ಕೇಂದ್ರ ಸರ್ಕಾರದಿಂದ ‘ರಾಜಭವನ’ಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ಪ್ರಯತ್ನವನ್ನು ಜಾಗೃತ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಈ ಕ್ರಮವು ಹಿಂದಿಯ ಪರೋಕ್ಷ ಹೇರಿಕೆಯಾಗಿದ್ದು, ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲೆ ಆಕ್ರಮಣವೆಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಮರುನಾಮಕರಣವು ಕೇವಲ ಸಾಂಕೇತಿಕ ಅಥವಾ ಆಡಳಿತಾತ್ಮಕ ಬದಲಾವಣೆಯಲ್ಲ. ‘ಅಧಿಕೃತ ಸಾರ್ವಜನಿಕ ವಲಯದಲ್ಲಿ, ವಿಶೇಷವಾಗಿ ಹಿಂದಿ ಆಡಳಿತ ಭಾಷೆಯಲ್ಲದ ರಾಜ್ಯಗಳಲ್ಲಿ ಹಿಂದಿಯ ಪರೋಕ್ಷ ಹೇರಿಕೆಯಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದೆ’ ಎಂದು ಜಾಗೃತ ಕರ್ನಾಟಕ ತಿಳಿಸಿದೆ.
ಸಂವಿಧಾನದ 343ನೇ ವಿಧಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ವ್ಯವಹಾರಿಕ ಭಾಷೆಗಳನ್ನಾಗಿ ಗುರುತಿಸಲಾಗಿದ್ದರೂ, 345ನೇ ವಿಧಿ ಮತ್ತು 346ನೇ ವಿಧಿ ರಾಜ್ಯಗಳಿಗೆ ಭಾಷಾ ವಿಚಾರದಲ್ಲಿ ಸ್ವಾಯತ್ತತೆ ನೀಡಿವೆ ಎಂದು ಸಂಘಟನೆ ನೆನಪಿಸಿದೆ. ‘‘ಈ ಸಮತೋಲನವೇ ಭಾರತದ ಒಕ್ಕೂಟ ವ್ಯವಸ್ಥೆಯ ಮೂಲಾಧಾರ’’. ಈ ಮರುನಾಮಕರಣ ಮಾತ್ರ ಪ್ರತ್ಯೇಕ ಘಟನೆಯಲ್ಲ. ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಶಾಸನಾತ್ಮಕ ಶೀರ್ಷಿಕೆಗಳನ್ನು ಹಿಂದಿ ಪದಗಳಿಂದ ಬದಲಾಯಿಸುವುದು, ಪ್ರಮುಖ ಕಾನೂನುಗಳನ್ನು ಹಿಂದಿ ಶೀರ್ಷಿಕೆಗಳೊಂದಿಗೆ ಜಾರಿಗೆ ತರುವುದು, ಅಧಿಕೃತ ಪತ್ರವ್ಯವಹಾರಗಳಲ್ಲಿ ಹಿಂದಿಗೆ ಹೆಚ್ಚಿನ ಆದ್ಯತೆ ನೀಡುವುದು – ಇವೆಲ್ಲವೂ ಭಾಷಾ ಸಮಾನತೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಸಂಘಟನೆ ಕಿಡಿಕಾರಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ| ₹100 ತೆರಿಗೆಯಲ್ಲಿ ₹5 ಕೂಡ ವಾಪಸು ಸಿಗ್ತಿಲ್ಲ; ರಾಜ್ಯಕ್ಕೆ ಮೋದಿ ಮುಂದುವರೆಸಿದ ಅಗಾಧ ಅನ್ಯಾಯ!
ಅಲ್ಲದೇ ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ‘ರಾಜಭವನ’ವನ್ನು ‘ರಾಜ್ಯಭವನ’ ಎಂದು ಮರುನಾಮಕರಣ ಮಾಡುವಂತೆ ಜಾಗೃತ ಕರ್ನಾಟಕವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯಪಾಲರ ನಿವಾಸ ಮತ್ತು ಕಚೇರಿ ಸಂಕೀರ್ಣವು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿದ್ದು, ಅದರ ನಿರ್ವಹಣೆ ಮತ್ತು ವೆಚ್ಚವನ್ನು ರಾಜ್ಯವೇ ಭರಿಸುತ್ತದೆ. ಆದ್ದರಿಂದ ಅದರ ಹೆಸರು ರಾಜ್ಯದ ಭಾಷೆ ಮತ್ತು ಗುರುತನ್ನು ಪ್ರತಿಬಿಂಬಿಸಬೇಕು ಎಂದು ಜಾಗೃತ ಕರ್ನಾಟಕ ಮನದಟ್ಟು ಮಾಡಿದೆ.
ಕೇಂದ್ರದ ಏಕರೂಪ ಹಿಂದಿ ನಾಮಕರಣಕ್ಕೆ ವಿರೋಧವೇ ಆಕ್ಷೇಪದ ಮೂಲ ಎಂದು ತಿಳಿಸಿರುವ ಸಂಘಟನೆ, ರಾಜ್ಯಗಳು ತಮ್ಮ ಭಾಷೆಯಲ್ಲಿ ಸೂಕ್ತ ಹೆಸರನ್ನು ಆಯ್ಕೆ ಮಾಡುವ ಸಾಂವಿಧಾನಿಕ ಹಕ್ಕನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ ಸರ್ಕಾರಗಗಳು ‘ರಾಜಭವನ’ವನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ಯಾವುದೇ ಕ್ರಮವನ್ನು ತಡೆಯಬೇಕು ಹಾಗೂ ಮರುನಾಮಕರಣ ಅಗತ್ಯವಿದ್ದರೆ ರಾಜ್ಯ ಭಾಷೆಯಲ್ಲಿ ಸೂಕ್ತ ಹೆಸರನ್ನು ಆಯ್ಕೆ ಮಾಡಬೇಕು. ಭಾಷಾ ಹೇರಿಕೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರಕ್ಕೆ ಅಧಿಕೃತ ಆಕ್ಷೇಪಣೆ ಸಲ್ಲಿಸಬೇಕು ಎಂದು ಜಾಗೃತ ಕರ್ನಾಟಕ ಮನವಿ ಮಾಡಿದೆ.
ಹಾಗೆಯೇ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಜಾಗೃತ ಕರ್ನಾಟಕ ಪತ್ರವನ್ನು ಕೂಡ ಬರೆದಿದೆ.
‘‘ಭಾರತದ ಐಕ್ಯತೆ ಏಕರೂಪತೆಯಲ್ಲಿ ಅಲ್ಲ, ಬಹುತ್ವದಲ್ಲಿ ನೆಲೆಸಿದೆ. ಭಾಷಾ ಬಹುತ್ವವನ್ನು ರಕ್ಷಿಸುವುದೇ ಸಂವಿಧಾನದ ಆಶಯವನ್ನು ನಿಜವಾಗಿ ಎತ್ತಿಹಿಡಿಯುವುದು’’ ಎಂದು ಜಾಗೃತ ಕರ್ನಾಟಕ ತಿಳಿಸಿದೆ.





