ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿರುವ ನಾಯಕತ್ವ ಬದಲಾವಣೆಯ ಸುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಸಾಮಾಜಿಕ ಜಾಲತಾಣದಲ್ಲಿ ಸಮರಕ್ಕೆ ಮುಂದಾಗಿದ್ದಾರೆ.
ಗುರುವಾರ ಬೆಳಿಗ್ಗೆ ಡಿ ಕೆ ಶಿವಕುಮಾರ್ ಅವರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ’ ಎನ್ನುವ ಪೋಸ್ಟರ್ ಎಲ್ಲಡೇ ವೈರಲ್ ಆಗುತ್ತಿದೆ. ಇದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಸಹ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.
“ನಮ್ಮ ಸುತ್ತಮುತ್ತಲ ಜಗತ್ತನ್ನು ಜನರ ಪಾಲಿಗೆ ಉತ್ತಮಗೊಳಿಸದೇ ಹೋದರೆ ನುಡಿಯೊಂದು ಅಧಿಕಾರ ಎನಿಸಿಕೊಳ್ಳಲಾಗದು. ಕರ್ನಾಟಕಕ್ಕೆ ನಾವು ನೀಡಿರುವ ವಾಗ್ದಾನವು ಕೇವಲ ಘೋಷಣೆಯಲ್ಲ, ಅದು ನಮ್ಮ ಪಾಲಿಗೆ ಸರ್ವಸ್ವವೂ ಆಗಿದೆ” ಎಂದು ಡಿ ಕೆ ಶಿವಕುಮಾರ್ ಪೋಸ್ಟ್ಗೆ ಪರೋಕ್ಷವಾಗಿ ಸಿದ್ದರಾಮಯ್ಯ ಕೌಂಟರ್ ಕೊಟ್ಟಂತೆ ಕಾಣುತ್ತಿದೆ.
“ಜನರಿಗೆ ಕೊಟ್ಟ ಮಾತನ್ನು ಎಷ್ಟು ಉಳಿಸಿಕೊಂಡಿದ್ದೇವೆ ಎಂಬುದೇ ಮುಖ್ಯ, ಅದರಲ್ಲಿ ತಾನು ಮುಂದಿದ್ದೇನೆ. ನಮ್ಮ ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಪ್ರವಾಸಗಳನ್ನು ನೀಡಿದೆ ಎಂದು ಘೋಷಿಸಲು ಹೆಮ್ಮೆಪಡುತ್ತೇನೆ. ಸರ್ಕಾರವನ್ನು ರಚಿಸಿದ ಮೊದಲ ತಿಂಗಳಿನಿಂದಲೇ, ನಾವು ನಮ್ಮ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಬರೀ ಪದಗಳಲ್ಲಿ ಅಲ್ಲ, ಕಾರ್ಯರೂಪದ ಮೇಲೆ” ಎಂದು ಸಿಎಂ ಬರೆದುಕೊಂಡಿದ್ದಾರೆ.
“ಶಕ್ತಿ ಯೋಜನೆಯಡಿ 600 ಕೋಟಿಗೂ ಹೆಚ್ಚು ಉಚಿತ ಪ್ರವಾಸಗಳು, ದುಡಿಯುವ ಮಹಿಳೆಯರಿಗೆ ಘನತೆ ಹೆಚ್ಚಿಸಿದೆ. ಗೃಹಲಕ್ಷ್ಮಿ ಯೋಜನೆ 1.24 ಕೋಟಿ ಕುಟುಂಬಗಳಿಗೆ ಆರ್ಥಿಕ ಸಬಲೀಕರಣ ನೀಡಿದೆ. ಯುವನಿಧಿ ಯೋಜನೆ 3 ಲಕ್ಷಕ್ಕೂ ಅಧಿಕ ಯುವಜನರಿಗೆ ಭದ್ರತೆ ಒದಗಿಸಿದೆ. ಅನ್ನಭಾಗ್ಯ ಯೋಜನೆ 4.8 ಕೋಟಿ ಕುಟುಂಬಗಳಿಗೆ ಆಹಾರ ಭದ್ರತೆ ನೀಡಿದೆ. ಗೃಹಜ್ಯೋತಿ ಯೋಜನೆ 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಕಲ್ಪಿಸಿದೆ” ಎಂದು ಸಿಎಂ ತಿಳಿಸಿದ್ದಾರೆ.
“ನಾನು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ (2013–18), 165 ಭರವಸೆಗಳಲ್ಲಿ 157 ಭರವಸೆಗಳನ್ನು ಈಡೇರಿಸಿದ್ದೇನೆ. ಈ ಅವಧಿಯಲ್ಲಿ, 593 ಭರವಸೆಗಳಲ್ಲಿ 243+ ಭರವಸೆಗಳು ಈಗಾಗಲೇ ಪೂರ್ಣಗೊಂಡಿವೆ ಮತ್ತು ಉಳಿದ ಪ್ರತಿಯೊಂದು ಭರವಸೆಯನ್ನು ಬದ್ಧತೆ, ವಿಶ್ವಾಸಾರ್ಹತೆ ಹಾಗೂ ಕಾಳಜಿಯೊಂದಿಗೆ ಈಡೇರಿಸುತ್ತೇನೆ” ಎಂದಿದ್ದಾರೆ.
“ಕರ್ನಾಟಕದ ಜನರು ನೀಡಿದ ಜನಾದೇಶವು ಒಂದು ಕ್ಷಣವಲ್ಲ, ಬದಲಾಗಿ ಐದು ವರ್ಷಗಳ ಕಾಲ ನಡೆಯುವ ಜವಾಬ್ದಾರಿಯಾಗಿದೆ. ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವು ನಮ್ಮ ಜನರ ಪರವಾಗಿ ಸಹಾನುಭೂತಿ, ಸ್ಥಿರತೆ ಮತ್ತು ಧೈರ್ಯದಿಂದ ಕಾರ್ಯನಿರ್ವಹಿಸುತ್ತಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ’ ಎನ್ನುವ ಪೋಸ್ಟರ್ ನನ್ನದಲ್ಲ ಎಂದು ಡಿ ಕೆ ಶಿವಕುಮಾರ್ ಮಾಧ್ಯಮಗಳಿಗೆ ಹೇಳಿದ್ದರು.ಆದರೆ ಈಗಲೂ ಆ ಪೋಸ್ಟ್ ಅವರ ಎಕ್ಸ್ ಖಾತೆಯಲ್ಲಿ ಹಾಗೇ ಉಳಿದಿದೆ. “ಜಗತ್ತಿನ ಅತಿದೊಡ್ಡ ಶಕ್ತಿ ಎಂದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ, ನಾನಾಗಲಿ, ಬೇರೆ ಯಾರೇ ಆಗಿರಲಿ ಎಲ್ಲರೂ ನುಡಿದಂತೆ ನಡೆಯಬೇಕು. ಮಾತು ಉಳಿಸಿಕೊಳ್ಳುವುದು ಮುಖ್ಯ” ಎಂಬ ಸಂದೇಶ ಡಿ ಕೆ ಶಿವಕುಮಾರ್ ಅವರ ಪೋಸ್ಟರ್ನಲ್ಲಿದೆ.





