ದಕ್ಷಿಣ ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಕಾನ್ಫಿಡೆಂಟ್ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಸಿ ಜೆ ರಾಯ್ ಶುಕ್ರವಾರ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಲಾಗಿದೆ.
ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ವಂಶಿಕೃಷ್ಣ ಮತ್ತು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ. ತಂಡದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಾಕೇ, ಹಲಸೂರು ಉಪ ವಿಭಾಗದ ಎಸಿಪಿ ಸುಧೀರ್, ಸಿಸಿಆರ್ಬಿ ಎಸಿಪಿ ರಾಮಚಂದ್ರ, ಅಶೋಕನಗರ ಇನ್ಸ್ಪೆಕ್ಟರ್ ಕೆ ಬಿ ರವಿ ಇದ್ದಾರೆ.
ಇದನ್ನು ಓದಿದ್ದೀರಾ? ಡಾ. ಸಿ ಜೆ ರಾಯ್ ಆತ್ಮಹತ್ಯೆ: ಸಮಗ್ರ ತನಿಖೆಗೆ ಕೇರಳ ಸಂಸದ ರಹೀಮ್ ಆಗ್ರಹ, ಮೋಹನ್ಲಾಲ್ ಸಂತಾಪ
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್ನ ಕಚೇರಿ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಸಿ ಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಾಯ್ ಮೂಲತಃ ಕೇರಳದವರಾದ ಕಾರಣ ಕೇರಳದಲ್ಲಿಯೂ ಈ ಪ್ರಕರಣ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಕೇಂದ್ರ ಸಂಸ್ಥೆಯ ಒತ್ತಡದಿಂದಾಗಿ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯಬೇಕು ಎಂದು ಕೇರಳ ಸಂಸದ, ಸಿಪಿಐಎಂ ನಾಯಕ ಎಎ ರಹೀಮ್ ಆಗ್ರಹಿಸಿದ್ದಾರೆ.
ಇದೀಗ ಎಸ್ಐಟಿ ತಂಡವು ಕೇಂದ್ರ ಸಂಸ್ಥೆಯ ಒತ್ತಡ, ತೆರಿಗೆ ವಂಚನೆ ಮೊದಲಾದ ಆಯಾಮಗಳಿಂದ ತನಿಖೆ ನಡೆಸಲಿದೆ. ರಾಯ್ ಮೊಬೈಲ್ ಫೋನ್, ಬ್ಯಾಂಕ್ ವಹಿವಾಟು ಎಲ್ಲವನ್ನೂ ಪರಿಶೀಲಿಸಲಿದೆ.





