ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ 1777 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನದಿಂದ ಕೈಬಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿ, ಮೂರು ತಿಂಗಳಾದರೂ ಅಧಿಕೃತ ಆದೇಶ ಹೊರಬಿದ್ದಿಲ್ಲ. ಈ ಸಂಬಂಧ ಇಲ್ಲಿನ ರೈತರಲ್ಲಿ ಆತಂಕ ಮನೆಮಾಡಿದ್ದು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರನ್ನು ಭೇಟಿಯಾಗಿ ತಮ್ಮ ಆಗ್ರಹವನ್ನು ಸಲ್ಲಿಸಿದ್ದಾರೆ. ರೈತರ ನಿಯೋಗಕ್ಕೆ ಸಚಿವರು ಮತ್ತೆ ಭರವಸೆ ನೀಡಿದ್ದು, ದೀಪಾವಳಿ ಬಳಿಕ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಸರ್ಕಾರದ ವಿಳಂಬ ನೀತಿಯಿಂದ ರೋಸಿಹೋಗಿರುವ ರೈತರು, ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು, ಇದರ ಭಾಗವಾಗಿ ಇಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ್ದರು ಮತ್ತು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದನ್ನೂ ಓದಿರಿ: ಚನ್ನರಾಯಪಟ್ಟಣ ರೈತರ ಮೇಲೆ ಮತ್ತೆ ಕೆಐಎಡಿಬಿ ಸವಾರಿ?
ಜುಲೈ 15ರಂದು ಮುಖ್ಯಮಂತ್ರಿಯವರು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಮೌಖಿಕವಾಗಿ ಸ್ಪಷ್ಟವಾಗಿ ಘೋಷಿಸಿದ್ದರು. ಆದರೆ ಈವರೆಗೂ ಮುಖ್ಯಮಂತ್ರಿಯವರ ಮಾತಿಗೆ ಅಧಿಕೃತ ಮುದ್ರೆ ದೊರೆತಿಲ್ಲ. ಈ ನಡುವೆ, ಸರ್ಕಾರದ ಘೋಷಣೆಗೆ ವಿರುದ್ಧವಾಗಿ ಎರಡು ಹಳ್ಳಿಗಳ ಜಮೀನುಗಳಿಗೆ ಬೆಲೆ ನಿಗದಿ ಸಭೆ ನಡೆಸುವ ಹುನ್ನಾರಗಳು ನಡೆದಿದ್ದು, ರೈತರ ಆತಂಕವನ್ನು ಇನ್ನಷ್ಟು ಹೆಚ್ಚಿಸಿವೆ.

ಇಂದು ಹರಳೂರು ಬಳಿಯ ಏರೋಸ್ಪೇಸ್ ಡಿಫೆನ್ಸ್ ಪಾರ್ಕ್ಗೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರನ್ನು ರೈತರ ನಿಯೋಗ ಭೇಟಿ ಮಾಡಿತು. ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೂ ಮಾತನಾಡಿತು. ಮುಖ್ಯಮಂತ್ರಿಯವರ ಹೇಳಿಕೆ ಸಂದರ್ಭದಲ್ಲಿ ಹಾಜರಿದ್ದ ಮುನಿಯಪ್ಪನವರೂ ಕ್ರಮವಹಿಸಬೇಕು ಎಂದು ನಿಯೋಗ ಆಗ್ರಹಿಸಿದೆ.
ದೀಪಾವಳಿ ನಂತರ ಆದೇಶ: ಸಚಿವ ಎಂ.ಬಿ.ಪಾಟೀಲ್ ಭರವಸೆ
ರೈತರ ನಿಯೋಗದೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲರು, “ಈ ಕುರಿತು ಈಗಾಗಲೇ ಸರ್ಕಾರದಲ್ಲಿ ಚರ್ಚೆಯಾಗಿದೆ. ದೀಪಾವಳಿ ಹಬ್ಬ ಮುಗಿದ ನಂತರ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವ ಆದೇಶ ಹೊರಡಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ. ಆದರೆ, ಅಧಿಕೃತ ಆದೇಶ ಹೊರಬೀಳುವವರೆಗೆ ತಮ್ಮ ಆತಂಕ ನಿವಾರಣೆಯಾಗುವುದು ಕಷ್ಟ ಎಂದು ಸಚಿವರಿಗೆ ತಿಳಿಸಿರುವ ರೈತರು, ಸಮಿತಿಯಲ್ಲಿ ಚರ್ಚಿಸಿ ತಮ್ಮ ಮುಂದಿನ ಹೋರಾಟದ ನಿರ್ಧಾರಕ್ಕೆ ಬರುವುದಾಗಿ ಹೇಳಿದ್ದಾರೆ.





