2018ರ ವಿಧಾನಸಭಾ ಚುನಾವಣೆಯ ನಂತರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ‘ಬಲವಂತದ ಮದುವೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬಣ್ಣಿಸಿದ್ದಾರೆ. ‘ಅದು ಪ್ರೀತಿಯಲ್ಲ, ಬಲವಂತದ ಮದುವೆ. ಆದ್ದರಿಂದಲೇ, ಆ ಸಂಬಂಧಕ್ಕೆ ವಿಚ್ಛೇದನ ನೀಡಬೇಕಾಯಿತು. ಅದಕ್ಕೆ ಸಾಕಷ್ಟು ಕಾರಣಗಳಿವೆʼ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ನಡೆದ ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, “ಗೌಡರು ಪ್ರೀತಿ ಮಾಡಿದ್ದು ನಮ್ಮನ್ನು (ಕಾಂಗ್ರೆಸ್). ಆದರೆ ಮದುವೆಯಾಗಿದ್ದು ಮಾತ್ರ ಮೋದಿಯವರನ್ನು (ಬಿಜೆಪಿ)” ಎಂದು ಕಿಚಾಯಿಸಿದ್ದರು.
ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡ, “ನನ್ನ ಆತ್ಮೀಯ ಸ್ನೇಹಿತ ಖರ್ಗೆಯವರಿಗೆ ನಾನು ಮದುವೆಯ ಭಾಷೆಯಲ್ಲೇ ಉತ್ತರಿಸುತ್ತೇನೆ. ಕಾಂಗ್ರೆಸ್ ಜೊತೆಗಿನದ್ದು ಪ್ರೀತಿಯಲ್ಲ, ಅದೊಂದು ಬಲವಂತದ ಮದುವೆಯಾಗಿತ್ತು. ಆ ಸಂಬಂಧದಲ್ಲಿ ಕೇವಲ ಕಿರುಕುಳ ಮತ್ತು ಹಿಂಸೆ ಇದ್ದ ಕಾರಣ ನಾನು ವಿಚ್ಛೇದನ ನೀಡಬೇಕಾಯಿತು” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: LPG ಹೊತ್ತು ಭಾರತಕ್ಕೆ ಬಂದ ‘ಶಿವಾಲಿಕ್’ ಹಡಗು; ತಣಿಯುವುದೇ ಕೊರತೆ-ಆತಂಕ?
“2018ರ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ಅವರು ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡಲು ಒತ್ತಾಯಿಸಿದ್ದರು. ಆದರೆ, ನಾನು ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡೋಣವೆಂದು ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಹೇಳಿದ್ದೆ. ಆದರೂ ಕಾಂಗ್ರೆಸ್ ಅದಕ್ಕೆ ಒಪ್ಪಲಿಲ್ಲ” ಎಂದು ಆರೋಪಿಸಿದ್ದಾರೆ.
“ಇಷ್ಟೆಲ್ಲಾ ಸಡಗರದ ಮದುವೆಯ ನಂತರ ಕಾಂಗ್ರೆಸ್ ನಮ್ಮನ್ನು ಕೈಬಿಟ್ಟಿತು. 2019ರಲ್ಲಿ ಮೈತ್ರಿ ಸರ್ಕಾರ ಪತನಗೊಳ್ಳಲು ಕಾಂಗ್ರೆಸ್ ನಾಯಕರೇ ಕಾರಣ. ಎಷ್ಟು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋದರು ಮತ್ತು ಅವರನ್ನು ಕಳುಹಿಸಿದವರು ಯಾರು ಎಂಬುದು ಜಗತ್ತಿಗೇ ಗೊತ್ತಿದೆ. ಅಂದು ಪಕ್ಷಾಂತರಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಂಡಿದ್ದರೆ, ಇಂದು ಖರ್ಗೆಯವರು ಇನ್ನೂ ಉತ್ತಮ ಸ್ಥಾನದಲ್ಲಿರುತ್ತಿದ್ದರು” ಎಂದು ಹೇಳಿದ್ದಾರೆ.




