ಸರ್ಕಾರಿ ನೌಕರರಾದ ನಾಗರಾಜ್ ಮನ್ನೆ ಮತ್ತು ರಾಜೇಶ್ ಪದ್ಮಾರ್ ಅವರು ಬಹಿರಂಗವಾಗಿ ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ವರದಿಯಾಗಿದೆ.
ಫ್ಯಾಸಿಸ್ಟ್ ಸಮವಸ್ತ್ರ ಧರಿಸಿ ಆರ್ಎಸ್ಎಸ್ (RSS) ಪಥಸಂಚಲನದಲ್ಲಿ ಭಾಗಿಯಾಗಿದ್ದ ತಿಪಟೂರಿನ ವೈದ್ಯ ಶ್ರೀಧರ್ ಹೆಸರನ್ನು ಯಶಸ್ವಿನಿ ಟ್ರಸ್ಟ್ನಿಂದ ಸರ್ಕಾರ ತೆಗೆದು ಹಾಕಿದೆ. ಈ ಬೆಳವಣಿಗೆಯ ಬೆನ್ನಲ್ಲೇ, “ಸರ್ಕಾರದ ಅಧಿಕೃತ ನಿಯಮಗಳನ್ನು ಮೀರಿ ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸರ್ಕಾರಿ ನೌಕರರ ವಿರುದ್ಧವೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತದೆಯೇ?” ಎಂಬ ಪ್ರಶ್ನೆ ಎದ್ದಿದೆ.
ಅಕ್ಟೋಬರ್ 12ರಂದು ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದ ಪಥಸಂಚಲನದಲ್ಲಿ ರೋಡಲಬಂಡಾ ಗ್ರಾಮದ ಪಿಡಿಒ ಪ್ರವೀಣ್ ಕುಮಾರ್ ಭಾಗವಹಿಸಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿತ್ತು. ಸಂಘಪರಿವಾರದ ಸಖ್ಯದಲ್ಲಿರುವ ಸರ್ಕಾರಿ ನೌಕರರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳಾಗಿದ್ದವು.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ನಡೆದ ಆರ್ಎಸ್ಎಸ್ ಪಥಸಂಚಲನದಲ್ಲಿ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ನಾಗರಾಜ್ ಮನ್ನೆ ಭಾಗವಹಿಸಿರುವ ಫೋಟೋ ವೈರಲ್ ಆಗಿತ್ತು. ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ನಾಗರಾಜ್ ವಿರುದ್ಧ ಕ್ರಮ ಏಕಿಲ್ಲ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬಂದಿದ್ದವು.

ತಿಪಟೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ರಾಜೇಶ್ ಪದ್ಮಾರ್ ಅವರು ಬಹಿರಂಗವಾಗಿಯೇ ಆರ್ಎಸ್ಎಸ್ ಪ್ರಚಾರಕನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, “ವೃತ್ತಿಯಿಂದ ಉಪನ್ಯಾಸಕರು, ಸಾಮಾಜಿಕ ಕಾರ್ಯಕರ್ತ, ಆರ್ಎಸ್ಎಸ್” ಎಂದು ಬರೆದುಕೊಂಡಿದ್ದಾರೆ. ಆರ್ಎಸ್ಎಸ್ ಪಥಸಂಚಲನ ಮತ್ತು ಆರ್ಎಸ್ಎಸ್ ನಾಯಕರ ವಿಡಿಯೊ ತುಣುಕುಗಳನ್ನು ಮೊದಲಿನಿಂದಲೂ ರಾಜೇಶ್ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿರುವುದು ಮೇಲು ನೋಟಕ್ಕೆ ಕಾಣುತ್ತಿದೆ.


ನಿಯಮಗಳು ಏನು ಹೇಳುತ್ತವೆ?
ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು- 2021ರ ಪ್ರಕಾರ ಸರ್ಕಾರಿ ನೌಕರರಿಗೆ ಕೆಲವು ನಿರ್ಬಂಧಗಳಿವೆ. ಈ ನಿಯಮಗಳಡಿ ಬರುವ ‘ಸಾಮಾನ್ಯ ತತ್ವಗಳು’ ನೌಕರರು ಯಾವುದರಲ್ಲಿ ಭಾಗವಹಿಸಬಹುದು ಎಂದು ಹೇಳುತ್ತವೆ. ಸಾಮಾನ್ಯ ತತ್ವಗಳ ಸೆಕ್ಷನ್ 7, “ಯಾರೇ ಸರ್ಕಾರಿ ನೌಕರನು, ಯಾವ ಸಂಘ ಸಂಸ್ಥೆಯ ಉದ್ದೇಶಗಳು ಅಥವಾ ಚಟುವಟಿಕೆಗಳು ಭಾರತದ ಸಾರ್ವಭೌಮತ್ವದ ಮತ್ತು ಅಖಂಡತೆಯ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ಅಥವಾ ನೈತಿಕತೆಯ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುವವೋ ಆ ಸಂಘ ಸಂಸ್ಥೆಗೆ ಸೇರಿಕೊಳ್ಳತಕ್ಕದ್ದಲ್ಲ ಅಥವಾ ಅದರ ಸದಸ್ಯನಾಗಿ ಮುಂದುವರಿಯತಕ್ಕದ್ದಲ್ಲ” ಎನ್ನುತ್ತದೆ.
