ಇರಾನ್- ಇಸ್ರೇಲ್, ಅಮೆರಿಕ ನಡುವೆ ಯುದ್ಧದ ಹಿನ್ನೆಲೆಯಲ್ಲಿ ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಅದೇ ರೀತಿ ಪ್ರತೀ ಕುಟುಂಬಕ್ಕೆ ತಿಂಗಳಿಗೆ ಒಂದೇ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಬುಧವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ಕುರಿತು ಕಾಂಗ್ರೆಸ್ ಸದಸ್ಯ ಡಾ.ರಂಗನಾಥ್ ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಡುಗೆ ಅನಿಲ ಸಿಲಿಂಡರ್ ದೊರೆಯುವುದಿಲ್ಲ ಎಂದು ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ಈಗಾಗಲೇ ಸಭೆ ನಡೆಸಲಾಗಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.
ತೈಲ ಸರಬರಾಜು ಕಂಪೆನಿಗಳಾದ ಎಚ್.ಪಿ., ಇಂಡಿಯನ್ ಆಯಿಲ್, ಶೇಲ್ ಸೇರಿದಂತೆ ಇತರ ಕಂಪೆನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಸಿಲಿಂಡರ್ ಸಮಸ್ಯೆಗೆ ಪರಿಹಾರ ಕಂಡು ಕಂಡುಕೊಳ್ಳಲಾಗಿದೆ. ಅದರಂತೆ, ಒಂದು ತಿಂಗಳಿಗೆ ಒಂದು ಕುಟುಂಬಕ್ಕೆ ಒಂದು ಸಿಲಿಂಡರ್ ಕೊಡಲು ತೀರ್ಮಾನ ಮಾಡಲಾಗಿದೆ ಎಂದು ಅವರು ಹೇಳಿದರು.
ಅದೇ ರೀತಿ, ವಾಣಿಜ್ಯ ಬಳಕೆ ಸಿಲಿಂಡರ್ ಗಳ ಮೇಲೆ ಕೊಂಚ ಮಟ್ಟಿಗೆ ನಿಯಂತ್ರಣ ಹೇರಲಾಗಿದ್ದು, ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಹಾಗೂ ಇತರ ಅನಗತ್ಯ ಬಳಕೆಗೆ ಕಡಿವಾಣ ಹಾಕಲಾಗಿದೆ. ಇದು ತಾತ್ಕಾಲಿಕ ನಿರ್ಬಂಧವೇ ಆಗಿದೆ ಎಂದು ಅವರು ತಿಳಿಸಿದರು.
ಇದನ್ನು ಓದಿದ್ದೀರಾ? ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್ಕೀಪರ್’ ಈಗ ಇರಾನ್ನ ಪರಮೋಚ್ಚ ನಾಯಕ
ಇಲ್ಲಿಯವರೆಗೂ ಎಲ್ಲೂ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಯಾವ ದೇಶದಿಂದಲೂ ಗ್ಯಾಸ್ ಸರಬರಾಜು ಆಗಿಲ್ಲವೆಂದರೂ, ನಾವು ಕನಿಷ್ಠ ಶೇಕಡಾವಾರು 20 ರಿಂದ 30ರಷ್ಟು ಸ್ವಂತವಾಗಿಯೇ ಅನಿಲ ಉತ್ಪಾದನೆ ಮಾಡಬಹುದು. ಈ ಪ್ರಮಾಣದಲ್ಲಿಯೇ ನಾವು ಅಡುಗೆ ಅನಿಲ ಗ್ಯಾಸ್ ಬಳಕೆ ಮಾಡಬಹುದಾಗಿದೆ. ಹೀಗಾಗಿ ಗ್ರಾಹಕರು ಆತಂಕಕ್ಕೆ ಒಳಗಾಗಿ ಮುಂಗಡವಾಗಿ ಕಾಯ್ದಿರಿಸುವಿಕೆ ಪ್ರಕ್ರಿಯೆ ಮಾಡಬಾರದು ಎಂದು ಸಚಿವರು ವಿವರಿಸಿದರು.
ಶೇಕಡಾ 70ರಷ್ಟು ಅನಿಲ ವಿದೇಶದಿಂದ ಬರಬೇಕು.ಆದರೆ, ಇರಾನ್ ಜಲ ಮಾರ್ಗದಲ್ಲಿ ತಡೆ ಹಾಕಿರುವ ಕಾರಣ ಸೂಕ್ತ ಸಮಯಕ್ಕೆ ಅನಿಲ ಮತ್ತು ಕಚ್ಚ ತೈಲವು ಭಾರತಕ್ಕೆ ಬರುತ್ತಿಲ್ಲ ಎಂದ ಅವರು, ಇದು ಯುದ್ಧದ ಸಮಯ. ಆದ ಕಾರಣ, ಗ್ಯಾಸ್ ವ್ಯರ್ಥ ಮಾಡಬೇಡಿ ಎಲ್ಲರು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಶೇಖರಣೆ ಮಾಡಿದರೆ ಪ್ರಕರಣ
ಗ್ಯಾಸ್ ಬೇಡಿಕೆ ಹೆಚ್ಚಿರುವ ನೆಪ ಇಟ್ಟುಕೊಂಡು ಅಕ್ರಮವಾಗಿ ಅಡುಗೆ ಅನಿಲ ಅಥವಾ ವಾಣಿಜ್ಯ ಬಳಕೆಯ ಸಿಲಿಂಡರ್ ಯಾರಾದರೂ ಅಕ್ರಮವಾಗಿ ದಾಸ್ತಾನು, ಶೇಖರಣೆ ಮಾಡಿದರೆ ಮುಲಾಜಿಲ್ಲದೆ, ಕಾನೂನು ರೀತ್ಯಾ ಕೇಸ್ ಹಾಕುತ್ತೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಾಕೀತು ಮಾಡಿದ್ದಾರೆ.
ಯಾರಿಗೆ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಲಭಿಸುತ್ತದೆ?
*ಶಾಲಾ ಕಾಲೇಜು
- ಆಸ್ಪತ್ರೆ
*ಸರಕಾರ ನಿಗದಿತ ಸ್ಥಳ ಅಥವಾ ತುರ್ತು ಸೇವೆ
ವಾಣಿಜ್ಯ ಬಳಕೆಗೆ ಗ್ಯಾಸ್ ಎಲ್ಲಿ ನಿಷೇಧ?
- ಹೋಟೆಲ್ ಮತ್ತು ರೆಸ್ಟೋರೆಂಟ್
- ಕಲ್ಯಾಣ ಮಂಟಪ
ವಾರಕ್ಕೊಮ್ಮೆ ಸಿಲಿಂಡರ್ ಕುರಿತು ಸಭೆ.!
ಸದ್ಯ ಸಿಲಿಂಡರ್ ಬಳಕೆ ಮಾರ್ಗ ಸೂಚಿ ಮತ್ತು ಇತರೆ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ವಾರಕ್ಕೊಮ್ಮೆ ಸಭೆ ನಡೆಸಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.





