ಬಿಹಾರ ಚುನಾವಣೆಯ ಫಲಿತಾಂಶ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ಗರಿಗೆದರಿವೆ. ಶನಿವಾರ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.
ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ದಟ್ಟವಾಗಿದ್ದು, ರಾಹುಲ್ ಗಾಂಧಿ ಅವರ ಜೊತೆ ಸಿದ್ದರಾಮಯ್ಯ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ. ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತೊಮ್ಮೆ ದೆಹಲಿಗೆ ಬಂದು ಎಐಸಿಸಿ ಅಧ್ಯಕ್ಷರ ಜೊತೆ ಚರ್ಚಿಸಿ, ಬಳಿಕ ಸಂಪುಟ ಪುನಾರಚನೆ ಮಾಡಿ ಅಂತ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರಂತೆ. ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದ ದಿನಾಂಕದಂದೇ ಸಚಿವ ಸಂಪುಟ ಪುನಾರಚನೆಗೆ ಮುಹೂರ್ತ ನೀಡಲಾಗಿದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, “ಬಿಹಾರ ಎಲೆಕ್ಷನ್ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಅಂತಾ ಹೇಳಿದ್ದೇವೆ. ಇವತ್ತಿನ ಮೀಟಿಂಗ್ ಅನ್ ಪ್ಲಾನ್ ಆಗಿತ್ತು” ಎಂದು ಹೇಳಿದರು.
“ನವೆಂಬರ್ ಕ್ರಾಂತಿ ಏನು? ಯಾವ ಕ್ರಾಂತಿಯೂ ಆಗುವುದಿಲ್ಲ. ನೀವು ಕೇಳ್ತಿದ್ದೀರಿ ಅಷ್ಟೇ. ಇದೆಲ್ಲ ಚರ್ಚೆ ಆಗುತ್ತಿರುವುದು ಮಾಧ್ಯಮದಲ್ಲಿ ಅಷ್ಟೇ” ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದುನ್ನು ತಿಳಿಸಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೂ ಮುನ್ನವೇ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಈ ಮೂಲಕ ರಾಜ್ಯದಲ್ಲಿ ಏನೆಲ್ಲ ಚರ್ಚೆಯಾಗುತ್ತಿದೆ? ಈ ಚರ್ಚೆಯನ್ನು ಹೇಗೆ ಜೀವಂತವಿಡಲಾಗಿದೆ? ಹೀಗೆ ಎಲ್ಲವನ್ನು ರಾಹುಲ್ ಗಾಂಧಿ ಗಮನಕ್ಕೆ ಸಿಎಂ ವಿವರಿಸಿರುವ ಸಾಧ್ಯತೆ ಹೆಚ್ಚಿದೆ.
ರಾಹುಲ್ ಗಾಂಧಿ ಭೇಟಿ ಸಿದ್ದರಾಮಯ್ಯ ಅವರಿಗೆ ಒಂದಿಷ್ಟು ಬಲ ತಂದಿರುತ್ತದೆ. ಸಂಪುಟ ಪುನಾರಚನೆ ಮೂಲಕ ಸಿಎಂ ಕುರ್ಚಿ ಮತ್ತೆ ಭದ್ರವಾಗುವ ಸಾಧ್ಯತೆಯೇ ಹೆಚ್ಚಿದೆ.
ಬಿಹಾರ ಫಲಿತಾಂಶ ರಾಹುಲ್ ಗಾಂಧಿಗೆ ತೀವ್ರ ಬೇಸರ!
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮಹಾಘಟಬಂಧನ್ ಹೀನಾಯವಾಗಿ ಸೋತಿದ್ದಕ್ಕೆ ರಾಹುಲ್ ಗಾಂಧಿ ಬೇಸರಿಸಿಕೊಂಡಿದ್ದಾರಂತೆ. ಈ ವಿಚಾರವಾಗಿ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಧೈರ್ಯ ಹೇಳಿ, “ಸೋಲಿನ ಬಗ್ಗೆ ಅತಿಯಾಗಿ ಬೇಸರ ಮಾಡಿಕೊಳ್ಳಬೇಡಿ. ಈ ವೇಳೆ ನಿಮ್ಮ ಜತೆ ನಾವಿದ್ದೇವೆ” ಎಂದು ಧೈರ್ಯ ತುಂಬಿದ್ದಾರಂತೆ.
ಬಿಹಾರದ ಚುನಾವಣೆ ಸೋಲಿನ ಬಳಿಕ ಕರ್ನಾಟಕ ಮಾತ್ರವಲ್ಲದೇ ತೆಲಂಗಾಣದ ಸಿಎಂ ಜೊತೆಗೂ ರಾಹುಲ್ ಗಾಂಧಿ ಚರ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಿ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
ಡಿ ಕೆ ಶಿವಕುಮಾರ್ ಸಹ ದೆಹಲಿ ಭೇಟಿ
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಇಂದು ರಾತ್ರಿ ಹೈಕಮಾಂಡ್ ನಾಯಕರನ್ನು ಅವರು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.





