ಕನ್ನಡದ ಹಿರಿಯ ಕಥೆಗಾರ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಲಭಿಸಿದೆ.
ಸೋಮವಾರ ನವದೆಹಲಿಯಲ್ಲಿ ಅಕಾದೆಮಿಯು ಕನ್ನಡವೂ ಸೇರಿದಂತೆ ಒಟ್ಟು 24 ಭಾರತೀಯ ಭಾಷೆಗಳ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಪ್ರಶಸ್ತಿಯು 1 ಲಕ್ಷ ರೂ. ನಗದು ಬಹುಮಾನ, ತಾಮ್ರದ ಫಲಕ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿದೆ. ಇದೇ ಮಾರ್ಚ್ 31ರಂದು ನವದೆಹಲಿಯಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾದೆಮಿ ತಿಳಿಸಿದೆ.
ಕನ್ನಡ ವಿಭಾಗದ ಕೃತಿ ಆಯ್ಕೆಗಾಗಿ ರಚಿಸಲಾಗಿದ್ದ ತ್ರಿಸದಸ್ಯ ತೀರ್ಪುಗಾರರ ಮಂಡಳಿಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಜಯಲಲಿತ ಮತ್ತು ಸಹನಾ ಕಾಂತಬೈಲು ಕಾರ್ಯನಿರ್ವಹಿಸಿದ್ದರು. ಸುದೀರ್ಘ ಪರಿಶೀಲನೆಯ ಬಳಿಕ ಮಂಡಳಿಯು ನುಗಡೋಣಿ ಅವರ ಕೃತಿಯನ್ನು ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
‘ದಡ ಸೇರಿಸು ತಂದೆ’ ಅಮರೇಶ ನುಗಡೋಣಿ ಅವರ ಆರನೇ ಕಥಾಸಂಕಲನ. ಪಲ್ಲವ ಪ್ರಕಾಶನ 2020ರಲ್ಲಿ ಹೊರತಂದಿರುವ ಈ ಕೃತಿಯಲ್ಲಿ ಒಟ್ಟು ಎಂಟು ಕಥೆಗಳಿವೆ. ಮರ್ಯಾದಾ ಹತ್ಯೆ, ಗುಂಪು ಹಲ್ಲೆ (ಮಾಬ್ ಲಿಂಚಿಂಗ್) ಸೇರಿದಂತೆ ಸಮಕಾಲೀನ ಗ್ರಾಮೀಣ ಭಾರತದ ತಲ್ಲಣಗಳನ್ನು, ಸಮಾಜದಲ್ಲಿ ದಿನೇದಿನೇ ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಈ ಕಥೆಗಳು ಅತ್ಯಂತ ಮಾರ್ಮಿಕವಾಗಿ ಹಾಗೂ ನೈಜವಾಗಿ ಕಟ್ಟಿಕೊಡುತ್ತವೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನುಗಡೋಣಿಯವರಾದ ಲೇಖಕರು, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ‘ಸವಾರಿ’ ಕಥೆಯನ್ನಾಧರಿಸಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದ ‘ಕನಸೆಂಬ ಕುದುರೆಯನೇರಿ’ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿತ್ತು.
ಇತರೆ ಭಾಷೆಗಳ ಪುರಸ್ಕೃತರು:
ಕನ್ನಡದ ಜೊತೆಗೆ ಇಂಗ್ಲಿಷ್ (ಕ್ರಿಮ್ಸನ್ ಸ್ಪ್ರಿಂಗ್ – ಕಾದಂಬರಿ), ಮಲಯಾಳಂ (ಮಾಯಾಮನುಷ್ಯರ್ – ಕಾದಂಬರಿ), ಪಂಜಾಬಿ (ಸೇಫ್ಟಿ ಕಿಟ್ – ಕಥಾಸಂಕಲನ), ಬಂಗಾಳಿ (ಶ್ರೇಷ್ಠ ಕಬಿತಾ – ಕವಿತೆ), ಸಂಸ್ಕೃತ (ಪ್ರಸ್ಥಾನಚತುಷ್ಟಯೇ ಬ್ರಹ್ಮಘೋಷಃ), ತೆಲುಗು (ಅನಿಮೇಷ) ಹಾಗೂ ಉರ್ದು (ಸಫರ್ ಜಾರಿ ಹೈ) ಸೇರಿದಂತೆ ಒಟ್ಟು 24 ಭಾಷೆಗಳ ಸಾಹಿತಿಗಳಿಗೆ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಒಲಿದಿದೆ.





