಡಿದ ಪಟ್ಟಿಯನ್ನು ರಾಜ್ಯಪಾಲರು ತಿರಸ್ಕರಿಸಬಹುದು ಅಥವಾ ಬೇರೆಯವರನ್ನು ಸೇರಿಸಬಹುದು ಎಂಬ ನಿಯಮವನ್ನು ರೂಪಿಸಿದೆ. ಆಯ್ಕೆ ಸಮಿತಿಯಲ್ಲಿ ಇರುವ ಮೂವರಲ್ಲಿ ಸಮಿತಿಯ ಅಧ್ಯಕ್ಷ ಮತ್ತು ಒಬ್ಬ ಸದಸ್ಯನನ್ನು ರಾಜ್ಯಪಾಲರೇ ಆಯ್ಕೆ ಮಾಡುತ್ತಾರೆ (ಬಹುತೇಕ ಉತ್ತರ ಭಾರತದವರೇ ಇರುತ್ತಾರೆ ಎಂಬ ಆರೋಪವಿದೆ). ಒಬ್ಬರು ವಿವಿಯ ನಾಮಿನೇಟೆಡ್ ಸದಸ್ಯರಿರುತ್ತಾರೆ. ಹಾಗಾಗಿ ಈ ಆಯ್ಕೆ ಸಂಪೂರ್ಣವಾಗಿ ರಾಜ್ಯಪಾಲರ ಹಿಡಿತದಲ್ಲಿರುತ್ತದೆ.
ಇದನ್ನೂ ಓದಿ ನಾಡೋಜ ಗೌರವ ತಿರಸ್ಕರಿಸಿದ ಹಿರಿಯ ಚಿಂತಕ ಜಿ ರಾಮಕೃಷ್ಣ; ಕಾರಣವೇನು?
ಸದ್ಯ ಸತ್ಯನ್ ಹೆಸರು ರಾಜ್ಯಪಾಲರ ಕಚೇರಿಯಲ್ಲಿ ಸೇರ್ಪಡೆಯಾಗಿದೆ. ಸತ್ಯನ್ ಅವರ ವಿರುದ್ದ ಮೈಸೂರು ಲೋಕಾಯುಕ್ತದಲ್ಲಿ ಒಂದು ಪ್ರಕರಣದ ತನಿಖೆ ನಡೆಯುತ್ತಿದೆ. ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮತ್ತೊಂದು ಪ್ರಕರಣ ಬಾಕಿ ಇದೆ ಎಂದು ತಿಳಿದು ಬಂದಿದೆ. ಅಲ್ಲದೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನಾಡೋಜ ಗೌರವ ಮೀಸಲು. ಆದರೆ, ರಾಜಕೀಯ ಪ್ರಭಾವದ ಕಾರಣದಿಂದ ಬಹಳ ವರ್ಷಗಳ ಹಿಂದೆಯೇ ದೂರದರ್ಶನದ ಅಧಿಕಾರಿ ಮಹೇಶ್ ಜೋಶಿ ಅವರಿಗೆ ನಾಡೋಜ ಪ್ರಶಸ್ತಿ ನೀಡಿದಾಗ ವಿವಾದ ಉಂಟಾಗಿತ್ತು. ಆ ನಂತರವೂ ಹಲವರು ಅನರ್ಹರಿಗೆ ನಾಡೋಜ ಗೌರವ ನೀಡಲಾಗಿದೆ.