ಇದನ್ನೂ ಓದಿರಿ: ಸಂಘಪರಿವಾರ ಹೇಳುವ ‘ಸಾಮರಸ್ಯ’ ಕೇವಲ ಬೂಟಾಟಿಕೆ; ಆರ್ಎಸ್ಎಸ್ನಲ್ಲಿ ಜಾತಿ ನೋವುಂಡ ದಲಿತನ ಅನುಭವ ಕಥನ
ಸೆಕ್ಷನ್ 9, “ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯ, ದೇಶದ ಭದ್ರತೆಯ, ವಿದೇಶಿ ರಾಷ್ಟ್ರಗಳೊಂದಿಗಿನ ಸ್ನೇಹಯುತ ಸಂಬಂಧದ ಹಿತದೃಷ್ಟಿಗೆ, ಸಾರ್ವಜನಿಕ ಸುವ್ಯವಸ್ಥೆಗೆ, ಸಭ್ಯತೆಗೆ ಅಥವಾ ನೈತಿಕತೆಗೆ ಧಕ್ಕೆಯುಂಟು ಮಾಡುವ ಅಥವಾ ನ್ಯಾಯಾಲಯ ನಿಂದನೆಗೆ, ಮಾನಹಾನಿಗೆ ಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವುದನ್ನು ಒಳಗೊಂಡಿರುವ ಯಾವುದೇ ಪ್ರದರ್ಶನದಲ್ಲಿ ತನ್ನನ್ನು ತೊಡಗಿಸಿಕೊಳ್ಳತಕ್ಕದ್ದಲ್ಲ ಅಥವಾ ಭಾಗವಹಿಸತಕ್ಕದ್ದಲ್ಲ” ಎಂದು ಸೂಚಿಸಿದೆ.
ಇದೆಲ್ಲವನ್ನೂ ಮೀರಿ, ಸರ್ಕಾರಿ ನೌಕರರು ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬಂದಿದೆ. ಕೆಲವರ ವಿರುದ್ಧ ಕ್ರಮ ತೆಗೆದುಕೊಂಡರೂ ಮತ್ತೆ ಕೆಲವರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಈವರೆಗಿನ ಬೆಳವಣಿಗೆಗಳು ಸ್ಪಷ್ಟಪಡಿಸುತ್ತಿವೆ.
ಆರ್ಎಸ್ಎಸ್ನಲ್ಲಿ ತೊಡಗಿಸಿಕೊಂಡಿರುವ ಸರ್ಕಾರಿ ನೌಕರರ ಕುರಿತು ‘ಈದಿನ’ಕ್ಕೆ ಪ್ರತಿಕ್ರಿಯಿಸಿರುವ ಶಿಕ್ಷಣ ತಜ್ಞ ಬಿ.ಶ್ರೀಪಾದ ಭಟ್, “ಸರ್ಕಾರಿ ನೌಕರರು ಯಾವ ಸಂಘಟನೆಯಲ್ಲಿ ಗುರುತಿಸಿಕೊಳ್ಳುತ್ತಾರೆ ಮತ್ತು ಆ ಸಂಘಟನೆಯ ಹಿನ್ನಲೆ ಏನೆಂಬುದು ಮುಖ್ಯವಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
“ಆರ್ಎಸ್ಎಸ್ ನೋಂದಣಿಯಾಗಿಲ್ಲ. ಲೆಕ್ಕಪತ್ರವಿಲ್ಲ. ಮೂರು ಬಾರಿ ಬ್ಯಾನ್ ಆಗಿತ್ತು. ಗಾಂಧಿ ಹತ್ಯೆಯ ಆರೋಪವೂ ಆರ್ಎಸ್ಎಸ್ ಮೇಲಿದೆ. ಸಾಮಾಜಿಕ ನ್ಯಾಯ ಮತ್ತು ಸೆಕ್ಯಲರಿಸಂ ವಿರುದ್ಧ ಆರ್ಎಸ್ಎಸ್ ನಿಂತಿದೆ. ಇಂತಹ ಸಂಘಟನೆಯಲ್ಲಿ ಭಾಗಿಯಾಗುವುದು ನಿಯಮಬಾಹಿರ. ಈ ವಿಚಾರಗಳು ಸೋಷಿಯಲ್ ಮೀಡಿಯಾ ಮೂಲಕ ಸರ್ಕಾರಕ್ಕೆ ಗೊತ್ತಾಗಬೇಕಾ? ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲವಾ?” ಎಂದು ಪ್ರಶ್ನಿಸಿದ್ದಾರೆ.





