“ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪಸರಿಸಿ ಮಾನವೀಯ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಲು ಯೋಜಿಸಲಾಗಿದೆ” ಎಂದು ಇಳಕಲ್ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ಇಂದು ಈದಿನ.ಕಾಮ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಮಾನವತಾ ಮೌಲ್ಯಗಳು, ವಿಚಾರಗಳೆಡೆ ಆಸಕ್ತಿ ಹುಟ್ಟುವಂತೆ ಭದ್ರ ಬುನಾದಿ ಹಾಕಿದರೆ, ಮುಂದೆ ಅದು ಬದಲಾಗುವುದಿಲ್ಲ. ಜೆ ಹೆಚ್ ಪಾಟೀಲರಂತ ಸಮಾಜವಾದಿ ಪರಿಕಲ್ಪನೆಗಳುಳ್ಳವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ತಮ್ಮ ವಿಚಾರಗಳನ್ನು ಬದಲಾಯಿಸಿಕೊಳ್ಳುವುದಿಲ್ಲ. ತಮ್ಮ ನಿಲುವಿನ ಸ್ಪಷ್ಟತೆ ಇರುತ್ತದೆ. ತಮ್ಮ ವಿಚಾರಧಾರೆಗಳ ಆಧಾರದ ಮೇಲೆಯೇ ಆಡಳಿತ ನಡೆಸುವಷ್ಟು ಬದ್ಧತೆ ಬಂದುಬಿಡುತ್ತದೆ. ಹಾಗಾಗಿ ಮಾನವೀಯ ಮೌಲ್ಯಗಳನ್ನೇ ಒಳಗೊಂಡಿರುವ ವಿಚಾರಧಾರೆಗಳನ್ನು ಬಿತ್ತುವ ಸಲುವಾಗಿ ನಾಡಿನ ಮಠಾಧೀಶರೆಲ್ಲ ಒಮ್ಮತದಿಂದ ವಚನ ವಿವಿಯನ್ನು ಸ್ಥಾಪಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ” ಎಂದರು.


“ಪ್ರಸ್ತುತ ಜಾತಿ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಸ್ಥಾನಮಾನ ಅಳೆಯುವ ಪ್ರವೃತ್ತಿ ಬೆಳೆದಿದೆ. ಯಾವುದೇ ಮೇಲ್ಪಂಕ್ತಿಯ ಹುದ್ದೆಗೆ ಆಯ್ಕೆ ಮಾಡುವಾಗ, ಅವನು ಮೇಲ್ವರ್ಗದವನಾ? ಎನ್ನುವುದು ಗಣನೆಗೆ ಬರುತ್ತದೆ. ಒಂದು ವೇಳೆ ಕೆಳವರ್ಗದವನಾದರೆ, ಜಾತಿಯಿಂದಲೇ ಅವನ್ನು ಹುದ್ದೆಗೆ ಅನರ್ಹಗೊಳಿಸಲಾಗುತ್ತದೆ. ಇದು ಸಮಾಜದಲ್ಲಿ ಬೇರೂರಿದೆ. ಜಾತಿಯಿಂದ ಒಬ್ಬ ವ್ಯಕ್ತಿಗೆ ಅವಕಾಶ ನೀಡಕೂಡದು, ಅವನ ಅರ್ಹತೆ ಮೇಲೆ ಅವನಿಗೆ ಅವಕಾಶ ಸಿಗಬೇಕು. ಜಾತಿ, ಮೌಢ್ಯತೆ ಇಲ್ಲದ ಸಮಾಜದ ನಿರ್ಮಾಣ ಮಾಡಬೇಕು. ಇದೇ ಬಸವಣ್ಣನವರ ಸಮಾನತೆಯ ಪರಿಕಲ್ಪನೆಯಾಗಿತ್ತು. ಅವರು ಮನಶುದ್ಧಿಗಾಗಿ ಧ್ಯಾನದ ಪರಿಕಲ್ಪನೆಯನ್ನು ಹಾಗೂ ನಮ್ಮಲ್ಲಿರುವ ಋಣಾತ್ಮಕ ಆಲೋಚನೆಗಳನ್ನು ಹೊರಗೆಡವಲು ಲಿಂಗದ ಪರಿಕಲ್ಪನೆಗಳನ್ನು ಪರಿಚಯಿಸಿದರು. ಇದರಿಂದ ಧನಾತ್ಮಕ ಆಲೋಚನೆಗಳು ಬೆಳೆದು, ಅದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತಿತ್ತು” ಎಂದು ಹೇಳಿದರು.
“ಸಮಾನತೆಯೊಂದಿಗೆ ದಾಸೋಹದ ವಿಚಾರವನ್ನೂ ಬಸವಣ್ಣ ತಿಳಿಸಿದ್ದರು. ಚಿಕ್ಕ ಮಕ್ಕಳು, ವೃದ್ಧರು, ದೈಹಿಕ-ಮಾನಸಿಕ ದುರ್ಬಲರು ಸೇರಿದಂತೆ ದುಡಿಯುವ ಶಕ್ತಿ ಇಲ್ಲದವರ ಜವಾಬ್ದಾರಿಯು ದುಡಿಯುವ ಸಾಮರ್ಥ್ಯ ಇರುವವರ ಮೇಲಿರುತ್ತದೆ. ಕಾಯಕ ಮಾಡಿ ಹಣ ಸಂಗ್ರಹ ಮಾಡಿಟ್ಟುಕೊಳ್ಳುವುದಕ್ಕಿಂತ ನಿರ್ಗತಿಕರಿಗೆ, ಅಸಹಾಯಕರಿಗೆ, ಅಗತ್ಯವಿರುವವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಈ ಅರಿವನ್ನೇ ದಾಸೋಹದ ಪರಿಕಲ್ಪನೆಯ ಮೂಲಕ ಸಮಾಜದಲ್ಲಿ ಬಿತ್ತಿದರು. ಈ ವಿಚಾರಧಾರೆಗಳಿಂದ ಸಮ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು. ಅದೇ ವಿಚಾರಗಳನ್ನು ಗೌತಮ ಬುದ್ಧ, ಅಂಬೇಡ್ಕರರು ಮುಂದುವರೆಸಿದರು. ಕಾಲಘಟ್ಟ, ಪ್ರದೇಶ ಬೇರೆಯಾದರೂ ಅವರ ವಿಚಾರಧಾರೆಗಳು ಒಂದೇ ಆಗಿದ್ದವು. ಇದೇ ಆಲೋಚನೆಗಳನ್ನು ಸರಿ ಎಂದು ಒಪ್ಪಿಕೊಂಡ ಲಕ್ಷಾಂತರ ಮಂದಿ ಬುದ್ಧ, ಬಸವ, ಅಂಬೇಡ್ಕರರ ಅನುಯಾಯಿಗಳು ಸಮಾಜದಲ್ಲಿದ್ದಾರೆ. ಇದು ಶುಭೋದಯ ಎನಿಸಿದರೂ ಮತ್ತಷ್ಟು ಬದಲಾವಣೆಗಳಾಗಬೇಕಿದೆ. ಮುಂದಿನ ಪೀಳಿಗೆಗೆ ಆ ವಿಚಾರಗಳನ್ನು ವರ್ಗಾಯಿಸುವ ಕೆಲಸವಾಗಬೇಕಿದೆ” ಎಂದರು.





