ಧರ್ಮಸ್ಥಳದ ಸೌಜನ್ಯ ಅತ್ಯಾಚಾರಗೊಂಡು ಕೊಲೆಯಾದ ದಿನ ಅ. 9 ರಂದು ಸೌಜನ್ಯ ಮತ್ತು ಇತರ ಹೆಣ್ಣುಮಕ್ಕಳ ಅಸಹಜ ಸಾವಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ, ಪುಸ್ತಕ ಬಿಡುಗಡೆ, ಕ್ಯಾಂಡಲ್ ಲೈಟ್ ಬೆಳಗಿ ಸಂತಾಪ ಸೂಚಿಸುವುದು ಹೀಗೆ ಹಲವು ರೀತಿಯಲ್ಲಿ ನ್ಯಾಯಕ್ಕಾಗಿ ಜನಾಗ್ರಹ ಸಭೆಗಳು ನಡೆದು ರಾಜ್ಯದ ಗಮನ ಸೆಳೆದಿದೆ. ಹಲವು ಜಿಲ್ಲೆಗಳ ಸುಮಾರು 60 ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ʼಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆʼ ಈ ಪ್ರತಿಭಟನೆಯನ್ನು ಮುಂದಿನ ಒಂದು ವಾರ ನಡೆಸಲು ಕರೆ ಕೊಟ್ಟಿದೆ.
“ಸೌಜನ್ಯ ಜನ್ಮದಿನ ಅ.18ರವರೆಗೆ ನ್ಯಾಯಕ್ಕಾಗಿ ಜನಾಗ್ರಹ ಮುಂದುವರಿಯಲಿದೆ” ಎಂದು ವೇದಿಕೆಯ ಸಂಚಾಲಕರಲ್ಲಿ ಒಬ್ಬರಾದ ನವೀನ್ ಸೂರಿಂಜೆ ತಿಳಿಸಿದ್ದಾರೆ. ಇದೇ 17 ಉಡುಪಿಯಲ್ಲಿ ದೊಡ್ಡ ಮಟ್ಟದ ಜನಾಗ್ರಹ ಸಮಾವೇಶ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸೆ. 9 ರಂದು ಬೆಂಗಳೂರಿನ ಹಲವೆಡೆ ಸೇರಿದಂತೆ, ಮಂಡ್ಯ, ಮೈಸೂರು, ಕೋಲಾರ, ಕಲಬುರ್ಗಿ, ದಾವಣಗೆರೆ, ಚಿತ್ರದುರ್ಗ, ಉಡುಪಿ, ಬೆಳ್ತಂಗಡಿ, ತುಮಕೂರು, ರಾಯಚೂರು, ಬಳ್ಳಾರಿ, ಹಾಸನ, ಕಾರವಾರ, ಹೊಸಪೇಟೆ, ಯಾದಗಿರಿ ಸೇರಿದಂತೆ ಹಲವು ಕಡೆಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ತಮ್ಮ ಅಹವಾಲು ಸಲ್ಲಿಸಿದರು. ಸೌಜನ್ಯ ಅತ್ಯಾಚಾರ ಪ್ರಕರಣದ ಮರುತನಿಖೆ ನಡೆಸಬೇಕು. ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳ ಸಮಗ್ರ ತನಿಖೆ ನಡೆದು ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.





