ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವುದನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.
‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್ ತೀರ್ಪು ಒಂದು ಮುಖ್ಯವಾದ ವಿಚಾರವನ್ನು ಗಮನಿಸಿಲ್ಲ. ಒಂದು ರಾಜ್ಯದ ಚುನಾಯಿತ ವಿಧಾನಸಭೆಯನ್ನು ರದ್ದುಪಡಿಸಿ ರಾಜ್ಯಪಾಲರ ಆಡಳಿತವನ್ನು ತರಲಾಯಿತು. ರಾಜ್ಯಪಾಲರ ಆಡಳಿತ ಇದ್ದಾಗ ಒಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದರು. ಈ ರೀತಿಯ ಕ್ರಮವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿರುವುದು ನಮ್ಮ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ” ಎಂದು ಎಚ್ಚರಿಸಿದರು.
“ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿರುವ ಸ್ಥಿತಿ ಮುಂದೊಂದು ದಿನ ಕರ್ನಾಟಕ ಅಥವಾ ಬೇರೆ ಯಾವುದೇ ರಾಜ್ಯಕ್ಕೂ ಬರಬಹುದು. ಇಲ್ಲಿನ ಚುನಾಯಿತ ಸರ್ಕಾರವನ್ನು ರದ್ದುಪಡಿಸಿ ರಾಜ್ಯಪಾಲರ ಆಡಳಿತ ತಂದು ರಾಜ್ಯಪಾಲರ ಒಪ್ಪಿಗೆ ಪಡೆದು ಕರ್ನಾಟಕವನ್ನೂ ಎರಡು ವಿಭಾಗ ಮಾಡಬಹುದು. ಆಗ ಇಲ್ಲಿನ ಜನರ ಆಯ್ಕೆಗೆ ಕಿಮ್ಮತ್ತೇ ಇಲ್ಲವಾಗುತ್ತದೆ” ಎಂದು ಎಚ್ಚರಿಸಿದರು.
“ಇಲ್ಲಿನ ಚುನಾಯಿತ ಪ್ರತಿನಿಧಿಗಳ ಗೈರು ಹಾಜರಿಯಲ್ಲಿ ವಿಭಾಗ ನಡೆಯುತ್ತದೆ. ಜನರ ಅಭಿಪ್ರಾಯ ಏನು ಎಂಬುದಕ್ಕೆ ಅವಕಾಶವೇ ಇಲ್ಲದಂತೆ ಆಗುತ್ತದೆ. ಹೀಗೆ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ಮುಂದೆ ಎಲ್ಲಾ ರಾಜ್ಯಗಳ ಮೇಲೂ ಬಳಸಬಹುದು” ಎಂದು ತಿಳಿಸಿದರು.
“ಸುಪ್ರೀಂ ಕೋರ್ಟ್ ಈ ಸಮಸ್ಯೆಯನ್ನು ಗಮನಿಸದೆ 370ನೇ ವಿಧಿಯ ರದ್ಧತಿಯನ್ನು ಎತ್ತಿ ಹಿಡಿದಿರುವುದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕು. ಯಾವುದೇ ಪೀಠದ ತೀರ್ಪನ್ನು ಪುನರ್ ಪರಿಶೀಲನೆ ಮಾಡಲು ಅವಕಾಶವಿದೆ. ಕ್ಯೂರೇಟಿವ್ ಪಿಟೆಷನ್ಗೂ ಅವಕಾಶವಿದೆ. ಅದೂ ಆಗಲಿಲ್ಲವೆಂದರೆ ಇನ್ಯಾವುದೋ ತೀರ್ಪಿನ್ನೂ ರೀವಿಸಿಟ್ ಮಾಡಬಹುದು” ಎಂದು ಹೇಳಿದರು.





