ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ‘ರಾಜ್ಯ ಶಿಕ್ಷಣ ನೀತಿ’ (SEP) ವರದಿಯನ್ನು ಕೂಡಲೇ ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಿ, ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಹಾಗೂ ಮುಂಬರುವ ಬಜೆಟ್ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಬೇಕು ಎಂದು ಶಿಕ್ಷಣ ತಜ್ಞರು ಹಾಗೂ ಚಿಂತಕರು ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ನೀತಿ ನಿರೂಪಣೆಗಾಗಿ ಸಂಶೋಧನಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಇಂದು (ಫೆ. 28) ಏರ್ಪಡಿಸಿದ್ದ ‘ಕರ್ನಾಟಕ ಶಾಲಾ ಶಿಕ್ಷಣದ ಸ್ಥಿತಿಗತಿ’ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಈ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ವಿಚಾರ ಸಂಕಿರಣದ ಪ್ರಮುಖ ನಿರ್ಣಯಗಳು:
ವ್ಯಕ್ತಿಗತ ನೆಲೆಗೆ ಬರದೇ ಸಾಮುದಾಯಿಕವಾಗಿರಲಿ: ಸಮಗ್ರ ನೀತಿಯೊಂದರ ಕೊರತೆಯಿಂದಾಗಿ ಶಿಕ್ಷಣ ಕ್ಷೇತ್ರದ ಕಾರ್ಯಕ್ರಮಗಳು, ತೀರ್ಮಾನಗಳು ಪ್ರಜಾಪ್ರಭುತ್ವದ ಆಶಯಗಳ ಬದಲಾಗಿ ವ್ಯಕ್ತಿ ಹಾಗೂ ಅಧಿಕಾರಶಾಹಿ ನೆಲೆಯಲ್ಲಿ ರೂಪಗೊಳ್ಳುತ್ತಿರುವುದು ಆತಂಕಕಾರಿ. ಶಿಕ್ಷಣ ನೀತಿಯೆಂದರೆ ಕೇವಲ ಶಿಕ್ಷಣವಷ್ಟೇ ಅಲ್ಲ, ಅದು ನಾಡು, ನುಡಿ, ಆರ್ಥಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿರುತ್ತದೆ.
ವರದಿ ಬಿಡುಗಡೆಗೆ ವಿಳಂಬವೇಕೆ?: ರಾಜ್ಯ ಸರ್ಕಾರ ರಚಿಸಿದ್ದ ‘ರಾಜ್ಯ ಶಿಕ್ಷಣ ನೀತಿ ಆಯೋಗ’ವು ಸಿದ್ಧಪಡಿಸಿದ ವರದಿಯನ್ನು ಕಳೆದ ವರ್ಷವೇ (08.08.2025 ರಂದು) ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಆದರೆ, ಈ ಮಹತ್ವದ ನೀತಿಯನ್ನು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡದಿರುವುದು ಸರಿಯಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ನಾಗರಿಕರಿಗೆ ನೀತಿಯ ಆಶಯ ಮತ್ತು ಶಿಫಾರಸುಗಳನ್ನು ತಿಳಿದುಕೊಳ್ಳುವ ಹಕ್ಕಿದೆ.
ಎನ್.ಇ.ಪಿ (NEP 2020) ಯಂತಾಗದಿರಲಿ: ರಾಷ್ಟ್ರೀಯ ಶಿಕ್ಷಣ ನೀತಿಯ (2020) ಅನುಷ್ಠಾನದ ಸಂದರ್ಭದಲ್ಲಿ ಆದಂತೆ ಅವಸರ ಹಾಗೂ ಏಕಪಕ್ಷೀಯ ನಿರ್ಧಾರಗಳು ರಾಜ್ಯ ಶಿಕ್ಷಣ ನೀತಿಯ ವಿಚಾರದಲ್ಲಿ ಮರುಕಳಿಸಬಾರದು. ಯಾವುದೇ ಶಿಕ್ಷಣ ನೀತಿ ಕೇವಲ ತಜ್ಞರ ವರದಿಯಾಗದೆ ನಾಡಿನ ಚಿಂತನೆಯ ಭಾಗವಾಗಬೇಕು.
ಇದನ್ನು ಓದಿದ್ದೀರಾ? ಅಸ್ಸಾಂ ಮಹಾಸಮರ | ಕಾಂಗ್ರೆಸ್ಗೆ ಮತ್ತೆ ವೈಭವದ ದಿನಗಳು ಬರಲಿವೆಯೇ?
ಬಜೆಟ್ನಲ್ಲಿ ಘೋಷಣೆಯಾಗಲಿ: ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಿದ ನಂತರ, ಉಭಯ ಸದನಗಳಲ್ಲಿ ಮಂಡಿಸಿ ಪಕ್ಷಾತೀತವಾಗಿ ಅಂಗೀಕರಿಸಬೇಕು. ಇದರ ಮೊದಲ ಹೆಜ್ಜೆಯಾಗಿ, ಇದೇ ಮಾರ್ಚ್ 6ರಂದು ಮುಖ್ಯಮಂತ್ರಿಗಳು ಮಂಡಿಸಲಿರುವ ರಾಜ್ಯ ಬಜೆಟ್ ಭಾಷಣದಲ್ಲಿ ಈ ವಿಷಯವನ್ನು ಘೋಷಿಸಬೇಕು ಎಂದು ಒತ್ತಾಯಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಸಂವಿಧಾನದ ನೆಲೆಯಲ್ಲಿ ತಿರಸ್ಕರಿಸಿದ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ರಾಜ್ಯದ ಸ್ವಂತ ಶಿಕ್ಷಣ ನೀತಿಯ (SEP) ಸ್ವರೂಪ ಹೇಗಿರಲಿದೆ ಎಂಬುದನ್ನು ಇಡೀ ರಾಷ್ಟ್ರವೇ ಕಾತುರದಿಂದ ಗಮನಿಸುತ್ತಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ನಿರ್ಣಯಕ್ಕೆ ಸಹಿ ಹಾಕಿದ ಪ್ರಮುಖರು:
ಪ್ರೊ. ಪುರುಷೋತ್ತಮ ಬಿಳಿಮಲೆ, ಪ್ರೊ. ರಾಜೇಂದ್ರ ಚೆನ್ನಿ, ಪ್ರೊ. ಸಬೀಹ ಭೂಮಿಗೌಡ, ಡಾ. ಜಿ. ರಾಮಕೃಷ್ಣ, ಡಾ. ನಿರಂಜನಾರಾಧ್ಯ ವಿ.ಪಿ., ಪ್ರೊ. ಚಂದ್ರಶೇಖರ್ ಟಿ.ಆರ್., ಬಸವರಾಜ ಗುರಿಕಾರ, ಗುರುಪ್ರಸಾದ್ ಕೆರಗೋಡು, ಆನಂದ ಬನವಾಸಿ, ತಿರುಮಲ ರಾವ್ ಸಿ.ವಿ., ಲೋಕೇಶ್ ತಾಳೀಕಟ್ಟೆ, ಯೋಗಾನಂದ ಬಿ.ಎನ್., ಕವಿರಾಜ್, ಶಿವಪ್ಪ ಎನ್ ಅಂಬ್ಲಿಕರ್, ಅಜಯ್ ವಿ ಕಾಮತ್, ವೀಣಾ ಎಲ್ ವೈ, ಲೇಖಾ ಅಡವಿ, ಉಮೇಶ್ ಗಂಗವಾಡಿ, ಶ್ರೀನಿವಾಸಲು, ಮತ್ತು ಜ್ಯೋತಿ ಶೆಟ್ಟಿ.





