ಒಂದು ಬಾರಿ ಬಿಗ್ಬಾಸ್ ಶೋಗೆ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗುವವರೆಗೂ ಬೀಗ ತೆಗೆಯುವುದು ಸರಿಯಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಬಿಗ್ಬಾಸ್ ವಿಚಾರದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ನಡೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಬಿಗ್ಬಾಸ್ಗೆ ಬೀಗ ಹಾಕಿ ಮತ್ತೆ ತೆಗೆದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ವಿಷಯವನ್ನು ಮಾಧ್ಯಮಗಳ ಮೂಲಕ ನೋಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಬಿಗ್ಬಾಸ್ ನಿಯಮ ಮೀರಿದ್ದಾರೆ ಅಂತ ನೋಟಿಸ್ ಕೊಟ್ಟಿದ್ದರು. ಜಾಲಿಡೇಸ್ ಸಂಸ್ಥೆ ನೋಟಿಸ್ಗೂ ಉತ್ತರಿಸಿರಲಿಲ್ಲ ಎಂದು ಬೀಗ ಹಾಕಿದ್ದರು. ಈಗ ನಿನ್ನೆ ಡಿಕೆ ಶಿವಕುಮಾರ್ ಅನುಮತಿ ನೀಡಿ ಅಂತ ಹೇಳಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದೆ. ನನಗೆ ಇಷ್ಟೇ ಮಾಹಿತಿ ಗೊತ್ತಿರುವುದು. ನಾನು ಊರಲ್ಲಿ ಇರಲಿಲ್ಲ. ಇಷ್ಟೇ ಗೊತ್ತಿರೋದು ಅಂತ ತಿಳಿಸಿದರು.
ಇದನ್ನು ಓದಿದ್ದೀರಾ? ಬಿಗ್ ಬಾಸ್ | ಮನೆಯನ್ನು ತಕ್ಷಣವೇ ಬಂದ್ ಮಾಡಲು ನೋಟಿಸ್!
ಒಂದು ಸಾರಿ ನೋಟಿಸ್ ಕೊಟ್ಟ ಮೇಲೆ, ಮುಚ್ಚಿದ ಮೇಲೆ ಅದು ಸರಿಯಾಗುವವರೆಗೂ ತೆಗೆಯುವುದಕ್ಕೆ ಅವಕಾಶ ಕೊಡಬಾರದು. ನನಗೆ ಡಿಸಿ ಮಾಹಿತಿ ಕೊಡುವುದಕ್ಕೆ ನಾನು ಊರಲ್ಲಿ ಇರಲಿಲ್ಲ. ಮಾಲಿನ್ಯ ಮಂಡಳಿ ಸ್ವಾಯತ್ತ ಸಂಸ್ಥೆ. ಅದರ ಕೆಲಸ ಅದು ಮಾಡಿದೆ. ಏನಾಗಿದೆ ತಿಳಿದುಕೊಳ್ಳುತ್ತೇನೆ. ಈಗ ಏನ್ ಆಯ್ತು ಅಂತ ಡಿ ಕೆ ಶಿವಕುಮಾರ್ ಅವರನ್ನೇ ಕೇಳಿ ಎಂದರು.
ಪರಿಸರ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಬಂದ್ ಮಾಡಲಾಗಿತ್ತು. ಅಲ್ಲೇ ಇರುವ ಬಿಗ್ಬಾಸ್ ಮನೆಗೂ ಇದರ ಬಿಸಿ ತಟ್ಟಿತ್ತು. ರಾತ್ರೋರಾತ್ರಿ ಬಿಗ್ಬಾಸ್ ಸ್ಪರ್ಧಿಗಳನ್ನು ಮನೆಯಿಂದ ಹೊರಹಾಕಲಾಗಿತ್ತು. ಒಂದು ದಿನದ ಬೆಳವಣಿಗೆ ಬೆನ್ನಲ್ಲೇ, ಜಾಲಿವುಡ್ ಸ್ಟುಡಿಯೋಸ್ ಗೇಟ್ಗೆ ಹಾಕಿರುವ ಬೀಗ ತೆಗೆಯುವಂತೆ ಡಿಸಿಎಂ ಸೂಚನೆ ನೀಡಿದ್ದರು. ಈಗ ಜಾಲಿವುಡ್ ಸ್ಟುಡಿಯೋ ತೆರೆಯಲಾಗಿದ್ದು, ಸ್ಪರ್ಧಿಗಳು ಕೂಡ ಬಿಗ್ಬಾಸ್ ಮನೆಗೆ ವಾಪಸ್ ಆಗಿದ್ದಾರೆ.





