ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕಲ್ಲುತೂರಾಟ, ಪ್ರತಿಭಟನೆ ಮತ್ತು ಗಲಭೆಯ ಪ್ರಯತ್ನಗಳನ್ನು ಜಾಗೃತ ನಾಗರಿಕರು, ಕರ್ನಾಟಕ ಸಂಘಟನೆಯು ತೀವ್ರವಾಗಿ ಖಂಡಿಸಿದೆ. ಸಕ್ಕರೆಯ ನಾಡು ಎಂದು ಕರೆದಲ್ಪಡುವ ಕೃಷಿಮೂಲ ಸಂಸ್ಕೃತಿಯ ಮಂಡ್ಯ ಜಿಲ್ಲೆಯಲ್ಲಿ ಕೋಮುವಾದದ ಹುಚ್ಚುಗಳು ತಲೆ ಎತ್ತುತ್ತಿರುವುದು ಅತ್ಯಂತ ಕಳವಳಕಾರಿಯೆಂದು ಸಂಘಟನೆಯು ಆತಂಕ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರವು ಈ ರೀತಿಯ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಈ ಘಟನೆಯಲ್ಲಿ, ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಸಂಗೀತವನ್ನು ಬಳಸಿ ಪ್ರಚೋದನೆ ಮಾಡುವಂತೆ ಮಾಡಲಾಗಿದ್ದು, ಮಸೀದಿಯ ಮುಂದೆ ಮೆರವಣಿಗೆಯನ್ನು ನಿಲ್ಲಿಸಿ ಮಸೀದಿ ಕಡೆಯಿಂದ ಕಲ್ಲುತೂರಾಟ ನಡೆಸಲಾಗಿದೆ. ಇದರ ಜೊತೆಗೆ, ಅದೇ ಸಮಯದಲ್ಲಿ ವಿದ್ಯುತ್ ಕಡಿತವಾಗಿರುವುದು ಸಂಗತಿಯನ್ನು ಇನ್ನಷ್ಟು ಸಂದೇಹಾಸ್ಪದವಾಗಿಸಿದೆ. ಪ್ರತಿಬಂಧಕಾಜ್ಞೆ ಇದ್ದರೂ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕರೆಸಿ ಮೆರವಣಿಗೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಾಲ್ಗೊಂಡಿದ್ದು, ಇದು ಉದ್ದೇಶಪೂರ್ವಕ ಕೃತ್ಯವೆಂದು ಸಂಘಟನೆಯು ಆರೋಪಿಸಿದೆ.
ಈ ರೀತಿಯ ಘಟನೆಗಳು ರಾಜ್ಯದಾದ್ಯಂತ ಕೋಮುವಾದದ ವಿಷಾನಿಲವನ್ನು ಹರಡುವ ಅಪಾಯವನ್ನು ತಂದುಕೊಂಡಿವೆ. ಹಿಂದಿನ ಘಟನೆಗಳಾದ ನಾಗಮಂಗಲದ ಘರ್ಷಣೆ ಮತ್ತು ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಹೆಸರಿನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಂದ ಮುಸ್ಲಿಂ ಮಹಿಳೆಯರ ವಿರುದ್ಧದ ಅವಹೇಳನಕಾರಿ ಮಾತುಗಳು ಇದೇ ಮಾದರಿಯನ್ನು ಸೂಚಿಸುತ್ತವೆ. ಕರಾವಳಿಯಲ್ಲಿ ನಡೆದ ಪ್ರಯೋಗಗಳನ್ನು ಇತರ ಜಿಲ್ಲೆಗಳಲ್ಲಿ ಹಂಚುವ ಪ್ರಯತ್ನಗಳು ಆತಂಕಕ್ಕೆ ಕಾರಣವಾಗಿವೆ ಎಂದು ಸಂಘಟನೆಯು ಆರೋಪಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಹೇಳಿದ್ದನ್ನೆಲ್ಲ ಮೋದಿ ಮಾಡುತ್ತಿದ್ದಾರಲ್ಲ?
ಶ್ರಮ ಸಂಸ್ಕೃತಿಯ ಮಂಡ್ಯ ಜಿಲ್ಲೆಯನ್ನು ಕೋಮುವಾದಿಗಳು ಮತ್ತು ಮತೀಯವಾದಿಗಳ ಅಡಂಬೊಲ ಮಾಡದಂತೆ ಸ್ಥಳೀಯ ಜನತೆಯು ಎಚ್ಚರಿಕೆ ವಹಿಸಬೇಕೆಂದು ಸಂಘಟನೆಯು ಮಂಡ್ಯ ಜನತೆಯನ್ನು ಎಚ್ಚರಿಸಿದೆ. ರಾಜ್ಯದ ಸಾಮರಸ್ಯ ಪರಂಪರೆಯನ್ನು ಕಾಪಾಡಲು ಸರ್ಕಾರವು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಜಾಗೃತ ನಾಗರಿಕರು, ಕರ್ನಾಟಕ ಸಂಘಟನೆಯ ಸದಸ್ಯರು ಹಾಗೂ ವಿವಿಧ ಕ್ಷೇತ್ರದ ಗಣ್ಯರಾದ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಕೆ.ಎಸ್.ವಿಮಲಾ, ಟಿ.ಸುರೇಂದ್ರ ರಾವ್, ಬಿ.ಶ್ರೀಪಾದ ಭಟ್, ಡಾ.ವಸುಂಧರಾ ಭೂಪತಿ, ರುದ್ರಪ್ಪ ಹನಗವಾಡಿ, ಜಾಣಗೆರೆ ವೆಂಕಟರಾಮಯ್ಯ, ಇಂದಿರಾ ಕೃಷ್ಣಪ್ಪ, ಡಾ.ಮೀನಾಕ್ಷಿ ಬಾಳಿ, ಎನ್. ಕೆ.ವಸಂತ್ ರಾಜ್, ವಾಸುದೇವ ಉಚ್ಚಿಲ ಮತ್ತು ಡಾ.ಎನ್.ಗಾಯತ್ರಿ ಅವರು ಸಹಿ ಹಾಕಿದ್ದಾರೆ.





