ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಸಿಂಧೂರಿ ಅವರು ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ದೂರನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು, ರೂಪ ಅವರಿಗೆ ಸಾಮಾಜಿಕ ಪೋಸ್ಟ್ಗಳನ್ನು ತೆಗೆಯುವಂತೆ ಹೇಳಿ ಮುಂದಿನ ವಿಚಾರಣೆಯನ್ನು ಜನವರಿ 12, 2024 ಕ್ಕೆ ಮುಂದೂಡಿತು.
ವಿವಾದಿತ ಪೋಸ್ಟ್ಗಳನ್ನು ತೆಗೆದುಹಾಕುವ ಬಗ್ಗೆ ಡಿ ರೂಪಾ ಅವರ ಭರವಸೆಯನ್ನು ದಾಖಲಿಸಿದ ನ್ಯಾಯಾಲಯ, ಬಾಕಿ ಉಳಿದಿರುವ ವಿವಾದಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ಇಬ್ಬರೂ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿತು.
ಡಿಸೆಂಬರ್ 15 ರ ತನ್ನ ಆದೇಶದಲ್ಲಿ ಪೀಠವು, “ಕಕ್ಷಿದಾರರ ನಡುವೆ ಬಾಕಿ ಉಳಿದಿರುವ ಎಲ್ಲ ವಿವಾದಗಳನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂಬ ಅಂಶವನ್ನು ಪರಿಗಣಿಸಿ ವಾದಿ, ಪ್ರತಿವಾದಿ ಇಬ್ಬರು ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಕ್ಕೆ ಸಂದರ್ಶನ ಅಥವಾ ಮಾಹಿತಿಯನ್ನು ನೀಡಬಾರದು ಎಂದು ಸೂಚಿಸಿತು.
ಈ ಸುದ್ದಿ ಓದಿದ್ದೀರಾ? ಅಗತ್ಯ ವಸ್ತುಗಳ ಬೆಲೆ ಏರಿಕೆ: ಸರ್ಕಾರಕ್ಕೆ ಖರ್ಗೆ ತರಾಟೆ
ಯಾವುದೇ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ತೆಗೆದು ಹಾಕಲಾಗಿಲ್ಲ ಎಂದು ಕಂಡುಬಂದರೆ, ಅರ್ಜಿದಾರರ ವಕೀಲರಿಗೆ ಅದರ ಬಗ್ಗೆ ತಿಳಿಸಲಾಗುವುದು ಎಂದು ಸಿಂಧೂರಿ ಅವರ ವಕೀಲರಿಗೆ ಪೀಠ ತಿಳಿಸಿತು.
ಸಿಂಧೂರಿ ಅವರು ಸಲ್ಲಿಸಿರುವ ವಿಚಾರಣೆಯ ಪ್ರತಿಗಳನ್ನು ದಾಖಲೆಯಲ್ಲಿ ಇರಿಸುವಂತೆ ಪೀಠವು ಸೂಚಿಸಿದೆ. ಬಾಕಿ ಇರುವ ಸಿವಿಲ್ ಮೊಕದ್ದಮೆಯಲ್ಲಿ ರೂಪಾ ಅವರು ಸಲ್ಲಿಸಿದ ಅಫಿಡವಿಟ್ ಅನ್ನು ಸಲ್ಲಿಸಲು ಇದು ಅವಕಾಶ ಮಾಡಿಕೊಟ್ಟಿತು.
“ಈ ಮಧ್ಯೆ , ಈ ಅರ್ಜಿಯ ಕ್ರಿಮಿನಲ್ ಪ್ರಕರಣದ ವಿಷಯವಾಗಿ ಮುಂದೆ ಮುಂದುವರಿಯುವುದಿಲ್ಲ” ಎಂದು ಪೀಠ ಆದೇಶಿಸಿದೆ.
ರೂಪಾ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ವಾದ ಮಂಡಿಸಿದರೆ, ಸಿಂಧೂರಿ ಪರ ಹಿರಿಯ ವಕೀಲ ವಿನಯ್ ನವಾರೆ ವಾದ ಮಂಡಿಸಿದರು.
ಇಬ್ಬರು ಅಧಿಕಾರಿಗಳು ತಮ್ಮ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳದಿರುವುದು ಬೇಸರ ತಂದಿದೆ ಎಂದೂ ಪೀಠ ಈ ಸಂದರ್ಭದಲ್ಲಿ ಹೇಳಿದೆ.





