2023ರಿಂದೀಚೆಗೆ ರಾಜ್ಯ ಸರ್ಕಾರದ ಅಧಿಕಾರಗಳು ಒಟ್ಟು 95 ವಿದೇಶಿ ಪ್ರವಾಸಗಳಿಗೆ ತೆರಳಿದ್ದಾರೆ. ಈ ಪ್ರವಾಸಗಳ ಪೈಕಿ 58 ಪ್ರವಾಸಗಳಿಗೆ ಸರ್ಕಾರವೇ ಹಣ ಭರಿಸಿದೆ.20 ಕೋಟಿ ರೂ.ಗಳಿಗೂ ಅಧಿಕ ಖರ್ಚು ಮಾಡಿದೆ ಎಂಬುದು ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿ ‘ಆಯವ್ಯಯ’ದಿಂದ ಗೊತ್ತಾಗಿದೆ.
ಅಧಿಕಾರಿಗಳ 58 ವಿದೇಶಿ ಪ್ರವಾಸಗಳಿಗಾಗಿ ಸರ್ಕಾರವು ಒಟ್ಟು 20.28 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಅಂದರೆ, ಸರಾಸರಿ ಪ್ರತಿ ಪ್ರವಾಸಕ್ಕೆ 21.35 ಲಕ್ಷ ರೂಪಾಯಿ ಖರ್ಚಾಗಿದೆ. ಉಳಿದ ಪ್ರವಾಸಗಳಿಗೆ ಸರ್ಕಾರವು ತೆರಿಗೆದಾರರ ಹಣವನ್ನು ಬಳಸಿಲ್ಲ ಎಂಬುದು ಕಂಡುಬಂದಿದೆ..
ಹಲವು ಅಧಿಕಾರಿಗಳು ವಿದೇಶ ಪ್ರವಾಸ ಮುಗಿಸಿ ಬಂದ ನಂತರವೂ ‘ಅಧ್ಯಯನ ವರದಿ’ಗಳನ್ನು ಸಲ್ಲಿಸದಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು 2025ರ ಸೆಪ್ಟೆಂಬರ್ನಲ್ಲಿ ಅಧಿಕಾರಿಗಳ ಎಲ್ಲ ಅಧಿಕೃತ ವಿದೇಶಿ ಪ್ರವಾಸಗಳನ್ನು ನಿಷೇಧಿಸಿದೆ ಎಂಬುದು ಗಮನ ಸೆಳೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧೀನದಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ಹೊರಡಿಸಿದ ಸುತ್ತೋಲೆಯಲ್ಲಿ, ಮುಂದಿನ ಆದೇಶದವರೆಗೆ 2025ರಲ್ಲಿ ಯಾವುದೇ ಅಧಿಕೃತ ವಿದೇಶಿ ಪ್ರವಾಸಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. 2024ರ ಆಗಸ್ಟ್ ಮತ್ತು 2025ರ ಜುಲೈ ನಡುವೆ ವಿದೇಶಿ ಪ್ರವಾಸಕ್ಕೆ ತೆರಳಿದ್ದ ಅಧಿಕಾರಿಗಳು ತಮ್ಮ ಅಧ್ಯಯನ ವರದಿಗಳನ್ನು ಸಲ್ಲಿಸಿಲ್ಲ ಎಂದು ಸುತ್ತೋಲೆಯಲ್ಲಿ ಬೆಟ್ಟು ಮಾಡಲಾಗಿತ್ತು.
2023ರಲ್ಲಿ ಸರ್ಕಾರಿ ಖಜಾನೆಯಿಂದ ಹಣ ಭರಿಸಲಾದ ಮೊದಲ ವಿದೇಶಿ ಪ್ರವಾಸವು 5 ಲಕ್ಷ ರೂಪಾಯಿ ವೆಚ್ಚದ್ದಾಗಿತ್ತು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ರೋಡ್ಶೋಗಳಿಗಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ (ಈಗ ನಿವೃತ್ತರು) ಅವರು ಮನಿಲಾ (ಇಟಲಿ), ಪ್ಯಾರಿಸ್ (ಫ್ರಾನ್ಸ್) ಹಾಗೂ ಮ್ಯಾಡ್ರಿಡ್ (ಸ್ಪೇನ್) ನಗರಗಳಿಗೆ 6 ದಿನಗಳ ಪ್ರವಾಸ ಕೈಗೊಂಡಿದ್ದರು.
ಅದೇ ವರ್ಷದಲ್ಲಿ, ಹೂಡಿಕೆ ಉತ್ತೇಜನಕ್ಕಾಗಿ ಅಮೆರಿಕಾಕ್ಕೆ (USA) 11 ದಿನಗಳ ಕಾಲ ಭೇಟಿ ನೀಡಿದ್ದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತ ಗುಂಜನ್ ಕೃಷ್ಣ ಹಾಗೂ ಕಾರ್ಯದರ್ಶಿ (ಐಟಿ/ಬಿಟಿ) ಏಕ್ರೂಪ್ ಕೌರ್ ಅವರ ಪ್ರವಾಸಕ್ಕೆ ಸರ್ಕಾರವು 2.2 ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು.
ಇದುವರೆಗಿನ ಅತ್ಯಂತ ದುಬಾರಿ ಪ್ರವಾಸವು 2024ರಲ್ಲಿ ನಡೆದಿತ್ತು. ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆದ ‘World Economic Forum’ನಲ್ಲಿ ಭಾಗವಹಿಸಿದ ಅಧಿಕೃತ ನಿಯೋಗಕ್ಕಾಗಿ ಸರ್ಕಾರ 4.7 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಈ ನಿಯೋಗದಲ್ಲಿ ಮುಖ್ಯಮಂತ್ರಿಗಳ ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಸೆಲ್ವಕುಮಾರ್, ಕೌರ್, ಗುಂಜನ್ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (KIADB) ಮುಖ್ಯ ಕಾರ್ಯನಿರ್ವಾಹಕ ಡಾ. ಮಹೇಶ್ ಇದ್ದರು.
ಮಾರ್ಚ್ 2025ರಲ್ಲಿ, ಪ್ರವಾಸೋದ್ಯಮ ಇಲಾಖೆಯು ರಷ್ಯಾ ಪ್ರವಾಸಕ್ಕಾಗಿ 81.5 ಲಕ್ಷ ರೂಪಾಯಿಗಳನ್ನು ವ್ಯಯಿಸಿದೆ. ಅಂದಿನ ಪ್ರವಾಸೋದ್ಯಮ ಕಾರ್ಯದರ್ಶಿ ಸಲ್ಮಾ ಫಹೀಮ್ ನೇತೃತ್ವದ ನಿಯೋಗವು ಮಾಸ್ಕೋ ಅಂತರಾಷ್ಟ್ರೀಯ ಪ್ರವಾಸ ಮತ್ತು ಪ್ರವಾಸೋದ್ಯಮ ಪ್ರದರ್ಶನದಲ್ಲಿ ಪಾಲ್ಗೊಳ್ಳಲು 4 ದಿನಗಳ ಕಾಲ ಅಲ್ಲಿಗೆ ತೆರಳಿತ್ತು.
ಫೆಬ್ರವರಿ 2026ರಲ್ಲಿ, ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಗಿರೀಶ್ ಆರ್ ಅವರು ‘ಫ್ರೂಟ್ ಲಾಜಿಸ್ಟಿಕಾ’ದಲ್ಲಿ ಭಾಗವಹಿಸಲು ಎಂಟು ದಿನಗಳ ಕಾಲ ಜರ್ಮನಿ ಮತ್ತು ಯುಕೆ ಪ್ರವಾಸ ಕೈಗೊಂಡಿದ್ದರು. ಇದಕ್ಕೆ 15 ಲಕ್ಷ ರೂಪಾಯಿ ವೆಚ್ಚವಾಗಿತ್ತು.
ಸಿದ್ದರಾಮಯ್ಯ ಅವರು ಮಂಡಿಸಿದ ಮಾಹಿತಿಯ ಪ್ರಕಾರ, ರಾಜ್ಯದ ಅಧಿಕಾರಿಗಳು ಕನಿಷ್ಠ 27 ದೇಶಗಳಿಗೆ ಭೇಟಿ ನೀಡಿದ್ದಾರೆ. ಇದರಲ್ಲಿ ಮರಕೇಶ್ (ಮೊರಾಕೊ), ಸಿಡ್ನಿಯ ಟ್ಯಾರೊಂಗಾ ಮೃಗಾಲಯ (ಆಸ್ಟ್ರೇಲಿಯಾ) ಮತ್ತು ಗ್ಯಾಬೊರೊನ್ (ಬೋಟ್ಸ್ವಾನಾ) ಅಂತಹ ಸ್ಥಳಗಳು ಸೇರಿವೆ.




